ಬೆಂಗಳೂರು, ಜುಲೈ 02: ಓದು ಮುಗಿಯುತ್ತಿದ್ದಂತೆ ಕೆಲಸವೊಂದು ಸಿಕ್ಕಿ ಬಿಡಬೇಕು. ಕಡಿಮೆ ಸಂಬಳವಿದ್ರೂ ಸಮಸ್ಯೆಯಿಲ್ಲ. ಆದರೆ ಕೆಲಸ ಸಿಕ್ಕಿ ಒಂದಷ್ಟು ವರ್ಷಗಳು ಕಳೆಯುತ್ತಿದ್ದಂತೆ ಹೆಚ್ಚಿನ ಸಂಬಳದ ಕೆಲಸವನ್ನು ಹುಡುಕುತ್ತಾರೆ. ಆದರೆ ಬೆಂಗಳೂರಿನ (Bengaluru) ಯುವಕನಿಗೆ ಹಗಲು ರಾತ್ರಿ ನಿದ್ದೆಯಿಲ್ಲದೇ ದುಡಿದ್ರೂ ಕಂಪನಿ 2,000 ರೂ ಸಂಬಳ ಹೆಚ್ಚಳ ಮಾಡಿದೆ. ಹೀಗಾಗಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ತಮಟೆ ಬಾರಿಸಿ ಖುಷಿ ಪಟ್ಟಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.
ಹ್ಯೂಮನ್ಸ್ ಆಫ್ ಬಾಂಬೆ (Humans Off Bombay) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರಮೋದ್ ಪೌಲ್ ಎಂಬ ಯುವಕ ತನ್ನ ಅನುಭವವನ್ನು ಹಂಚಿಕೊಂಡಿದ್ದು, ಕೆಲಸಕ್ಕೆ ರಾಜೀನಾಮೆ ಕೊಟ್ಟಿರುವ ಬಗ್ಗೆ ಹೇಳಿಕೊಂಡಿದ್ದಾನೆ. ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಿದ್ರೂ, ಕೆಲಸಕ್ಕೆ ತಕ್ಕಂತೆ ಸಂಬಳವಿಲ್ಲ. ಈ ಕಾರಣಕ್ಕೆ ರಾಜೀನಾಮೆ ನೀಡಿದೆ. ಹಗಲು ರಾತ್ರಿ ನಿದ್ದೆ ಬಿಟ್ಟು ಆತಂಕ, ಖಿನ್ನತೆ ಅನುಭವಿಸಿದ್ದು ಯಾವ ಕಾರಣಕ್ಕಾಗಿ ಎಂಬುದು ಕೇವಲ 6% ಸಂಬಳ ಏರಿಕೆಗಾ ಎಂದು ತಿಳಿಯುತ್ತಿಲ್ಲ. ಆರು ಪರ್ಸೆಂಟ್ ಅಂದ್ರೆ ತಿಂಗಳಿಗೆ ಕೇವಲ 2,600 ರೂಪಾಯಿ ಜಾಸ್ತಿ ಆಗಿದೆ ಅಷ್ಟೇ ಎಂದು ಹೇಳಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ
ಕೆಲಸದ ಆತಂಕದಿಂದಾಗಿ ನಾನು ಸೈಕ್ಯಾಟ್ರಿಸ್ಟ್ರನ್ನು ಭೇಟಿಯಾದೆ. ಕನ್ಸಲ್ಟೇಷನ್ ಫೀಸ್ 2,000 ರೂಪಾಯಿ ಆಗಿತ್ತು. ಅವರು ನನ್ನನ್ನು ಸ್ಟ್ರೆಸ್ ಮ್ಯಾನೇಜ್ಮೆಂಟ್ ಥೆರಪಿಗೆ ಹೋಗಲು ಹೇಳಿದ್ರು. ಆ ಒಂದು ಸೆಷನ್ಗೆ 3,000 ರೂ. ವಾರ್ಷಿಕ ಸಂಬಳ ಹೆಚ್ಚಳಕ್ಕಿಂತ ಒಂದು ಥೆರಪಿ ಸೆಷನ್ನ ಖರ್ಚು ಹೆಚ್ಚಾಗಿದ್ದರೆ, ನೀವು ನಿಜವಾಗಿಯೂ ಸಂಕಷ್ಟದಲ್ಲಿದ್ದೀರಿ ಎನ್ನುವುದು ನೂರಕ್ಕೆ ನೂರರಷ್ಟು ಖಚಿತ ಎಂದಿದ್ದಾನೆ.
ನಮ್ಮ ಊರಿನಲ್ಲಿ ಚಹಾ ಮಾರುವವರು ತಿಂಗಳಿಗೆ 2 ಲಕ್ಷ ರೂಪಾಯಿವರೆಗೆ ಸಂಪಾದಿಸುವುದನ್ನು ನಾನು ನೋಡಿದ್ದೇನೆ. ಆದರೆ ನನ್ನದು ಮಾತ್ರ ಕಡಿಮೆ ಸಂಬಳದ ಕೆಲಸವಾಗಿದೆ. ಅದಲ್ಲದೇ ಕಾರ್ಪೊರೇಟ್ ಜೀವನದ ಬಗ್ಗೆ ತಮಾಷೆ ಮಾಡಿದೆ. ಅಮ್ಮನ ಜೊತೆ ವಿಡಿಯೋಗಳನ್ನು ಮಾಡಿದೆ. ಈ ವಿಡಿಯೋಗಳು ನನಗೆ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಆಯ್ತು. ಕಂಟೆಂಟ್ ಕ್ರಿಯೇಷನ್ ನಾನು ಮಾನಸಿಕ ಹಾಗೂ ಆರ್ಥಿಕವಾಗಿ ಗಟ್ಟಿಯಾಗುವಂತೆ ಮಾಡಿತು ಎಂದು ಹೇಳಿದ್ದಾನೆ.
ಅದಲ್ಲದೇ, ನಾನು ಸೀನಿಯರ್ ಅನಾಲಿಸ್ಟ್ನ ಕೆಲಸವನ್ನು ಮಾಡುತ್ತಿದ್ದೆ. ಆದರೆ ಅಪ್ರೈಸಲ್ ಸಮಯದಲ್ಲಿ ನನಗೆ ಕೇವಲ 2,000 ರೂ ಸಂಬಳವಷ್ಟೇ ಹೆಚ್ಚಳ ಮಾಡಿದ್ರು. ಹಾಗಾಗಿ ಹಿಂದೆ ಮುಂದೆ ನೋಡದೆ ಕೆಲಸಕ್ಕೆ ರಾಜೀನಾಮೆ ನೀಡಿದೆ. ಆದರೆ ಈಗ 3 ಲಕ್ಷ ರೂ ಸಾಲವಿದೆ. ಮಾನಸಿಕವಾದ ಹಿಂಸೆ ಹಾಗೂ ಶೋಷಣೆ ಸಹಿಸಿಕೊಂಡು ಇರುವುದು ಒಳ್ಳೆಯದಲ್ಲ ಎಂದು ಈ ನಿರ್ಧಾರಕ್ಕೆ ಬಂದೆ ಎಂದು ವಿವರಿಸಿದ್ದಾನೆ.
ಇದನ್ನೂ ಓದಿ: ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ನಂಗೆ ಖುಷಿಯಾಗಿದೆ; ಉದ್ಯೋಗಿ ಹೀಗೆಂದಿದ್ದೇಕೆ?
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಈ ನಿರ್ಧಾರ ನಿಮ್ಮ ಮನಸ್ಸಿಗೆ ಒಪ್ಪಿಗೆಯಾದರೆ ಸಾಕು ಎಂದಿದ್ದಾರೆ. ಇನ್ನೊಬ್ಬರು, ಹೆಚ್ಚು ಚಿಂತಿಸಬೇಡಿ, ಬೇರೆ ಕೆಲಸಕ್ಕೆ ನೋಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ರಾಜೀನಾಮೆ ನೀಡುವ ಧೈರ್ಯವನ್ನು ಮೆಚ್ಚಿಕೊಂಡೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ