ಬೆಂಗಳೂರು, ಆಗಸ್ಟ್ 06: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ (gangwar) ಮಿತಿಮೀರಿದೆ. ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊಡ್ಡಿವಂಶ ಮತ್ತು ವಿನೋಬನಗರದ ಮೌಲಾನ ಗ್ಯಾಂಗ್ ನಡುವೆ ಲಾಂಗು, ಮಚ್ಚುಗಳಿಂದ ಮಾರಾಮಾರಿ ನಡೆದಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಮಾಡಿದ ಪೊಲೀಸರಿಗೆ ಗಲಾಟೆಯ ಹಿಂದಿನ ಅಸಲಿ ಕಾರಣ ತಿಳಿದುಬಂದಿದೆ. ಅಂಗಡಿ ಮಾಲಿಕ ಹಾಗೂ ಬಾಡಿಗೆದಾರನ ನಡುವೆ ಬ್ಯಾಂಕ್ ಲೋನ್ ವಿಚಾರವಾಗಿ ನಡೆದ ಮಾರಾಮಾರಿ ಎಂಬುದು ಬಯಲಾಗಿದೆ.
ಬಯಲಾದ ಅಸಲಿಯತ್ತು ಏನು?
ಮಹಮ್ಮದ್ ಮೌಲಿ ಎಂಬಾತ ಅಂಗಡಿಯ ಮಾಲಿಕನಾಗಿದ್ದು, ತನ್ನ ಮಳಿಗೆಯನ್ನು ಅಜ್ಜು ಎಂಬ ವ್ಯಕ್ತಿಗೆ ಬಾಡಿಗೆಗೆ ನೀಡಿದ್ದ. ಆದರೆ, ಬಾಡಿಗೆಗೆ ಕೊಟ್ಟಿದ್ದ ಅದೇ ಅಂಗಡಿಗೆ ತನ್ನ ಹೆಸರಿನ ಬೋರ್ಡ್ ಹಾಕಿ ಬ್ಯಾಂಕ್ ಲೋನ್ ಪಡೆಯಲು ಮಾಲಿಕ ಮೌಲಿ ಮುಂದಾಗಿದ್ದ. ಇದನ್ನು ಪ್ರಶ್ನಿಸಿದ್ದ ಬಾಡಿಗೆದಾರ ಅಜ್ಜು, ‘ನಾನು ಬಾಡಿಗೆಗೆ ಇದ್ದೇನೆ, ನೀನ್ಯಾಕೆ ನನ್ನ ಅಂಗಡಿ ಮೇಲೆ ಬೋರ್ಡ್ ಹಾಕಿ ಲೋನ್ ತಗೊಳ್ತೀಯಾ? ಒಂದು ವೇಳೆ ನೀನು ಲೋನ್ ಕಟ್ಟದಿದ್ದರೆ ಆ ಹೊರೆ ನನ್ನ ಮೇಲೆ ಬೀಳುತ್ತದೆ’ ಎಂದು ಗಲಾಟೆ ಮಾಡಿದ್ದ.
ಇದನ್ನೂ ಓದಿ: ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್ಗೆ ನುಗ್ಗಿದ ಆಗಂತುಕರು: ಚಾಕು ಹಿಡಿದು ಓಡಾಟ, CCTVಯಲ್ಲಿ ದೃಶ್ಯ ಸೆರೆ
ಇನ್ನು ಮಾತುಕತೆ ವಿಕೋಪಕ್ಕೆ ತಿರುಗಿದ್ದು, ಮಹಮ್ಮದ್ ಮೌಲಿ, ಅಜ್ಜುಗೆ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಅಜ್ಜು ತಕ್ಷಣವೇ ತನ್ನ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಅಂಗಡಿಯಲ್ಲಿದ್ದ ಕಬ್ಬಿಣ ಕತ್ತರಿಸುವ ಕತ್ತರಿ, ರಾಡ್ ಹಾಗೂ ಇತರ ಮಾರಕಾಸ್ತ್ರಗಳಿಂದ ಮೌಲಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಮೌಲಿ ಮುಖ ಕಟ್ ಆಗಿ ತೀವ್ರ ಗಾಯಗೊಂಡಿದ್ದು, ಮೌಲಿ ಹಾಗೂ ಅಬ್ರಹಾರ್ ಎಂಬ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐವರು ಪೊಲೀಸ್ ವಶಕ್ಕೆ
ಸದ್ಯ ಘಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ ಕಲಾಸಿಪಾಳ್ಯ ಠಾಣೆ ಪೊಲೀಸರು, ಪ್ರಕರಣದ ಮುಖ್ಯ ಆರೋಪಿಗಳಾದ ಅಜ್ಜು, ಅಮಜ್ದ್, ಅಸ್ಗರ್ ಸೇರಿದಂತೆ ಒಟ್ಟು ಐವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
