Headlines

ಕೆಲವು ಸಂದರ್ಭಗಳಲ್ಲಿ ಪೆಲೆಟ್ ಗನ್ ಬಳಕೆ ಕಾನೂನುಬದ್ಧ; ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ – Kannada News | Supreme Court permits pellet gun use in exceptional cases duriong Jantar Mantar Protest Hearing

ನವದೆಹಲಿ, ಜುಲೈ 30: ಪ್ರತಿಭಟನೆಗಳನ್ನು ನಿಯಂತ್ರಿಸಲು ಅನಿವಾರ್ಯ ಪರಿಸ್ಥಿತಿಗಳಲ್ಲಿ ಪೆಲೆಟ್ ಗನ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡುವ ಪ್ರಸ್ತುತ ಕಾನೂನು ನಿಯಮಗಳನ್ನು ಅಸಂವಿಧಾನಿಕ ಎಂದು ಘೋಷಿಸಿ, ರದ್ದುಗೊಳಿಸದ ಹೊರತು ಅವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಸ್ಪಷ್ಟಪಡಿಸಿದೆ. ದೆಹಲಿಯ ಜಂತರ್​ಮಂತರ್​​ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಸಲಾಗಿತ್ತು. ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ವೇಳೆ ಹಲವು ಪ್ರತಿಭಟನಾಕಾರರು ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದರು. ಈ ಘಟನೆಯ ಅರ್ಜಿಗಳ ಸರಣಿ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕಲ್ಲಿದ್ದಲು ಹಗರಣ; ನಿಧನರಾದ 2 ವರ್ಷದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್

ಏನಿದು ಘಟನೆ?:

ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ (NEET) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ್ದ ಪೆಲೆಟ್ ಗನ್ ದಾಳಿಯಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಘಟನೆಯ ಬೆನ್ನಲ್ಲೇ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು ನಿಭಾಯಿಸಲು ಲೋಹದ ಪೆಲೆಟ್ ಗನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠವು, ಪ್ರಸ್ತುತ ಚಾಲ್ತಿಯಲ್ಲಿರುವ ಪೊಲೀಸ್ ಮಾರ್ಗಸೂಚಿಗಳು ಮತ್ತು ಕಾನೂನು ನಿಯಮಗಳು ಪೆಲೆಟ್ ಗನ್ ಬಳಕೆಗೆ ಅನುಮತಿ ನೀಡುತ್ತವೆ. ಹೀಗಾಗಿ ಆ ನಿಯಮಗಳು ಕಾನೂನುಬದ್ಧವಾಗಿ ಇರುವವರೆಗೆ ಅವುಗಳ ಬಳಕೆಯನ್ನು ನೇರವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.

ಇದನ್ನೂ ಓದಿ: ಒಪ್ಪಂದದಂತೆ ಕೇಸ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ; ಸರ್ಕಾರಕ್ಕೆ ಸಿಜೆಪಿ ಕೊನೆಯ ಎಚ್ಚರಿಕೆ

ಪೆಲೆಟ್ ಗನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ನಿರಾಕರಿಸಿದರೂ, ಪ್ರತಿಭಟನೆಯ ವೇಳೆ ಭದ್ರತಾ ಸಿಬ್ಬಂದಿ ಅತಿಯಾದ ಬಲಪ್ರಯೋಗ ಮಾಡಿದ್ದಾರೆಯೇ ಅಥವಾ ನಿಯಮಗಳನ್ನು ಮೀರಿ ಪೆಲೆಟ್ ಗನ್ ಬಳಸಲಾಗಿದೆಯೇ ಎಂಬ ನಿರ್ದಿಷ್ಟ ದುರ್ಬಳಕೆಯ ಆರೋಪಗಳನ್ನು ಕೋರ್ಟ್ ಪ್ರತ್ಯೇಕವಾಗಿ ಪರಿಶೀಲಿಸಲಿದೆ.

ಹಾಗೇ, ಈ ಘಟನೆಯಲ್ಲಿ ಗಾಯಗೊಂಡಿರುವ ಪ್ರತಿಭಟನಾಕಾರರಿಗೆ ಹಾಗೂ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರವು ತಕ್ಷಣವೇ ಅತ್ಯುತ್ತಮ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:12 pm, Thu, 30 July 26

Source link

Leave a Reply

Your email address will not be published. Required fields are marked *