ಕನ್ನಡ ಚಿತ್ರರಂಗದಲ್ಲಿ ಅದ್ಭುತ ಯಶಸ್ಸು ಕಂಡಿದ್ದ ಹಿರಿಯ ನಟ ಮತ್ತು ನಿರ್ಮಾಪಕ ದ್ವಾರಕೀಶ್ ಅವರು, ಸಿನಿಮಾ ಮೇಲಿನ ಅತಿಯಾದ ಹುಚ್ಚು ಮತ್ತು ಕೆಲವು ಆತುರದ ತಪ್ಪು ನಿರ್ಧಾರಗಳಿಂದ ತಮಗಾದ ಆರ್ಥಿಕ ಕುಸಿತದ ಬಗ್ಗೆ ಈ ಹಿಂದೆ ಮುಕ್ತವಾಗಿ ಮಾತನಾಡಿದ್ದರು. 1988ರವರೆಗೆ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿದ್ದ ತಮಗೆ, ಇಂಗ್ಲಿಷ್ ಸಿನಿಮಾಗಳ ಪ್ರಭಾವದಿಂದಾಗಿ ಮೂಡಿದ ಹೊಸ ಸಾಹಸದ ಆಸೆಯೇ ಮುಂದೆ ದೊಡ್ಡ ಹಿನ್ನಡೆಗೆ ಕಾರಣವಾಯಿತು ಎಂದು ಅವರು ಒಪ್ಪಿಕೊಂಡಿದ್ದರು. ಈ ಬಗ್ಗೆ ಬಿ. ಗಣಪತಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು.
ತಮಗೆ ಆಫ್ರಿಕಾದ ಹಿನ್ನೆಲೆಯಲ್ಲಿ ಸಿನಿಮಾ ಮಾಡಬೇಕೆಂಬ ಹುಚ್ಚು ಆಸೆ ಚಿಗುರೊಡೆಯಲು ಇಂಗ್ಲಿಷ್ನ ‘ಫಾರೆಸ್ಟ್’ ಎಂಬ ಚಿತ್ರವೇ ಪ್ರೇರಣೆಯಾಗಿತ್ತು ಎಂದು ದ್ವಾರಕೀಶ್ ನೆನಪಿಸಿಕೊಂಡಿದ್ದರು. ತಮಗೆ ಇಂಗ್ಲಿಷ್ ಸಿನಿಮಾಗಳನ್ನು ನೋಡುವ ಹವ್ಯಾಸವಿದ್ದು, ಆ ಪ್ರಭಾವದಿಂದಾಗಿ ಕೀನ್ಯಾ ಸೇರಿದಂತೆ ಆಫ್ರಿಕಾದ ದಟ್ಟ ಕಾಡುಗಳಲ್ಲಿ ಅದ್ಧೂರಿ ಸಿನಿಮಾ ನಿರ್ಮಿಸುವ ಯೋಜನೆ ಹಾಕಿಕೊಂಡರು. ಆದರೆ, ಸೂಕ್ತ ಲೆಕ್ಕಾಚಾರವಿಲ್ಲದೆ ಕೇವಲ ಆಸೆಯ ಬೆನ್ನತ್ತಿ ಹೋದದ್ದು ತಮಗೆ ತಾವೇ ಮಾಡಿಕೊಂಡ ಅನ್ಯಾಯವಾಗಿ ಪರಿಣಮಿಸಿತು ಎಂದು ಅವರು ವಿಷಾದಿಸಿದ್ದರು.
ಆ ಸಮಯದಲ್ಲಿ ಹಣಕಾಸಿನ ನೆರವು ನೀಡಲು ವಿಜಯ ಬ್ಯಾಂಕ್ ಚೇರ್ಮನ್ ಸದಾನಂದ ಶೆಟ್ಟಿ ಅವರಂತಹ ದೊಡ್ಡ ದಾತರಿದ್ದರು. ಆದರೆ, ‘ಹನಿ ಹನಿ ಸೇರಿದರೆ ಹಳ್ಳ’ ಎನ್ನುವಂತೆ ಸ್ವಲ್ಪ ಸ್ವಲ್ಪವೇ ಪಡೆದ ಸಾಲ ಕೊನೆಗೆ 58 ಲಕ್ಷ ರೂಪಾಯಿಗಳ ಬೃಹತ್ ಮೊತ್ತವಾಗಿ ಬೆಳೆದು ನಿಂತಿತು. ಈ ಸಾಲವನ್ನು ತೀರಿಸಲು ದ್ವಾರಕೀಶ್ ಅವರು ತಮಿಳುನಾಡಿನ ಮದ್ರಾಸ್ನಲ್ಲಿದ್ದ ತಮ್ಮ ಸ್ವಂತ ಮನೆಯನ್ನೇ ಮಾರಬೇಕಾಯಿತು. ಜೊತೆಗೆ, ಇತರ ಸಿನಿಮಾಗಳಿಗೆ ಯೋಚಿಸದೆ ಫೈನಾನ್ಸ್ ಮಾಡಿ ಕೈಸುಟ್ಟುಕೊಂಡಿದ್ದರಿಂದ ಅವರ ಒಳ್ಳೆಯ ಸಮಯ ಮುಗಿದು, ಚಿತ್ರರಂಗದಲ್ಲಿ ತೆವಳಿಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಯಿಗಿತ್ತು.
ಇದನ್ನೂ ಓದಿ: ದ್ವಾರಕೀಶ್ ನಿರ್ಮಾಣದ ಸಿನಿಮಾದಲ್ಲಿ ನಟಿಸಬೇಕಿತ್ತು ವಿಷ್ಣು-ಶ್ರೀದೇವಿ; ಸಿನಿಮಾ ನಿಂತಿದ್ದೇಕೆ?
ಅಂತಿಮವಾಗಿ ಸಾಕಷ್ಟು ವೀಸಾ ಅಡೆತಡೆಗಳ ನಡುವೆ ಕೀನ್ಯಾ ಮತ್ತಿತರ ದೇಶಗಳಲ್ಲಿ ‘ಆಫ್ರಿಕಾದಲ್ಲಿ ಶೀಲಾ’ ಎಂಬ ಬಿಗ್ ಬಜೆಟ್ ಸಿನಿಮಾವನ್ನು ನಾಲ್ಕು ಭಾಷೆಗಳಲ್ಲಿ ನಿರ್ಮಿಸಿದರು. ಲಂಡನ್ನಲ್ಲಿ ಬಪ್ಪಿ ಲಹರಿ ಅವರ ಸಂಗೀತ ನಿರ್ದೇಶನದಲ್ಲಿ ಅದ್ಧೂರಿಯಾಗಿ ಹಾಡುಗಳ ರೆಕಾರ್ಡಿಂಗ್ ಕೂಡ ಮಾಡಿಸಲಾಗಿತ್ತು. ಆದರೆ, ನಾಯಕಿ ಸಹಿಲಾ ಚಡ್ಡಾ ತಮಗೆ ನಟನೆ ಬರುತ್ತದೆ ಎಂದು ಸುಳ್ಳು ಹೇಳಿದ್ದರಿಂದ ಮತ್ತು ಅವರ ಕಳಪೆ ನಟನೆಯಿಂದಾಗಿ ಕೋಟಿ ಕೋಟಿ ಸುರಿದು ಮಾಡಿದ ಆ ಸಾಹಸದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿ ಸೋತುಹೋಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
