
ಅಯೋಧ್ಯೆ ಸೇರಿದಂತೆ ದೇಶಾದ್ಯಂತ ಶ್ರೀ ರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನೂತನ ರಾಮ ಮಂದಿರದಲ್ಲಿ ಬಾಲರಾಮಲಲ್ಲಾನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಸ್ಪರ್ಶಿಸಿ, ಸೂರ್ಯ ತಿಲಕವಿಟ್ಟಂತೆ ಭಾಸವಾದ ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಾಕ್ಷಿಯಾಯಿತು. ಈ ಅದ್ಭುತ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ
ರಾಮಲಲ್ಲಾನ ವಿಗ್ರಹದ ಹಣೆಗೆ ಸೂರ್ಯನ ಕಿರಣಗಳು ಬೀಳುವಂತೆ ವಿಶೇಷ ವಾಸ್ತು ವಿನ್ಯಾಸ ಮಾಡಲಾಗಿದೆ. ಐಐಟಿ, ಭಾರತೀಯ ತಂತ್ರಜ್ಞಾನ ಸಂಸ್ಥೆ ವಿಜ್ಞಾನಿಗಳು ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನ ತಜ್ಞರು ಜಂಟಿಯಾಗಿ ಈ ಆಪ್ಟೋ-ಮೆಕ್ಯಾನಿಕಲ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಮಂದಿರದ ಶಿಖರದ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಕನ್ನಡಿಗಳು ಮತ್ತು ಲೆನ್ಸ್ಗಳ ಮೂಲಕ ಸೂರ್ಯನ ಬೆಳಕು ಗರ್ಭಗುಡಿಯನ್ನು ಪ್ರವೇಶಿಸಿ, ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಬಾಲರಾಮನ ಹಣೆಯ ಮೇಲೆ 58 ಮಿಲಿಮೀಟರ್ ಗಾತ್ರದ ತಿಲಕವಾಗಿ ಗೋಚರಿಸಿತು.
51 ಇಂಚು ಎತ್ತರದ ಬಾಲರಾಮನ ವಿಗ್ರಹವನ್ನು ನಮ್ಮ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಶಿಲೆಯಲ್ಲಿ ಕೆತ್ತಿದ್ದಾರೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಮಧ್ಯಾಹ್ನ 12 ಗಂಟೆಗೆ ಜನಿಸಿದನು ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ, ಪ್ರತಿ ವರ್ಷ ರಾಮನವಮಿಯಂದು ಇದೇ ರೀತಿ ಸೂರ್ಯ ತಿಲಕವು ಗೋಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇದು ಆಧುನಿಕ ವಿಜ್ಞಾನ ಮತ್ತು ಪ್ರಾಚೀನ ಸಂಪ್ರದಾಯದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ