ಉತ್ತರ ಪ್ರದೇಶ: ರಾಹುಲ್, ಪ್ರಿಯಾಂಕಾ, ಅಖಿಲೇಶ್ ಸಭೆ, ಮುಂಬರುವ ಅಸೆಂಬ್ಲಿ ಚುನಾವಣೆಯ ಸೀಟು ಹಂಚಿಕೆ ಲೆಕ್ಕಾಚಾರ ಶುರು – Kannada News | UP Assembly Elections: Rahul Akhilesh Meet for Alliance Seat Sharing Strategy

ನವದೆಹಲಿ, ಜುಲೈ 21: ಸಂಸತ್ ಮುಂಗಾರು ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷಗಳ ಅಂಗಳದಲ್ಲಿ ಭಾರಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಲೋಕಸಭೆ(Lok Sabha)ಯ ವಿರೋಧ ಪಕ್ಷದ ನಾಯಕಿಯ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದು, ಉತ್ತರ ಪ್ರದೇಶದ (UP) ಮುಂಬರುವ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯ ಝಲಕ್ ಕಾಣಿಸಿಕೊಂಡಿದೆ.

ಅಧಿವೇಶನದಲ್ಲಿ ‘ನೀಟ್ ಪೇಪರ್ ಸೋರಿಕೆ’ ಮತ್ತು ‘ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ’ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಗದ್ದಲದಿಂದಾಗಿ ಕಲಾಪ ಮುಂದೂಡಲ್ಪಟ್ಟ ತಕ್ಷಣ ಈ ಉನ್ನತ ಮಟ್ಟದ ಭೇಟಿ ನಡೆಯಿತು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಸದನ ಮುಂದೂಡಲ್ಪಟ್ಟಾಗ ನಾಯಕರು ಪರಸ್ಪರ ಭೇಟಿಯಾಗುವುದು ಸ್ವಾಭಾವಿಕ ಎಂದು ಸರಳವಾಗಿ ಹೇಳಿದರೂ, ಯುಪಿ ವಿಧಾನಸಭಾ ಚುನಾವಣೆಗೆ ಬಲವಾದ ‘ಇಂಡಿ’ (INDIA) ಒಕ್ಕೂಟದ ತಂತ್ರ ರೂಪಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿತ್ತು.

ಸೀಟು ಹಂಚಿಕೆಯ ‘ಲೆಕ್ಕಾಚಾರ’, ಕಾಂಗ್ರೆಸ್ ಬೇಡಿಕೆ ಹಾಗೂ ಎಸ್‌ಪಿ ನಿಲುವು
ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾಡುವುದು ಎರಡೂ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ. ಯುಪಿ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು ಸಮಾಜವಾದಿ ಪಕ್ಷದೊಂದಿಗೆ ಸಮಾನವಾಗಿ ಸೀಟು ಹಂಚಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಪ್ರಾಯೋಗಿಕವಾಗಿ ಕಾಂಗ್ರೆಸ್ ಸುಮಾರು 100 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.

2017 ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 105 ಸ್ಥಾನಗಳನ್ನು ನೀಡಲಾಗಿತ್ತು. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ 80 ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡಲು ಎಸ್‌ಪಿ ಸಿದ್ಧವಿಲ್ಲ. ಬರೀ ಸ್ಥಾನಗಳ ಸಂಖ್ಯೆ ಮುಖ್ಯವಲ್ಲ, ಬೂತ್ ಮಟ್ಟದಲ್ಲಿ ಹೋರಾಡಿ ಗೆಲ್ಲುವ ಸಾಮರ್ಥ್ಯವಿರುವ ಬಲವಾದ ಅಭ್ಯರ್ಥಿಗಳು ಮತ್ತು ತಳಮಟ್ಟದ ಕಾರ್ಯಕರ್ತರು ಇದ್ದರೆ ಮಾತ್ರ ಸೀಟು ಬಿಟ್ಟುಕೊಡಲಾಗುವುದು ಎಂಬುದು ಅಖಿಲೇಶ್ ಯಾದವ್ ಅವರ ದೃಢ ನಿಲುವಾಗಿದೆ.

ಮತ್ತಷ್ಟು ಓದಿ: ಸಂಸತ್ ಮುಂಗಾರು ಅಧಿವೇಶನ: ನೀಟ್, ರಾಮಮಂದಿರ ಹಗರಣಗಳ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು, ಉಭಯ ಸದನಗಳಲ್ಲಿ ತೀವ್ರ ಗದ್ದಲ

ದಲಿತ-ಮುಸ್ಲಿಂ ಮತಗಳ ಧ್ರುವೀಕರಣ
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ 43 ಸ್ಥಾನಗಳನ್ನು ಗೆದ್ದುಕೊಂಡು ಭಾರಿ ಯಶಸ್ಸು ಗಳಿಸಿತ್ತು. ಈ ಯಶಸ್ಸಿನಲ್ಲಿ ದಲಿತ ಮತದಾರರು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಕಾಂಗ್ರೆಸ್ ದಲಿತ ನಾಯಕ ರಾಜೇಂದ್ರ ಪಾಲ್ ಗೌತಮ್ ಅವರನ್ನು ಯುಪಿ ಉಸ್ತುವಾರಿಯನ್ನಾಗಿ ಮಾಡಿ ಎಸ್‌ಪಿ ಮೇಲಿನ ಸೀಟುಗಳ ಒತ್ತಡವನ್ನು ಹೆಚ್ಚಿಸುತ್ತಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ತಡೆ ಒಡ್ಡಬೇಕಾದರೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪರಸ್ಪರ ಹೊಂದಾಣಿಕೆಯಿಂದ ಸಾಗುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *