ಭಾರತೀಯ ಸಂಪ್ರದಾಯದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಮನೆಯನ್ನು ಗುಡಿಸಿ, ಒರೆಸುವುದು ಒಂದು ಅವಿಭಾಜ್ಯ ಆಚರಣೆ. ಇದು ಕೇವಲ ಕಸ, ಧೂಳನ್ನು ತೆಗೆಯುವ ಕೆಲಸವಲ್ಲ, ಬದಲಾಗಿ ಮನೆಯ ಶಕ್ತಿ ಮತ್ತು ಆರ್ಥಿಕ ಯೋಗಕ್ಷೇಮದ ಮೇಲೆ ನೇರ ಪರಿಣಾಮ ಬೀರುವ ಕ್ರಿಯೆಯಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಮನೆಯನ್ನು ಹೇಗೆ ಮತ್ತು ಯಾವ ಸಮಯದಲ್ಲಿ ಸ್ವಚ್ಛಗೊಳಿಸುತ್ತೇವೆ ಎಂಬುದು ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ. ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಈ ಕೆಳಗಿನ ಪ್ರಮುಖ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.
ಸರಿಯಾದ ಸಮಯದಲ್ಲಿ ಶುಚಿಗೊಳಿಸುವಿಕೆ:
ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯೋದಯದ ನಂತರದ ಬೆಳಗಿನ ಸಮಯವು ಮನೆಯನ್ನು ಸ್ವಚ್ಛಗೊಳಿಸಲು ಅತ್ಯಂತ ಪ್ರಶಸ್ತವಾದ ಕಾಲ. ಬೆಳಿಗ್ಗೆ ಬೇಗನೆ ಮನೆಯನ್ನು ಅಚ್ಚುಕಟ್ಟಾಗಿ ಇಡುವುದರಿಂದ ನಕಾರಾತ್ಮಕ ಶಕ್ತಿಯು ಹೊರಹೋಗಿ, ಇಡೀ ದಿನ ಮನೆ ಉಲ್ಲಾಸದಿಂದ ಕೂಡಿರುತ್ತದೆ. ಅನೇಕರು ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಮನೆಯನ್ನು ಗುಡಿಸುತ್ತಾರೆ, ಆದರೆ ಶಾಸ್ತ್ರಗಳ ಪ್ರಕಾರ ಇದು ಅಶುಭ. ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸುವುದರಿಂದ ಆರ್ಥಿಕ ತೊಂದರೆಗಳು ಎದುರಾಗಬಹುದು ಮತ್ತು ಮನೆಯಲ್ಲಿರುವ ಧನಾತ್ಮಕ ಶಕ್ತಿ ಕಡಿಮೆಯಾಗಬಹುದು ಎಂದು ನಂಬಲಾಗಿದೆ.
ಪೊರಕೆಯನ್ನು ಇಡುವ ಸರಿಯಾದ ಕ್ರಮ:
ಮನೆ ಸ್ವಚ್ಛಗೊಳಿಸುವ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಎಲ್ಲರಿಗೂ ಕಾಣುವಂತೆ ಮುಂಬಾಗಿಲಿನ ಬಳಿ ಅಥವಾ ತೆರೆದ ಪ್ರದೇಶದಲ್ಲಿ ಇಡುವುದು ದೊಡ್ಡ ತಪ್ಪು. ಇದು ಮನೆಯಲ್ಲಿ ಉದ್ವಿಗ್ನತೆ ಮತ್ತು ಸಂಘರ್ಷವನ್ನು ಉಂಟುಮಾಡಬಹುದು. ವಾಸ್ತು ಪ್ರಕಾರ, ಪೊರಕೆಯನ್ನು ಯಾವಾಗಲೂ ಮನೆಯ ನೈಋತ್ಯ ದಿಕ್ಕಿನಲ್ಲಿ (South-West) ಕಣ್ಣಿಗೆ ಕಾಣದಂತೆ ಅಡಗಿಸಿಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿ ನೆಲೆಸುತ್ತದೆ.
ಮುಖ್ಯ ದ್ವಾರದ ಬಳಿ ಕಸ ಸಂಗ್ರಹಿಸಬೇಡಿ:
ಮನೆಯ ಮುಖ್ಯ ಬಾಗಿಲು ಸಕಾರಾತ್ಮಕ ಶಕ್ತಿಯು ಪ್ರವೇಶಿಸುವ ದ್ವಾರವಾಗಿದೆ. ಆದರೆ ಅನೇಕರು ಮನೆಯನ್ನು ಗುಡಿಸಿದ ನಂತರ ಕಸವನ್ನು ಮುಖ್ಯ ಬಾಗಿಲಿನ ಪಕ್ಕದಲ್ಲೇ ರಾಶಿ ಹಾಕುತ್ತಾರೆ ಅಥವಾ ಅಲ್ಲಿಯೇ ಬಿಡುತ್ತಾರೆ. ಇದು ಮನೆಯೊಳಗೆ ಬರುವ ಶುಭ ಶಕ್ತಿಗಳಿಗೆ ತಡೆಯೊಡ್ಡುತ್ತದೆ. ಕಸವನ್ನು ಯಾವಾಗಲೂ ತಕ್ಷಣವೇ ಕಸದ ಬುಟ್ಟಿಗೆ ಹಾಕಿ ವಿಲೇವಾರಿ ಮಾಡುವುದು ಆರ್ಥಿಕ ಅಭಿವೃದ್ಧಿಗೆ ಪೂರಕ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಒದ್ದೆಯಾದ ಮಾಪ್ಗಳ ಬಗ್ಗೆ ಇರಲಿ ಎಚ್ಚರ:
ನೆಲ ಒರೆಸಿದ ನಂತರ ಒದ್ದೆಯಾದ ಬಟ್ಟೆ ಅಥವಾ ಮಾಪ್ಗಳನ್ನು ಮನೆಯ ಮೂಲೆಗಳಲ್ಲಿ ಹಾಗೆಯೇ ಬಿಡುವ ಅಭ್ಯಾಸ ಹಲವರಿಗಿದೆ. ಈ ಒದ್ದೆಯಾದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಮತ್ತು ಮನೆಯಲ್ಲಿ ಅಹಿತಕರ ವಾಸನೆ ಹಾಗೂ ತೇವಾಂಶವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಸ್ವಚ್ಛಗೊಳಿಸಿದ ನಂತರ ಮಾಪ್ಗಳನ್ನು ಚೆನ್ನಾಗಿ ತೊಳೆದು ಒಣಗಲು ಬಿಡುವುದು ಆರೋಗ್ಯ ಮತ್ತು ವಾಸ್ತು ಎರಡೂ ದೃಷ್ಟಿಯಿಂದ ಉತ್ತಮ.
ವಾರದ ದಿನಗಳ ಮಹತ್ವ:
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಗುರುವಾರದಂದು ಮನೆಯನ್ನು ಆಳವಾಗಿ ಶುಚಿಗೊಳಿಸುವುದು ಅಥವಾ ನೆಲ ಒರೆಸುವುದನ್ನು ತಪ್ಪಿಸಬೇಕು, ಏಕೆಂದರೆ ಈ ದಿನವನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಶುಕ್ರವಾರದಂದು ಮನೆ ಸ್ವಚ್ಛಗೊಳಿಸುವುದು ಬಹಳ ವಿಶೇಷ. ಶುಕ್ರವಾರದ ಸ್ವಚ್ಛತೆಯು ಮನೆಯಲ್ಲಿ ಶಿಸ್ತು, ಸಂತೋಷ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ