ಕಮಿಷನ್ ಆರೋಪಕ್ಕೆ ಅಂದು ಸಾಕ್ಷಿ ಕೊಡದವರು ಇಂದು ಕೇಳ್ತಿರೋದೇಕೆ: ‘ಕೈ’ ಸರ್ಕಾರಕ್ಕೆ ಅಶೋಕ್ ಪ್ರಶ್ನೆ

ಬೆಂಗಳೂರು, ಫೆಬ್ರವರಿ 18: ಕಮಿಷನ್ ಆರೋಪದ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರ ದ್ವಂದ್ವ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಟೀಕಿಸಿದರು. ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ಹಿಂದಿನ ಸರ್ಕಾರದ ಆರೋಪಗಳಿಗೆ ಸಾಕ್ಷಿ ಕೇಳದವರು ಈಗ ಏಕೆ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘ ಮಾಡಿರುವ 80 % ಕಮಿಷನ್ ಆರೋಪ ಗಂಭೀರ ವಿಷಯವಾಗಿದ್ದು, ಅದು ಸುಳ್ಳು ಎಂದು ಹೇಳುವ ಕಾಂಗ್ರೆಸ್ ನಾಯಕರು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲು ಹಾಕಿದರು. ನಾವು ಸತ್ಯಹರಿಶ್ಚಂದ್ರನ ಮಕ್ಕಳು ಎಂದು ಹೇಳಿಕೊಳ್ಳುವ ಸಚಿವರು ಮೊದಲು ಈ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಟೆಂಡರ್‌ಗಳು ನೆರೆಯ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಹೋಗುತ್ತಿವೆ ಎಂದು ಆರೋಪಿಸಿದ ಅವರು, ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಯಾವ್ಯಾವ ಕೆಲಸಕ್ಕೆ ಎಷ್ಟು ಕಮಿಷನ್? ಅಶೋಕ್ ಹೇಳಿದ್ದೇನು?

ಕಸದ ಟೆಂಡರ್ ಪಡೆಯಲು 7% ಕಮಿಷನ್, ಬಿಲ್ ಬಿಡುಗಡೆಗೆ 7% ಹಾಗೂ ವಿಶೇಷ ಎಲ್‌ಒಸಿ ಪಡೆಯಲು 7% ನೀಡಬೇಕಾಗಿದೆ. ಇದರಿಂದ ಒಟ್ಟಾರೆ 21% ಕಮಿಷನ್ ಸರ್ಕಾರಕ್ಕೆ ಹೋಗುತ್ತಿದೆ ಎಂದು ಆರೋಪಿಸಿದರು. ಇಂಜಿನಿಯರ್‌ಗಳಿಗೆ ಬೇರೆ ಕಮೀಷನ್ ನೀಡಬೇಕಾಗುತ್ತಿದೆ, ಕಸದ ಸಮಸ್ಯೆಗೆ ಸರ್ಕಾರದ ‘ಮಾಫಿಯಾ’ವೇ ಕಾರಣ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸರ್ಕಾರದಿಂದಲೇ ಭೂಕಬಳಿಕೆ: ಜಿಲ್ಲೆಜಿಲ್ಲೆಗಳಲ್ಲಿ ಕಾಂಗ್ರೆಸ್​ ಭವನಕ್ಕೆ ಭೂಮಿ ನೀಡಿದ ದಾಖಲೆ ಸಮೇತ ಬಿಜೆಪಿ ಗಂಭೀರ ಆರೋಪ

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಕ್ರಮವನ್ನು ಖಂಡಿಸಿದ ಅವರು, ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಬಗ್ಗೆ ಅಶೋಕ್ ಏನಂದ್ರು?

ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅಶೋಕ್, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆದಿದ್ದು, ಮೈತ್ರಿ ಸುಗಮವಾಗಿ ಚುನಾವಣೆ ಎದುರಿಸಲಿದೆ ಎಂದರು. ಸಣ್ಣಪುಟ್ಟ ಗೊಂದಲಗಳನ್ನು ಬೇಗನೆ ಬಗೆಹರಿಸಲಾಗುವುದು, ಅಂತಿಮ ತೀರ್ಮಾನ ಹೈಕಮಾಂಡ್‌ದ್ದು ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *