ಕೊಲ್ಕತ್ತಾದ ಗೋದಾಮು ಕುಸಿತದ 6 ಆರೋಪಿಗಳ ಬಂಧನ; ಆರ್ಕಿಟೆಕ್ಟ್ ಕಪ್ಪುಪಟ್ಟಿಗೆ ಸೇರಿಸಲು ಸಿಎಂ ಆದೇಶ – Kannada News | CM Suvendu Adhikari says 6 arrested in Kolkata warehouse collapse case

ಕೊಲ್ಕತ್ತಾ, ಜೂನ್ 26: ಪಶ್ಚಿಮ ಬಂಗಾಳದ ಕೊಲ್ಕತ್ತಾದ ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮು ಕುಸಿತಗೊಂಡು 5 ಜನ ಬಲಿಯಾದ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಪ್ರಕರಣದ ಪರಾಮರ್ಶೆ ನಡೆಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಮುಖ ಪ್ರಕರಣದ ತನಿಖೆಯನ್ನು ಲಾಲ್‌ಬಜಾರ್ ಅಪರಾಧ ವಿಭಾಗ ಕೈಗೆತ್ತಿಕೊಂಡಿದ್ದು, ಕೊಲ್ಕತ್ತಾ ಪೊಲೀಸ್ ಕಮಿಷನರ್ ಅವರೇ ಖುದ್ದಾಗಿ ಇದರ ಉಸ್ತುವಾರಿ ವಹಿಸಿದ್ದಾರೆ. ಪ್ರಾಥಮಿಕ ಆರೋಪಗಳ ಹಿನ್ನೆಲೆಯಲ್ಲಿ ಕಾಳಿ ಬ್ಯಾನರ್ಜಿ ಹಾಗೂ ಇದರಲ್ಲಿ ಭಾಗಿಯಾಗಿದ್ದ ಬ್ರೋಕರ್ ಅನ್ನು ಬಂಧಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಲಂಚದ ವಿರುದ್ಧ ಸಿಎಂ ಗರಂ:

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ಕುರಿತು ಮಾತನಾಡಿದ್ದು, “ಈ ಕಟ್ಟಡದ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿದ್ದ ಮತ್ತು ತಪ್ಪು ಯೋಜನೆ ರೂಪಿಸಿದ್ದ ಆರ್ಕಿಟೆಕ್ಟ್ ಅನ್ನು ಕಪ್ಪುಪಟ್ಟಿಗೆ ಸೇರಿಸಲು ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ನಿರ್ಧರಿಸಿದೆ. ಕಚೇರಿಗಳು ಮರುಪ್ರಾರಂಭಗೊಂಡ ತಕ್ಷಣ ಆಡಳಿತಾಧಿಕಾರಿಗಳು ಇದನ್ನು ಅಧಿಕೃತಗೊಳಿಸಲಿದ್ದಾರೆ. ಇಂತಹ ಬೇಜವಾಬ್ದಾರಿ ವ್ಯಕ್ತಿಗಳು ಭವಿಷ್ಯದಲ್ಲಿ ಅಧಿಕೃತವಾಗಿ ಕೆಲಸ ಮಾಡಲು ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ನನಗಿಂತ ಕೆಟ್ಟವರು ಯಾರೂ ಇರುವುದಿಲ್ಲ; ಬಂಗಾಳದಲ್ಲಿ ಹಿಂಸಾಚಾರ ನಡೆಸುವವರಿಗೆ ಸಿಎಂ ಸುವೇಂದು ಅಧಿಕಾರಿ ಎಚ್ಚರಿಕೆ

ಬುಧವಾರ ಸಂಜೆ ಪೊಲೀಸರು ಮೂವರನ್ನು ಬಂಧಿಸಿದ್ದರು. ಬಂಧಿತರನ್ನು ಪ್ರಾಜೆಕ್ಟ್ ಮೇಲ್ವಿಚಾರಕ ಸೈಯದ್ ಮೊಹಮ್ಮದ್ ಗುಲ್ಜಾರ್ ಮತ್ತು ಕಾರ್ಮಿಕರ ಸರಬರಾಜುದಾರರಾದ ಮೊಹಮ್ಮದ್ ಅತಾವುಲ್ ಹಾಗೂ ಸುಭಾಸ್ ಚೌಧರಿ ಎಂದು ಗುರುತಿಸಲಾಗಿದೆ. ಮೃತ ಕಾರ್ಮಿಕರೊಬ್ಬರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಇವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಂತೆ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೀಕರ ವಿರುದ್ಧ ಎಫ್‌ಐಆರ್:

ಗೋದಾಮಿನ ಮಾಲೀಕರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಈ ಜಾಗವು ಶ್ಯಾಮ ಪ್ರಸಾದ್ ಮುಖರ್ಜಿ ಪೋರ್ಟ್ ಅಥಾರಿಟಿಗೆ ಸೇರಿದ್ದು, ಇದನ್ನು ಬೇಹ್ರಾ ಬ್ರದರ್ಸ್‌ನ ಪಾಲುದಾರರಾದ ಶಂಭೂನಾಥ್ ಬೇಹ್ರಾ ಎಂಬುವವರಿಗೆ ಗುತ್ತಿಗೆ ನೀಡಲಾಗಿತ್ತು. ಗೋದಾಮಿನ ನಿರ್ಮಾಣಕ್ಕೆ ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅನುಮೋದನೆ ಸಿಕ್ಕಿತ್ತು. ಆದರೆ, ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಕಟ್ಟಡವನ್ನು ಹೇಗೆ ನಿರ್ಮಿಸಲಾಯಿತು ಮತ್ತು ಅದಕ್ಕೆ ಅಧಿಕಾರಿಗಳು ಹೇಗೆ ಅನುಮತಿ ನೀಡಿದರು ಎಂಬ ಕೋನದಲ್ಲಿ ಕೊಲ್ಕತ್ತಾ ಪೊಲೀಸರ ಪತ್ತೇದಾರಿ ವಿಭಾಗದ ಹೋಮಿಸೈಡ್ ಸೆಕ್ಷನ್ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಭವಾನಿಪುರ ಕ್ಷೇತ್ರ ಉಳಿಸಿಕೊಂಡು ನಂದಿಗ್ರಾಮದ ಶಾಸಕ ಸ್ಥಾನಕ್ಕೆ ಬಂಗಾಳದ ಸಿಎಂ ಸುವೇಂದು ಅಧಿಕಾರಿ ರಾಜೀನಾಮೆ

ಅಧಿಕಾರಿಗಳಿಗೆ ಸಂಕಷ್ಟ:

ಈ ಅಕ್ರಮ ಕಟ್ಟಡಕ್ಕೆ ಮಂಜೂರಾತಿ ನೀಡಿದ ಮತ್ತು ಇದರ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗಿಯಾದ ಮುನ್ಸಿಪಲ್ ಅಧಿಕಾರಿಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಅವರೆಲ್ಲರಿಗೂ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *