
ಬೆಂಗಳೂರು, ಮಾರ್ಚ್ 22: ಬೆಂಗಳೂರು (Bengaluru) ಅಂದ್ರೆ ದುಬಾರಿ. ಈ ಬಾಡಿಗೆ ಮನೆ ವಿಷ್ಯದಲ್ಲಿ ಕೇಳುವುದೇ ಬೇಡ. ಸಿಗೋ ಅಲ್ಪ ಸಂಬಳದಲ್ಲಿ ಬಾಡಿಗೆ ಕಟ್ಟಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ ದುಡಿದದ್ದೆಲ್ಲವನ್ನು ಮನೆ ಮಾಲೀಕರ ಹೊಟ್ಟೆಗೆ ಹಾಕುವಂತಾಗಿದೆ. ಬೆಂಗಳೂರಿನ ನಿವಾಸಿಯೊಬ್ಬರು ಪ್ರತಿ ತಿಂಗಳು ಸುಮಾರು 40,000 ರೂ ಬಾಡಿಗೆಗೆ ಏಕೆ ಖರ್ಚು ಮಾಡುವೆ ಎಂದು ವಿವರಿಸಿದ್ದಾರೆ. ಇದೇ ವೇಳೆ ತನಗೆ ಬಾಡಿಗೆಗಿಂತ ಜೀವನದ ಅನುಭವ ಮುಖ್ಯ ಎಂದು ತಿಳಿಸಿದ್ದಾರೆ. ಈ ವ್ಯಕ್ತಿ ಹಂಚಿಕೊಂಡ ವಿಡಿಯೋ ಆನ್ಲೈನ್ನಲ್ಲಿ ಚರ್ಚೆ ಹುಟ್ಟುಹಾಕಿದೆ.
ಮಾಣಿಕ್ ಸಲಾರಿಯಾ (life_with_manik) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವಸತಿ ಆಯ್ಕೆಯನ್ನು ಪ್ರಶ್ನಿಸಿದ ಸಹೋದ್ಯೋಗಿಯೊಂದಿಗಿನ ವಿಡಿಯೋ ಹಂಚಿಕೊಂಡಿದ್ದಾರೆ. ನಾನು ಬೆಂಗಳೂರಿನಲ್ಲಿ ತಿಂಗಳಿಗೆ ಸುಮಾರು 40,000 ರೂ ಪಾವತಿಸುತ್ತೇನೆ. ಇತ್ತೀಚೆಗೆ ನನ್ನ ಸಹೋದ್ಯೋಗಿ ನೀವು ತುಂಬಾ ದೂರದಲ್ಲಿ ವಾಸಿಸುತ್ತಿದ್ದೀರಿ. ನೀವು ಹೆಚ್ಚು ಬಾಡಿಗೆ ಪಾವತಿಸುತ್ತಿದ್ದೀರಿ. ನೀವು ನಿಮ್ಮ ಹಣವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಹೇಳಿದ್ದರು. ಆ ಕ್ಷಣದಲ್ಲಿ ಜನರು ಬಾಡಿಗೆಯನ್ನು ಫ್ಲಾಟ್ನ ದೃಷ್ಟಿಕೋನದಿಂದ ಮಾತ್ರ ನೋಡುತ್ತಾರೆ ಎಂದು ನಾನು ಅರಿತುಕೊಂಡೆ. ಆದರೆ ನನ್ನ ಅಭಿಪ್ರಾಯ ಸ್ವಲ್ಪ ವಿಭಿನ್ನವಾಗಿದೆ ಎಂದು ವಿವರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ನಾನು ಬಾಡಿಗೆಯನ್ನು ಜೀವನಶೈಲಿಯಾಗಿ ನೋಡುತ್ತೇನೆ. ನಾನು ಜೀವನಶೈಲಿಗಾಗಿ ಖರ್ಚು ಮಾಡುತ್ತಿದ್ದೇನೆ. ನಾನು ಗೇಟೆಡ್ ಸೊಸೈಟಿಯಲ್ಲಿ ವಾಸಿಸುತ್ತಿದ್ದೇನೆ. ನೀವು ಪಡೆಯುವ ದೊಡ್ಡ ಪ್ರಯೋಜನವೆಂದರೆ ಇಲ್ಲಿ ಭದ್ರತೆ. ನೀವು ಪಡೆಯುವ ಎರಡನೇ ದೊಡ್ಡ ಪ್ರಯೋಜನವೆಂದರೆ ಕ್ಲಬ್ಹೌಸ್. ಈ ಕ್ಲಬ್ಹೌಸ್ನಲ್ಲಿ ಹಲವು ಸೌಲಭ್ಯಗಳಿವೆ. ನೀವು ಕ್ರೀಡೆಗಳನ್ನು ಆಡಬಹುದು, ಟೇಬಲ್ ಟೆನ್ನಿಸ್ ಆಡಬಹುದು, ಬ್ಯಾಡ್ಮಿಂಟನ್ ಆಡಬಹುದು, ಈಜಬಹುದು ಹಾಗೂ ಜಿಮ್ ಮಾಡಬಹುದು. ಹೊರಗೆ ಲಾನ್ ಟೆನ್ನಿಸ್ ಕೋರ್ಟ್ ಇರುತ್ತದೆ. ಬಹುತೇಕ ಪ್ರತಿ ವಾರ ನಾವು ಬಾಕ್ಸ್ ಕ್ರಿಕೆಟ್ ಆಡುತ್ತೇವೆ ಎಂದು ಹೇಳಿದ್ದಾರೆ.
ಇಲ್ಲಿನ ಪರಿಸರ ತುಂಬಾ ಸ್ವಚ್ಛ ಮತ್ತು ಹಸಿರಾಗಿದ್ದು, ಸಂಜೆ ನಡಿಗೆ, ಬೆಳಿಗ್ಗೆ ನಡಿಗೆ ಅನುಭವ ಪಡೆಯುತ್ತೇನೆ. ಅದು ಮನೆಯಂತೆ ಭಾಸವಾಗುತ್ತದೆ. ಇಲ್ಲಿನ ನಿವಾಸಿಗಳು ಜತೆ ಸೇರಿ ಪ್ರತಿಯೊಂದು ಹಬ್ಬವನ್ನು ತುಂಬಾ ಉತ್ಸಾಹದಿಂದ ಆಚರಿಸುತ್ತೇವೆ. ನಾವು ಇತ್ತೀಚೆಗೆ ಹೋಳಿ ಆಚರಿಸಿದೆವು. ಆದರೆ ನನಗೆ ಇದೆಲ್ಲದಕ್ಕಿಂತ ಮುಖ್ಯವಾದುದು ಏನು ಎಂದು ನಿಮಗೆ ತಿಳಿದಿದೆಯೇ? ನಾನು ಸಂಜೆ ಆಫೀಸಿನಿಂದ ಮನೆಗೆ ಬಂದಾಗ, ನಾನು ಮಾನಸಿಕವಾಗಿ ಕೆಲಸದಿಂದ ದೂರ ಸರಿಯಬಹುದು. ಹೌದು, ಪ್ರಯಾಣಕ್ಕಿಂತ ನನಗೆ ಸೌಕರ್ಯವೇ ಹೆಚ್ಚು ಇಷ್ಟ ಎಂದು ಹೇಳಿರುವುದನ್ನು ಕಾಣಬಹುದು.
ಇದನ್ನೂ ಓದಿ: ನನ್ನ ಜೀವನದ ತಪ್ಪು ನಿರ್ಧಾರ ಇದು; ಬಸವನಗುಡಿಯಿಂದ ಬೆಳ್ಳಂದೂರಿಗೆ ಸ್ಥಳಾಂತರಗೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ನಿವಾಸಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದುಡಿಯುವುದು ಖುಷಿಯಾಗಿರಲು, ಈ ಮಾತಿನಂತೆ ನೀವು ನಡೆದುಕೊಳ್ಳುತ್ತಿದ್ದೀರಾ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ನಿಜಕ್ಕೂ ಒಳ್ಳೆಯ ದೃಷ್ಟಿಕೋನ. ನೀವು ಅದನ್ನು ನಿಭಾಯಿಸಲು ಸಾಧ್ಯವಾದರೆ, ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿದರೆ ನಿಜಕ್ಕೂ ಯೋಗ್ಯವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ದುಡ್ಡು ಖರ್ಚು ಮಾಡಿದೆ ಯಾಕೆ ಅನ್ನೋದಕ್ಕಿಂತ, ಪಡೆದುಕೊಂಡದ್ದೇನು ಎಂದು ಅರಿಯುವುದು ಮುಖ್ಯ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ