ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಇಂದು ಬೆಳಿಗ್ಗೆ ನಗರದ ಮಾರಿಕಾಂಬಾ ದೇವಸ್ಥಾನದಿಂದ ದೇವಿಯ ಮೂರ್ತಿಯನ್ನ ರಥದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಗದ್ದುಗೆಗೆ ತರಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಪ್ರಸಿದ್ದ ಮಾರಿಕಾಂಬಾ ಜಾತ್ರಾ ಮಹೋತ್ಸವ ಇಡೀ ರಾಜ್ಯದಲ್ಲಿಯೇ ಅತಿದೊಡ್ಡ ಜಾತ್ರಾ ಮಹೋತ್ಸವ ಎನ್ನುವ ಖ್ಯಾತಿ ಪಡೆದಿದೆ. ಸದ್ಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ನಿನ್ನೆಯಿಂದ ಆರಂಭವಾಗಿದ್ದು, ಇಂದು ಬೆಳಿಗ್ಗೆ ದೇವಿಯ ಮೂರ್ತಿಯನ್ನ ಮಾರಿಕಾಂಬ ದೇವಸ್ಥಾನದಿಂದ ರಥದ ಮೂಲಕ ಮೆರವಣಿಗೆಯಲ್ಲಿ ಗದ್ದುಗೆಗೆ ತರಲಾಯಿತು.
ರಥವನ್ನ ದೇವಸ್ಥಾನದಿಂದ ತರುವಾಗ ವಿವಿಧ ಕಲಾತಂಡಗಳು, ವಾದ್ಯಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಇನ್ನಷ್ಟು ರಂಗು ಹೆಚ್ಚಿಸಿದವು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು. ಅಲ್ಲದೇ ದೇವಿಗೆ ಹರಕೆಗೆ ತಂದಿದ್ದ ಕೋಳಿ, ಬಾಳೆಹಣ್ಣನ್ನ ದೇವಿಗೆ ಅರ್ಪಿಸಲಾಯಿತು.
ಮಾರಿಕಾಂಬಾ ಜಾತ್ರಾ ಮಹೋತ್ಸವ 9 ದಿನಗಳ ಕಾಲ ನಡೆಯಲಿದೆ. ಗದ್ದುಗೆ ಏರಿ ಕುಳಿತ ಮಾರಿಕಾಂಬೆಗೆ ಇಂದಿನಿಂದ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುವುದು. ಮಾರ್ಚ್ 4ರ ವರೆಗೆ ಜಾತ್ರೆ ನಡೆಯಲಿದೆ. ಅಲ್ಲದೇ ರಾಜ್ಯದ ಮೂಲೆ ಮೂಲೆಯಿಂದ ಬಂದಂತಹ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲಿದ್ದಾರೆ. ಈ ಬಾರಿ ವಾಹನಗಳಲ್ಲಿ ಭಕ್ತರು ಶಿರಸಿಗೆ ಆಗಮಿಸುವುದರಿಂದ ಟ್ರಾಫಿಕ್ ಸಮಸ್ಯೆ ಉದ್ಭವಿಸದಂತೆ ನಗರದ ಹೊರವಲಯದಲ್ಲಿ ವಾಹನಗಳನ್ನ ನಿಲ್ಲಿಸುವ ಸೌಕರ್ಯ ಕಲ್ಪಿಸಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿ ಜಾತ್ರೆಯನ್ನ ಅದ್ದೂರಿಯಾಗಿ ನೆರವೇರಿಸಲು ಸಕಲ ಸಿದ್ದತೆಯನ್ನ ಮಾಡಿಕೊಂಡಿದೆ. ಜಾತ್ರೆಗೆ ಬರುವ ಭಕ್ತರಿಗೆ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಸಿಸಿಟಿವಿ ಮೂಲಕ ಹದ್ದಿನ ಕಣ್ಣಿಡಲಾಗಿದೆ.
ಶಿರಸಿ ಮಾರಿಕಾಂಬಾ ಜಾತ್ರೆಯ ಮತ್ತೊಂದು ವಿಶೇಷವೆಂದರೆ ಇಲ್ಲಿ ಬೂದುಕುಂಬಳ ಕಾಯಿಯನ್ನ ಬಲಿಯಾಗಿ ನೀಡುವ ಮೂಲಕ ಪ್ರಾಣಿ ಬಲಿಯನ್ನ ವಿರೋಧಿಸಲಾಗುತ್ತದೆ. ಎಂದಿನಂತೆ ಈ ಬಾರಿ ಸಹ ಸಂಪ್ರದಾಯದಂತೆ ಗದ್ದುಗೆ ಮುಂದೆ ಬೂದು ಕುಂಬಳ ಕಾಯಿಯನ್ನ ಬಲಿ ನೀಡಲಾಯಿತು.
ಒಟ್ಟಿನಲ್ಲಿ ಶಿರಸಿಯಲ್ಲಿ ಈಗ ಜಾತ್ರೆಯ ಸಂಭ್ರಮ ಮುಗಿಲು ಮುಟ್ಟಿದ್ದು, ಭಕ್ತರು ಶಿರಸಿಯತ್ತ ತಂಡೋಪಾದಿಯಲ್ಲಿ ಆಗಮಿಸುವ ಮೂಲಕ ದೇವಿ ದರ್ಶನ ಪಡೆಯಲು ಮುಗಿ ಬೀಳುತ್ತಿದ್ದಾರೆ.
