ವೈಕುಂಠ ಏಕಾದಶಿ 2025 ರ ಹಿನ್ನೆಲೆಯಲ್ಲಿ ದೇಶಾದ್ಯಂತ ಪೂಜೆ ಮತ್ತು ಪುನಸ್ಕಾರದ ಸಡಗರ ಆವರಿಸಿದೆ. ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಿಗೆ ಭಕ್ತ ಸಾಗರವೇ ಹರಿದುಬರುತ್ತಿದೆ. ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದ ಶ್ರೀನಿವಾಸ ದೇಗುಲಗಳಲ್ಲಿ ಹಬ್ಬದ ಕಳೆಗಟ್ಟಿದೆ. ಭಕ್ತರು ‘ಗೋವಿಂದ’ ನಾಮಸ್ಮರಣೆ ಮಾಡುತ್ತಾ ಭಕ್ತಿಯಿಂದ ವೈಕುಂಠ ಏಕಾದಶಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನ ಅಮೃತ ನಗರದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಚಳಿಯನ್ನು ಲೆಕ್ಕಿಸದೆ ದೇವರ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿದ್ದಾರೆ.