Headlines

ಏಕದಿನ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ಸುನಿಲ್ ಗವಾಸ್ಕರ್ – Kannada News | Sunil Gavaskar Picks India’s 2027 WC Squad

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ಆಯೋಜನೆಯಾಗಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸುನಿಲ್ ಗಾವಸ್ಕರ್ 15 ಸದಸ್ಯರ ಬಲಿಷ್ಠ ತಂಡವನ್ನು ಹೆಸರಿಸಿದ್ದಾರೆ. ಖಾಸಗಿ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಅವರು ಪ್ರಕಟಿಸಿರುವ ಈ ತಂಡದಲ್ಲಿ ಯುವ ಹಾಗೂ ಹಿರಿಯ ಆಟಗಾರರ ಸಮತೋಲನ ಕಂಡುಬಂದಿದೆ. ಆದರೆ, ಪ್ರಸ್ತುತ ಫಾರ್ಮ್‌ನಲ್ಲಿರುವ ಕೆಲವು ಸ್ಟಾರ್ ಆಟಗಾರರನ್ನು ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

ಗಿಲ್‌ಗೆ ನಾಯಕತ್ವ, ರೋಹಿತ್-ವಿರಾಟ್‌ಗೆ ಸ್ಥಾನ:

ಸುನಿಲ್ ಗಾವಸ್ಕರ್ ತಮ್ಮ ತಂಡದ ಸಾರಥ್ಯವನ್ನು ಯುವ ಬ್ಯಾಟರ್ ಶುಭ್‌ಮನ್ ಗಿಲ್ ಹೆಗಲಿಗೇರಿಸಿದ್ದಾರೆ. ಇನ್ನು 2027ರ ವೇಳೆಗೆ ವಯಸ್ಸಿನ ಕಾರಣದಿಂದಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶ್ವಕಪ್ ಆಡುವುದು ಅನುಮಾನ ಎಂಬ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನು ಗಾವಸ್ಕರ್ ತಳ್ಳಿಹಾಕಿದ್ದಾರೆ. ಆಫ್ರಿಕನ್ ಪಿಚ್‌ಗಳಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದರೆ ಈ ಇಬ್ಬರು ದಿಗ್ಗಜರ ಅನುಭವ ಅತಿ ಮುಖ್ಯ ಎಂದು ಗಾವಸ್ಕರ್ ನಂಬಿದ್ದಾರೆ.

ಪಂತ್, ಜೈಸ್ವಾಲ್ ಮತ್ತು ಶಮಿಗೆ ಶಾಕ್:

ಪ್ರಸ್ತುತ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಯುವ ಓಪನರ್ ಯಶಸ್ವಿ ಜೈಸ್ವಾಲ್ ಮತ್ತು ಮ್ಯಾಚ್ ವಿನ್ನರ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಗಾವಸ್ಕರ್ ತಂಡದಲ್ಲಿ ಜಾಗ ನೀಡಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇವರ ಬದಲಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್‌ಗೆ ನೀಡಿದ್ದಾರೆ. ಇನ್ನು ಹಿರಿಯ ವೇಗಿ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರ ಹೆಸರನ್ನೂ ಗಾವಸ್ಕರ್ ಕೈಬಿಟ್ಟಿದ್ದಾರೆ.

ಯುವ ಆಲ್‌ರೌಂಡರ್ ಮತ್ತು ವೇಗಿಗಳಿಗೆ ಮಣೆ:

ಸೌತ್ ಆಫ್ರಿಕಾದ ವೇಗದ ಪಿಚ್‌ಗಳನ್ನು ಗಮನದಲ್ಲಿಟ್ಟುಕೊಂಡು ಸುನಿಲ್ ಗಾವಸ್ಕರ್ ಅವರು ಯುವ ವೇಗಿ ಹರ್ಷಿತ್ ರಾಣಾ ಹಾಗೂ ಉದಯೋನ್ಮುಖ ವೇಗದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ತಂಡದಲ್ಲಿ ಅವಕಾಶ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಗೆ ನಿತೀಶ್ ರೆಡ್ಡಿ ತಂಡಕ್ಕೆ ಹೆಚ್ಚುವರಿ ಬೌಲಿಂಗ್ ಬಲ ತುಂಬಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಲೇ ಬಟ್ಲರ್… ವಿಶ್ವ ದಾಖಲೆಯೇ ಧೂಳೀಪಟ!

ಸುನಿಲ್ ಗಾವಸ್ಕರ್ ಆಯ್ಕೆಯ 15 ಸದಸ್ಯರ ಬಲಿಷ್ಠ ಭಾರತ ತಂಡ:

  • ಬ್ಯಾಟರ್‌ಗಳು: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್.
  • ವಿಕೆಟ್ ಕೀಪರ್‌ಗಳು: ಕೆ. ಎಲ್. ರಾಹುಲ್ ಮತ್ತು ಇಶಾನ್ ಕಿಶನ್.
  • ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ.
  • ಬೌಲರ್‌ಗಳು: ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಕುಲ್ದೀಪ್ ಯಾದವ್.

Source link

Leave a Reply

Your email address will not be published. Required fields are marked *