ಕ್ಷೇತ್ರ ತ್ಯಾಗಕ್ಕೆ ಸುಮಲತಾಗೆ ಸಿಗುತ್ತಾ ಪ್ರತಿಫಲ? ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ನಡೆ

ಬೆಂಗಳೂರು, (ಜೂನ್ 01): ಕರ್ನಾಟಕ ರಾಜ್ಯಸಭಾ  ಚುನಾವಣೆ (Karnataka Rajyasabha Election) ತೀವ್ರ ಕುತೂಹಲ ಮೂಡಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​​​ನಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆದಿವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಕೇವಲ ಒಂದೇ ಸ್ಥಾನ ದೊರೆಯಲಿದ್ದು, ಒಂದು ಸ್ಥಾನಕ್ಕೆ ದೋಸ್ತಿಗಳ ಮಧ್ಯೆ ಕುಸ್ತಿ ಶುರುವಾಗಿದೆ. ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡರನ್ನೆ (HD Devegowda) ಮುಂದುವರೆಸಬೇಕೆಂದು ಪಟ್ಟು ಹಿಡಿದಿದೆ. ಆದರೂ  ಇನ್ನೂ ಖಚಿತತೆ ಸಿಕ್ಕಿಲ್ಲ. ಇನ್ನೊಂದೆಡೆ ಬಿಜೆಪಿ (BJP) ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದೆ. ಮೊನ್ನೆ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೆಲವರ ಹೆಸರುಗಳು ಪ್ರಸ್ತಾಪವಾಗಿದೆ. ಹೀಗಾಗಿ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ. ಆದರೂ ಸಂಪ್ರದಾಯದಂತೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ (dv sadananda gowda) ಅವರ ಹೆಸರು ಶಿಫಾರಸ್ಸು ಮಾಡಲಾಗಿದೆ. ಈ ಎಲ್ಲಾ ವಿದ್ಯಾಮಾನಗಳ ನಡುವೆ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ಹೈಕಮಾಂಡ್, ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಬಗ್ಗೆ ವಿವರ ಕೇಳಿದ್ದು, ಸಂಚಲನದ ಜೊತೆ ಕುತೂಹಲ ಮೂಡಿಸಿದೆ.

ಮುಖ್ಯಾಂಶಗಳು

  • ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ
  • NDA ಅಭ್ಯರ್ಥಿಯಾಗಿ ಎಚ್​ಡಿ ದೇವೇಗೌಡ ಸ್ಪರ್ಧೆ ಬಗ್ಗೆ ಇನ್ನೂ ಸಿಗದ ಖಚಿತತೆ
  • ಮಾಜಿ ಸಂಸದೆ ಸುಮಲತಾ ಬಗ್ಗೆ ವಿವರ ಕೇಳಿರುವ BJP ಹೈಕಮಾಂಡ್
  • ರಾಜ್ಯ ಘಟಕದಿಂದ ಸುಮಲತಾ ಬಗ್ಗೆ ಮಾಹಿತಿ ಕೇಳಿರುವ ಹೈಕಮಾಂಡ್
  • ಈಗಾಗಲೇ ಸದಾನಂದಗೌಡ ಹೆಸರು ಕೇಂದ್ರೀಯ ಸಂಸದೀಯ ಮಂಡಳಿಗೆ ಶಿಫಾರಸು ಮಾಡಿರುವ ರಾಜ್ಯ ಬಿಜೆಪಿ

ಸುಮಲತಾ ಬಗ್ಗೆ ವಿವರಣೆ ಕೇಳಿದ ಹೈಕಮಾಂಡ್

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ಸಹ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದರ ಮಧ್ಯೆ ರಾಜ್ಯ ಬಿಜೆಪಿ ಸಹ ಕೇಂದ್ರೀಯ ಸಂಸದೀಯ ಮಂಡಳಿಗೆ ಸದಾನಂದಗೌಡ ಹೆಸರು ಶಿಫಾರಸು ಮಾಡಿದೆ. ಆದ್ರೆ, ಹೈಕಮಾಂಡ್ ಮಟ್ಟದಲ್ಲಿ ಸುಮಲತಾ ಹೆಸರು ಮುನ್ನಲೆಗೆ ಬಂದಿದ್ದು, ರಾಜ್ಯ ನಾಯಕರಿಂದ ಸುಮಲತಾ ರಾಜಕೀಯ ಪ್ರಭಾವದ ಕುರಿತು ವಿವರಣೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ತ್ಯಾಗ ಸಿಗುತ್ತಾ ಪ್ರತಿಫಲ?

ಹಾಲಿ ಮಂಡ್ಯದ ಪಕ್ಷೇತರ ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಯಾಗಿದ್ದರು. ಅಲ್ಲದೇ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಸುಮಲತಾ ಅವರು ಮಂಡ್ಯ ಕ್ಷೇತ್ರವನ್ನು ಜೆಡಿಎಸ್​​​ಗೆ ತ್ಯಾಗ ಮಾಡಿದ್ದರು. ಇದರ ಫಲವಾಗಿ ಎಚ್​​​ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆದ್ದು ಇದೀಗ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಸುಮಲತಾ ಮಾಡಿದ ಈ ದೊಡ್ಡ ತ್ಯಾಗವನ್ನು ಬಿಜೆಪಿ ವರಿಷ್ಠರು ಇದೀಗ ಗಣನೆಗೆ ತೆಗೆದುಕೊಂಡಿದ್ದು, ರಾಜ್ಯಸಭೆಯ ಟಿಕೆಟ್ ನೀಡಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ತ್ಯಾಗಕ್ಕೆ ಪ್ರತಿಫಲ ಸಿಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಅಚ್ಚರಿ ಆಯ್ಕೆಯಲ್ಲಿ ಖ್ಯಾತ ಪಡೆದುಕೊಂಡಿದೆ. ಹೀಗಾಗಿ ಕರ್ನಾಟಕ ರಾಜ್ಯಸಭೆಗೆ ಸುಮಲತಾ ಅಂಬರೀಶ್ ಅಚ್ಚರಿ ಆಯ್ಕೆಯಾಗುತ್ತಾರಾ ಎನ್ನುವುದೇ ಕುತೂಹಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *