Tv9 Kannada News Live: ಕರ್ನಾಟಕದಲ್ಲಿ ಹಿಜಾಬ್ ಕಿಚ್ಚು, ಮೇ 17ರವರೆಗೆ ಮಳೆ, 2 ದಿನ ವರ್ಕ್ ಫ್ರಂ ಹೋಂ ಘೋಷಿಸಿದ ಸರ್ಕಾರ – Kannada News | TV9 Kannada News Live: Karnataka Hijab Controversy, Rain Alert Till May 17, Delhi Govt Announces 2 Day Work From Home

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 14: ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಹಿಜಾಬ್ ದಂಗಲ್ (hijab controversy) ಇದೀಗ ಕರ್ನಾಟಕದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಶಾಲಾ, ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅವಕಾಶ ನೀಡಲಾಗಿದ್ದು, ಆ ಮೂಲಕ ಬಿಜೆಪಿ (bjp) ಕಾಲದ ಸಮವಸ್ತ್ರ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇನ್ನು ಈ ಹಿಜಾಬ್ ನಿಷೇಧ ತೆರವು ಆದೇಶಕ್ಕೆ ಬಿಜೆಪಿ ನಾಯಕರು ನಿಗಿನಿಗಿ ಎನ್ನುತ್ತಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಪೋಷಕರ ವಲಯದಲ್ಲಿ ಕೂಡ ಈ ಬಗ್ಗೆ ವಿರೋಧ ಕೇಳಿ ಬಂದಿದೆ.

ರಾಜ್ಯದಲ್ಲಿ ತಣ್ಣಾಗಿದ್ದ ಹಿಜಾಬ್ ಕಿಚ್ಚು ಮತ್ತೆ ಸ್ಫೋಟಗೊಂಡಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರವೇ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದೆ. ಶಾಲೆಗಳಲ್ಲಿ ಘರ್ಷಣೆಗಳಾದರೆ ಸರ್ಕಾರವೇ ಹೊಣೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಮರ್ಥನೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರು ಸಿಎಂ ಸಿದ್ದರಾಮಯ್ಯ, ಇದು ಕೇವಲ ಹಿಜಾಬ್‌ಗೆ ಮಾತ್ರ ಸೀಮಿತವಲ್ಲ. ಜನಿವಾರ, ರುದ್ರಾಕ್ಷಿ, ಶಿವದಾರದಂತಹ ಸಾಂಪ್ರದಾಯಿಕ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಸಹ ಮುಕ್ತ ಅವಕಾಶವಿದೆ ಎಂದಿದ್ದಾರೆ. ಆ ಮೂಲಕ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಕಾರ್ಯಕ್ರಮದ ಮೂರನೇ ಹಂತವನ್ನು ಘೋಷಿಸಿದೆ. ಜನಗಣತಿಯ ಮನೆ ಪಟ್ಟಿಯ ಕಾರ್ಯದೊಂದಿಗೆ ಸಮನ್ವಯ ಸಾಧಿಸುವ ಉದ್ದೇಶದಿಂದ ಈ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಈ ಹಂತದಲ್ಲಿ ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು ಅಂದಾಜು 36.73 ಕೋಟಿ ಮತದಾರರ ಮನೆಬಾಗಿಲಿಗೆ ತೆರಳಿ ಮಾಹಿತಿ ಪರಿಶೀಲಿಸಲಿದ್ದಾರೆ. ಕರ್ನಾಟಕವೊಂದರಲ್ಲೇ ಸುಮಾರು 59,050 ಬಿಎಲ್‌ಒಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, ಮತದಾರರ ಪಟ್ಟಿಯ ಪಾರದರ್ಶಕತೆಗಾಗಿ ರಾಜಕೀಯ ಪಕ್ಷಗಳ ಏಜೆಂಟ್‌ಗಳೂ ಸಹಕರಿಸಲಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಇಡೀ ದೇಶವನ್ನು ಈ ಹಂತವು ಒಳಗೊಳ್ಳಲಿದೆ.

ದೆಹಲಿ ಸರ್ಕಾರದ ದಿಟ್ಟ ಹೆಜ್ಜೆ: ವಾರದಲ್ಲಿ 2 ದಿನ ‘ವರ್ಕ್ ಫ್ರಮ್ ಹೋಮ್’, ‘ನೋ ಕಾರ್ ಡೇ’ ಜಾರಿ

ಪರಿಸರ ಮಾಲಿನ್ಯ ನಿಯಂತ್ರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಓಗೊಟ್ಟಿರುವ ದೆಹಲಿ ಸರ್ಕಾರವು ಮಹತ್ವದ ಕ್ರಮಗಳನ್ನು ಘೋಷಿಸಿದೆ. ರಾಜಧಾನಿಯಲ್ಲಿ ವಾಹನ ದಟ್ಟಣೆ ಮತ್ತು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವಾರದಲ್ಲಿ ಎರಡು ದಿನಗಳ ಕಾಲ ‘ವರ್ಕ್ ಫ್ರಮ್ ಹೋಮ್’ ಸೌಲಭ್ಯವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರೊಂದಿಗೆ ಕಚೇರಿಗಳಲ್ಲಿ ಆನ್‌ಲೈನ್ ಮೀಟಿಂಗ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.

ಇನ್ನೂ ಓದಿ: Tv9 Kannada News Live: ಹೇಳಿದಂತೆ ಗುಡ್​​ನ್ಯೂಸ್​​ ಕೊಟ್ಟ ಡಿಕೆಶಿ, ಕೇರಳದಲ್ಲಿ ಕಾಂಗ್ರೆಸ್​​ಗೆ ಕಸಿವಿಸಿ; ಈ ಹೊತ್ತಿನ ಟಾಪ್​​ 5 ಸುದ್ದಿಗಳು ಇಲ್ಲಿವೆ

ಮಾಲಿನ್ಯದ ಮಟ್ಟವನ್ನು ತಗ್ಗಿಸುವ ಉದ್ದೇಶದಿಂದ ವಾರದಲ್ಲಿ ಒಂದು ದಿನವನ್ನು ‘ನೋ ಕಾರ್ ಡೇ’ ಎಂದು ಆಚರಿಸಲು ನಿರ್ಧರಿಸಲಾಗಿದ್ದು, ಅಂದು ಸಾರ್ವಜನಿಕರು ಮತ್ತು ಅಧಿಕಾರಿಗಳು ಖಾಸಗಿ ಕಾರುಗಳ ಬದಲಿಗೆ ಸಾರ್ವಜನಿಕ ಸಾರಿಗೆ ಅಥವಾ ಸೈಕಲ್ ಬಳಸುವಂತೆ ಉತ್ತೇಜಿಸಲಾಗುತ್ತಿದೆ. ಪ್ರಧಾನಿಯವರ ನನ್ನ ಭಾರತ, ನನ್ನ ಕೊಡುಗೆ ಅಭಿಯಾನದ ಭಾಗವಾಗಿ ಈ ಯೋಜನೆಗಳನ್ನು ರೂಪಿಸಲಾಗಿದೆ.

ಮೇ 15ರಿಂದ ಮೂರು ದಿನಗಳ ಕಾಲ ವರುಣನ ಆರ್ಭಟ ಸಾಧ್ಯತೆ

ಮೇ 15ರಿಂದ ಮೇ 17ರವರೆಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದ್ದು, ನಗರದ ಹಲವೆಡೆ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಸಾಧಾರಣದಿಂದ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ವರುಣನ ಅಬ್ಬರ: ವಿಮಾನಗಳನ್ನ ಇಳಿಯಲು ಬಿಡದೇ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿಯೂ ಮಳೆ ಮುನ್ಸೂಚನೆ ನೀಡಲಾಗಿದ್ದು, ತಗ್ಗು ಪ್ರದೇಶಗಳಲ್ಲಿರುವ ಜನರು ಹಾಗೂ ವಾಹನ ಸವಾರರು ಜಾಗರೂಕತೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಇನ್ನು ಮಳೆ ಜೊತೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On – 8:21 pm, Thu, 14 May 26

Source link

Leave a Reply

Your email address will not be published. Required fields are marked *