ಗುರುಗ್ರಾಮ, ಮೇ 03: ವ್ಯಕ್ತಿಯೊಬ್ಬ ತನ್ನ ಸುಖ ಸಂಸಾರವನ್ನೇ ಬಲಿಪಡೆದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ನಜೀಮ್ ಎಂಬಾತ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ(Suicide)ಗೆ ಯತ್ನಿಸಿದ್ದಾನೆ. ಶನಿವಾರ ರಾತ್ರಿ ಸುಮಾರು 9.30 ರ ವೇಳೆಗೆ ನಜೀಮ್ನ ಸಹೋದರ ಮನೆಗೆ ಹಿಂದಿರುಗಿದಾಗ, ಮೊದಲ ಮಹಡಿಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಹಿಳೆ ಮತ್ತು ನಾಲ್ವರು ಮಕ್ಕಳು ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ನಜೀಮ್ ಹೇರ್ ಸಲೂನ್ ನಡೆಸುತ್ತಿದ್ದು, ಆತ ಬದುಕುಳಿದಿದ್ದಾನೆ. ಪತ್ನಿ ನಜ್ಮಾ, ಮಕ್ಕಳಾದ ಇಕ್ರಾ, ಶಿಫಾ (11), ಆರಾಮ್ (9) ಮತ್ತು ಖತೀಜಾ (6) ಸಾವನ್ನಪ್ಪಿದ್ದಾರೆ. ಯಾರಿಗೂ ಬಯಸದ ಕಾರಣ ಈ ಕೃತ್ಯ ಎಸಗಿರುವುದಾಗಿ ನಜೀಮ್ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ, ಅವರನ್ನು ವಿಷಪ್ರಾಶನ ಮಾಡಿ ಕೊಲ್ಲಲಾಗಿದೆಯೇ ಅಥವಾ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿದುಬರಬೇಕಿದೆ.
ಮಥುರಾದ ವೃಂದಾವನದಲ್ಲಿ ಮತ್ತೊಂದು ಕರುಣಾಜನಕ ಘಟನೆ ನಡೆದಿದ್ದು, ಸುಭಾಷ್ ಠಾಕೂರ್ ಎಂಬ ವ್ಯಕ್ತಿ ತನ್ನ ಲಿವ್-ಇನ್ ಸಂಗಾತಿ ರಾಧಿಕಾಳನ್ನು ಕೊಂದ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ.
ಕಳೆದ ಎರಡು ವರ್ಷಗಳಿಂದ ಈ ದಂಪತಿಗಳು ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಇತ್ತೀಚೆಗೆ ಸುಭಾಷ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ರಾಧಿಕಾ ಪೊಲೀಸ್ ದೂರು ನೀಡಿದ್ದರು. ಈ ದೂರಿನಿಂದ ತೀವ್ರ ಆಕ್ರೋಶಗೊಂಡಿದ್ದ ಸುಭಾಷ್, ರಾಧಿಕಾಳನ್ನು ಕತ್ತು ಹಿಸುಕಿ ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮತ್ತಷ್ಟು ಓದಿ: ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!
ರಾಧಿಕಾಳ ಸಹೋದರಿ ಅನಿತಾ ಪದೇ ಪದೇ ಕರೆ ಮಾಡಿದರೂ ಯಾವುದೇ ಉತ್ತರ ಬಾರದಿದ್ದಾಗ ಆತಂಕಗೊಂಡು ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಕಿಟಕಿಯ ಮೂಲಕ ನೋಡಿದಾಗ ಮನೆಯೊಳಗೆ ಶವಗಳು ಪತ್ತೆಯಾಗಿವೆ. ಈ ಎರಡೂ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಕೋನಗಳಿಂದ ತನಿಖೆ ಮುಂದುವರೆಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
