ಇಂಡಿಯನ್ ಪ್ರೀಮಿಯರ್ ಲೀಗ್ನ 27ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್ನ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯಲಿದ್ದಾರಾ? ಎಂಬುದೇ ಪ್ರಶ್ನೆ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಧೋನಿ ಒಂದೇ ಒಂದು ಪಂದ್ಯವಾಡಿಲ್ಲ. ಇದೀಗ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅವರು ಆಡುವ ಸಾಧ್ಯತೆ ತೀರಾ ಕಡಿಮೆ ಎಂದು ವರದಿಯಾಗಿದೆ.
ಗಾಯದ ಸಮಸ್ಯೆ:
ಸೀಸನ್ ಆರಂಭಕ್ಕೂ ಮುನ್ನ ತರಬೇತಿಯ ಅವಧಿಯಲ್ಲಿ ಉಂಟಾದ ಸ್ನಾಯು ಸೆಳೆತದಿಂದ (Calf Strain) ಧೋನಿ ಬಳಲುತ್ತಿದ್ದಾರೆ. ಇದೇ ಕಾರಣದಿಂದ ಅವರು ಈ ಆವೃತ್ತಿಯ ಮೊದಲ ಐದು ಪಂದ್ಯಗಳಿಂದ ಹೊರಗುಳಿದಿದ್ದರು. ಇಂದಿನ ಪಂದ್ಯಕ್ಕಾಗಿ ಅವರು ತಂಡದೊಂದಿಗೆ ಹೈದರಾಬಾದ್ಗೆ ಪ್ರಯಾಣಿಸಿದ್ದಾರಾದರೂ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ:
ಶುಕ್ರವಾರ ಸಂಜೆ ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಅವರು ಲಯಬದ್ಧವಾಗಿ ಬ್ಯಾಟ್ ಬೀಸುತ್ತಿರುವುದು ಅಭಿಮಾನಿಗಳಲ್ಲಿ ಆಶಾವಾದ ಮೂಡಿಸಿದೆಯಾದರೂ, ಟೂರ್ನಿಯ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು ಮ್ಯಾನೇಜ್ಮೆಂಟ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ.
ಧೋನಿ ಬದಲು ಯಾರು?
ಧೋನಿ ಅವರ ಗೈರುಹಾಜರಿಯಲ್ಲಿ ಕೇರಳದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ. ಪ್ರಸ್ತುತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಚೆನ್ನೈ ತಂಡಕ್ಕೆ ಇಂದಿನ ಪಂದ್ಯ ಗೆಲ್ಲುವುದು ಅತ್ಯಂತ ಅವಶ್ಯಕವಾಗಿದೆ.
ವಾಪಸಾತಿ ಯಾವಾಗ?
ಮೂಲಗಳ ಪ್ರಕಾರ, ಏಪ್ರಿಲ್ 23 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಮೂಲಕ ಧೋನಿ ಮೈದಾನಕ್ಕೆ ಮರಳುವ ಸಾಧ್ಯತೆಯಿದೆ. ಹೀಗಾಗಿ ಥಲಾ ಕಂಬ್ಯಾಕ್ಗಾಗಿ ಸಿಎಸ್ಕೆ ಅಭಿಮಾನಿಗಳು ಮತ್ತಷ್ಟು ದಿನಗಳು ಕಾಯಬೇಕಾಗಿ ಬರಬಹುದು.
ಇದನ್ನೂ ಓದಿ: ದಿಗ್ಗಜರ ದಾಖಲೆಯೇ ಉಡೀಸ್: ಹೊಸ ಚರಿತ್ರೆ ಬರೆದ ಸ್ಮೃತಿ ಮಂಧಾನ
