ಬೆಂಗಳೂರು, ಜೂನ್ 12: ಬಸವೇಶ್ವರ ನಗರದಲ್ಲಿರುವ ಅಂಜನಾದ್ರಿ ಮಹಿಳಾ ಪಿಜಿಯ ಊಟದಲ್ಲಿ ಹುಳ ಪತ್ತೆಯಾಗಿದ್ದು, ಇದರಿಂದ ಆಕ್ರೋಶಗೊಂಡ ಯುವತಿಯರು ಪ್ರತಿಭಟನೆ ನಡೆಸಿದ್ದಾರೆ. ಊಟದಲ್ಲಿ ಹುಳ ಪತ್ತೆಯಾದ ಬಗ್ಗೆ ಪ್ರಶ್ನಿಸಿದ್ದಕ್ಕೆ, ಪಿಜಿ ಮಾಲೀಕರು ಯುವತಿಯರೊಂದಿಗೆ ಕಿರಿಕ್ ಮಾಡಿ, ಪಿಜಿ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ದಿನಗಳ ಹಿಂದೆಯೂ ಸಹ ಇದೇ ಪಿಜಿಯ ಊಟದಲ್ಲಿ ಹುಳ ಪತ್ತೆಯಾಗಿತ್ತು. ಪದೇ ಪದೇ ಇಂತಹ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿರುವುದನ್ನು ಪ್ರಶ್ನಿಸಿದ ಯುವತಿಯರಿಗೆ, ಮಾಲೀಕರು ನೀವು ಕೊಡುವ 5,000 ರೂಪಾಯಿಗೆ ನಾವು ಉತ್ತಮ ಆಹಾರ ನೀಡಬೇಕೇ? ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ನಿನ್ನೆ ಬೆಳಿಗ್ಗೆ ದೋಸೆ ಬೇಯದಿದ್ದ ಕುರಿತು ಪ್ರಶ್ನಿಸಿದಾಗಲೂ ಮಾಲೀಕರು ಯುವತಿಯರೊಂದಿಗೆ ಸರಿಯಾಗಿ ಮಾತನಾಡಿಲ್ಲ ಎಂದು ಯುವತಿಯರು ಹೇಳಿದ್ದಾರೆ. ಮಾಲೀಕರ ವರ್ತನೆಯಿಂದ ಬೇಸತ್ತ ಯುವತಿಯರು ತಡರಾತ್ರಿ ಪಿಜಿಯಿಂದ ಹೊರಬಂದು ಧರಣಿ ಕುಳಿತಿದ್ದಾರೆ. ಆಹಾರದ ಗುಣಮಟ್ಟ ಸುಧಾರಿಸುವಂತೆ ಮತ್ತು ಮಾಲೀಕರ ದುರ್ವರ್ತನೆಗೆ ಕಡಿವಾಣ ಹಾಕುವಂತೆ ಯುವತಿಯರು ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
