ವಯನಾಡು, ಜುಲೈ 08: ಕೇರಳದ ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು ,ಐದು ಮಂದಿ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆ ಮೆಪ್ಪಾಡಿಯ ಸೇತುವೆ ಸಮೀಪ ನಡೆದಿದ್ದು, ಸ್ಥಳೀಯ ಹೋಟೆಲ್ ಮಾಲೀಕರು ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದಾರೆ.
ಭೂಕುಸಿತದ ಸಂದರ್ಭದಲ್ಲಿ ನೀರು ಮತ್ತು ಮಣ್ಣು ಮಿಶ್ರಿತ ರಭಸಕ್ಕೆ ಸಿಲುಕಿ ಬೃಹತ್ ಟ್ಯಾಂಕರ್ ಒಂದನ್ನು ಹೊತ್ತು ತಂದಿದೆ. ಘಟನೆ ನಡೆದ ಸ್ಥಳದಲ್ಲಿದ್ದ ಹೋಟೆಲ್ ಮಾಲೀಕರ ಸಿಸಿಟಿವಿ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯಗಳು ಸೆರೆಯಾಗಿವೆ. ಟ್ಯಾಂಕರ್ ಹೋಟೆಲ್ ಸಮೀಪವೇ ನಿಂತಿದ್ದರಿಂದ ದೊಡ್ಡ ಅನಾಹುತ ತಪ್ಪಿದ ಬಗ್ಗೆ ಮಾಲೀಕರು ವಿವರಿಸಿದ್ದಾರೆ.
ಅವರ ಪ್ರಕಾರ, ಭಾರೀ ಮಳೆಯಿಂದಾಗಿ ಮಣ್ಣು ಕುಸಿದು ನೀರು ಸೇರಿ ಹರಿದುಬಂದಿದೆ. ರಭಸಕ್ಕೆ ಸಿಲುಕಿದ ಒಬ್ಬ ಮಹಿಳೆ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದು, ಕೂಡಲೇ ಸ್ಥಳೀಯರ ನೆರವಿನಿಂದ ಪಾರಾಗಿದ್ದಾರೆ. ಘಟನೆಯ ಸಮಯದಲ್ಲಿ ಹೋಟೆಲ್ ಮಾಲೀಕರು ಮತ್ತು ಅವರ ಹತ್ತು ಮಂದಿ ಸಿಬ್ಬಂದಿ ಜೀವಭಯದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೇರಳದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಒಂದು ಬಸ್ ಉರುಳಿ ಬೀಳುವ ದೃಶ್ಯ, ಮತ್ತೊಂದು ಬೃಹತ್ ಟ್ಯಾಂಕರ್ ಅನ್ನು ಕೆಸರು ಮಿಶ್ರಿತ ನೀರು ಕೊಚ್ಚಿಕೊಂಡು ಬರುವ ದೃಶ್ಯ. ಈ ಟ್ಯಾಂಕರ್ ಅದೃಷ್ಟವಶಾತ್ ಹೋಟೆಲ್ನ ಸಮೀಪಕ್ಕೆ ಬಂದು ನಿಂತಿದ್ದು, ಮತ್ತೊಂದು ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂದು ಮಾಲೀಕರು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
