ಕೊಪ್ಪಳ: ಕಲ್ಯಾಣಿ ಸ್ಟೀಲ್ಸ್‌ಗೆ ಷರತ್ತುಬದ್ಧ ಅನುಮತಿ; ಜಿಲ್ಲಾಡಳಿತದ ನಡೆಗೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನ! – Kannada News | Koppal Kalyani Steels Gets Conditional Permission to Reopen Amid Controversy

ಕಲ್ಯಾಣಿ ಸ್ಟೀಲ್ಸ್‌ಗೆ ಷರತ್ತುಬದ್ಧ ಅನುಮತಿ

ಕೊಪ್ಪಳ, ಜುಲೈ 18: ತಾಲೂಕಿನ ಗಿಣಗೇರಾ ಬಳಿ ಇರುವ ಪ್ರಸಿದ್ಧ ‘ಕಲ್ಯಾಣಿ ಸ್ಟೀಲ್ಸ್ ಆಂಡ್ ಪವರ್ ಲಿಮಿಟೆಡ್’ ಕಾರ್ಖಾನೆಗೆ ಕೊನೆಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪುನರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ಕಾರ್ಖಾನೆ ಬಂದ್ ಮಾಡುವ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ನಡೆದುಕೊಂಡ ರೀತಿಯು ಸಾರ್ವಜನಿಕರಲ್ಲಿ ಮತ್ತು ಪರಿಸರ ಪ್ರೇಮಿಗಳಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಪರಿಸರ ನಿಯಮ ಉಲ್ಲಂಘನೆ: ಏನಿದು ಹಿನ್ನೆಲೆ?

ಕಲ್ಯಾಣಿ ಸ್ಟೀಲ್ ಕಾರ್ಖಾನೆಯು ವಾಟರ್ ಆ್ಯಕ್ಟ್ (ಜಲ ಮಾಲಿನ್ಯ ತಡೆ ಕಾಯ್ದೆ) ಹಾಗೂ ವಾಯು ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಕಾರ್ಖಾನೆಯಿಂದ ಹೊರಬೀಳುವ ಹೊಗೆ ಮತ್ತು ಧೂಳಿನಿಂದಾಗಿ ಸ್ಥಳೀಯರ ಆರೋಗ್ಯ ಹಾಗೂ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಜುಲೈ 3ರಂದೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ (Closure Notice) ಕಡಕ್ ಆದೇಶ ಹೊರಡಿಸಿತ್ತು.

ಜಿಲ್ಲಾಡಳಿತದ ವಿಳಂಬ ನೀತಿ

ಕೇಂದ್ರ ಮಂಡಳಿಯು ಜುಲೈ 3ರಂದೇ ಆದೇಶ ನೀಡಿದ್ದರೂ, ಕೊಪ್ಪಳ ಜಿಲ್ಲಾಡಳಿತ ಮಾತ್ರ ಈ ಬಗ್ಗೆ ತಕ್ಷಣ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದೇಶ ಹೊರಬಿದ್ದ ಬರೋಬ್ಬರಿ 11 ದಿನಗಳ ಬಳಿಕ, ಅಂದರೆ ಜುಲೈ 14ರಂದು ಜಿಲ್ಲಾಧಿಕಾರಿಗಳು ಕಾರ್ಖಾನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜೆಸ್ಕಾಂ (GESCOM) ಸಿಬ್ಬಂದಿಗೆ ಸೂಚನೆ ನೀಡಿದರು. ಅದರಂತೆ ಜುಲೈ 15ರಂದು ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪವರ್ ಕಟ್ ಮಾಡಿದ್ದರು.

ಕೇಂದ್ರದ ಆದೇಶ ಜಾರಿಗೆ ತರಲು ಜಿಲ್ಲಾಡಳಿತ ಇಷ್ಟೊಂದು ದಿನ ವಿಳಂಬ ಮಾಡಿದ್ದೇಕೆ? ಕಾರ್ಖಾನೆಯ ಮ್ಯಾನೇಜ್‌ಮೆಂಟ್‌ಗೆ ಸಮಯಾವಕಾಶ ಮಾಡಿಕೊಡಲಾಯಿತೇ? ಎಂಬ ಪ್ರಶ್ನೆಗಳು ಈಗ ಜಿಲ್ಲಾಡಳಿತದ ಮೇಲೆ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ.

ಪವರ್ ಕಟ್ ಆದ ಮರುದಿನವೇ ಸಿಕ್ಕಿತು ಅನುಮತಿ!

ಇನ್ನು ಎಲ್ಲಕ್ಕಿಂತ ರೋಚಕ ತಿರುವು ಸಿಕ್ಕಿದ್ದು ಜುಲೈ 16ರಂದು. ಜೆಸ್ಕಾಂ ಸಿಬ್ಬಂದಿ ಜುಲೈ 15ರಂದು ವಿದ್ಯುತ್ ಕಡಿತಗೊಳಿಸಿದ ಬೆನ್ನಲ್ಲೇ, ಮರುದಿನವೇ (ಜುಲೈ 16) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಯನ್ನು ಪುನರಾರಂಭಿಸಲು 3 ತಿಂಗಳ ಕಾಲಾವಧಿಯ ಷರತ್ತುಬದ್ಧ ಅನುಮತಿಯನ್ನು ನೀಡಿದೆ.

ಮಂಡಳಿ ವಿಧಿಸಿರುವ ಪ್ರಮುಖ ಷರತ್ತುಗಳು ಇವು

ಕಾರ್ಖಾನೆ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರೂ, ಮುಂದಿನ 3 ತಿಂಗಳು ತೀವ್ರ ನಿಗಾದಲ್ಲಿ ಇಡಲಾಗುತ್ತಿದ್ದು, ಈ ಕೆಳಗಿನ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.

  • ಕಾರ್ಖಾನೆಯಿಂದ ಹೊರಬರುವ ಹೊಗೆಯ ಪ್ರಮಾಣವನ್ನು ನಿರಂತರವಾಗಿ ಗಮನಿಸಬೇಕು.
  • ಕೈಗಾರಿಕೆಗೆ ಬಳಸುವ ಕಚ್ಚಾ ವಸ್ತುಗಳು ಗಾಳಿಗೆ ಹರಡದಂತೆ ಸಂಪೂರ್ಣವಾಗಿ ಮುಚ್ಚಿಡಬೇಕು.
  • ಹೊಗೆ ಗೂಡುಗಳ (Chimneys) ಮಾಲಿನ್ಯದ ದತ್ತಾಂಶವನ್ನು (Data) ಸರಿಯಾಗಿ ನಿರ್ವಹಿಸಬೇಕು ಹಾಗೂ ಆನ್‌ಲೈನ್ ಮಾನಿಟರಿಂಗ್ ಸಿಸ್ಟಮ್ ಸಮರ್ಪಕವಾಗಿರಬೇಕು.
  • ಕಚೇರಿ ಹಾಗೂ ಕಾರ್ಖಾನೆಯ ಸುತ್ತಮುತ್ತ ಸಾರ್ವಜನಿಕರಿಗೆ ತೊಂದರೆಯಾಗದಂತೆ ಧೂಳು ಹರಡದಂತೆ ಸೂಕ್ತ ಮೇಲ್ವಿಚಾರಣೆ ನಡೆಸಬೇಕು.
  • ತ್ಯಾಜ್ಯ ಸಂಗ್ರಹಿಸುವ ಹೂಳಿನ ಹೊಂಡದ (Sludge pond/Waste handling) ಬಾಕಿ ಇರುವ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು.

ಒಟ್ಟಿನಲ್ಲಿ, ಮಾಲಿನ್ಯದ ದೂರಿನ ಮೇರೆಗೆ ಬಂದ್ ಆಗಿದ್ದ ಕಲ್ಯಾಣಿ ಸ್ಟೀಲ್ಸ್ ಕೇವಲ ಮೂರೇ ದಿನಗಳಲ್ಲಿ ಮತ್ತೆ ಕಾರ್ಯಾರಂಭ ಮಾಡಲು ಸಜ್ಜಾಗಿದೆ. ಆದರೆ, ಇಡೀ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತದ ತಡವಾದ ನಡೆ ಮಾತ್ರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *