ಗೃಹ ಜ್ಯೋತಿ ಗ್ರಾಹಕರಿಗೆ ಬೆಸ್ಕಾಂ ಬಿಗ್ ರಿಲೀಫ್; ಮನೆ ಬಾಡಿಗೆದಾರರ ಆಧಾರ್ ವೆರಿಫಿಕೇಶನ್‌ನಿಂದ ಉಚಿತ ವಿದ್ಯುತ್ ಕಟ್ ಆಗಲ್ಲ – Kannada News | Gruha Jyothi: No Free Electricity Cut for Tenants, BESCOM Assures Continuity

ಬೆಂಗಳೂರು, ಜು.6: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಯೋಜನೆಯಾದ ‘ಗೃಹ ಜ್ಯೋತಿ’ (Gruha Jyothi) ಅಡಿಯಲ್ಲಿ ಸೌಲಭ್ಯ ಪಡೆಯುತ್ತಿರುವ ಬಾಡಿಗೆದಾರರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (Bescom) ಮಹತ್ವದ ಭರವಸೆಯೊಂದನ್ನು ನೀಡಿದೆ. ಪ್ರಸ್ತುತ ನಡೆಯುತ್ತಿರುವ ಫಲಾನುಭವಿಗಳ ಆಧಾರ್ ವಿವರಗಳ ಪರಿಶೀಲನಾ ಅಭಿಯಾನದಿಂದ ಪ್ರಸಕ್ತ ಗ್ರಾಹಕರ ಗೃಹ ಜ್ಯೋತಿ ಸೌಲಭ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಮನೆಗಳಲ್ಲಿ ಪ್ರಸ್ತುತ ವಾಸವಿರುವ ನೈಜ ಫಲಾನುಭವಿಗಳ ಆಧಾರ್ ವಿವರಗಳನ್ನು ನವೀಕರಿಸುವ ಉದ್ದೇಶದಿಂದ ಜುಲೈ 1 ರಿಂದ ಈ ವಿಶೇಷ ಪರಿಶೀಲನಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಆದರೆ, ಅನೇಕ ಮನೆಗಳಲ್ಲಿ ಹಳೆಯ ಬಾಡಿಗೆದಾರರ ಆಧಾರ್ ಲಿಂಕ್ ಆಗಿರುವುದರಿಂದ, ಈಗ ಹೊಸದಾಗಿ ಪರಿಶೀಲನೆ ನಡೆಸಿದರೆ ತಮಗೆ ಸಿಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ರದ್ದಾಗಬಹುದು ಎಂಬ ಆತಂಕ ಬಾಡಿಗೆದಾರರಲ್ಲಿ ಮೂಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಬೆಸ್ಕಾಂ, ಪ್ರಸ್ತುತ ಮನೆಯಲ್ಲಿ ವಾಸವಿರುವವರ ವಿವರಗಳಿಗೆ ಅನುಗುಣವಾಗಿ ಮಾತ್ರ ಸಿಬ್ಬಂದಿ ದಾಖಲೆಗಳನ್ನು ನವೀಕರಿಸಲಿದ್ದಾರೆ. ಈ ಪ್ರಕ್ರಿಯೆಯಿಂದಾಗಿ ಯೋಜನೆಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಅಥವಾ ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂದು ತಿಳಿಸಿದೆ.

ಪರಿಶೀಲನೆಯ ಅವಧಿಯಲ್ಲಿ ಹಾಗೂ ಅದರ ನಂತರವೂ ಯಾವುದೇ ವ್ಯತ್ಯಯವಿಲ್ಲದೆ ಉಚಿತ ವಿದ್ಯುತ್ ಯೋಜನೆ ಎಂದಿನಂತೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಇಲಾಖೆಯ ಪರವಾಗಿ ಆಶ್ವಾಸನೆ ನೀಡಿದ್ದಾರೆ.

ಕಚೇರಿಗೆ ಅಲೆಯುವ ಅಗತ್ಯವಿಲ್ಲ – ಮನೆ ಬಾಗಿಲಿಗೇ ಬರಲಿದ್ದಾರೆ ಸಿಬ್ಬಂದಿ:

ಗೃಹ ಜ್ಯೋತಿ ಫಲಾನುಭವಿಗಳು ಪರಿಶೀಲನೆಗಾಗಿ ಬೆಸ್ಕಾಂ ಕಚೇರಿಗಳಿಗೆ ಭೇಟಿ ನೀಡುವ ಅಥವಾ ಯಾವುದೇ ಹೆಚ್ಚುವರಿ ಕ್ರಮಗಳನ್ನು ಪೂರೈಸಲು ಕಷ್ಟಪಡುವ ಅಗತ್ಯವಿಲ್ಲ. ಬೆಸ್ಕಾಂನ ಮೀಟರ್ ರೀಡರ್‌ಗಳು ಮತ್ತು ಕ್ಷೇತ್ರ ಸಿಬ್ಬಂದಿಯೇ ನೇರವಾಗಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ವೇಳೆ ಅವರು ಬಾಡಿಗೆ ಅಥವಾ ಲೀಸ್ (ಗೇಣಿ) ಒಪ್ಪಂದದ ವಿವರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ರೆಕಾರ್ಡ್ಸ್ ಅಪ್ಡೇಟ್ ಮಾಡಲಿದ್ದಾರೆ.

ಫಲಾನುಭವಿಗಳು ತಮ್ಮ ಬಾಡಿಗೆ ಒಪ್ಪಂದ ಪತ್ರ ಹಾಗೂ ಅಗತ್ಯ ಗುರುತಿನ ಚೀಟಿಗಳನ್ನು ಸಿದ್ಧವಾಗಿಟ್ಟುಕೊಂಡು, ಸಮೀಕ್ಷಾ ತಂಡಗಳಿಗೆ ಸೂಕ್ತ ಸಹಕಾರ ನೀಡಬೇಕಾಗಿ ವಿನಂತಿಸಲಾಗಿದೆ. ಇದರೊಂದಿಗೆ ಮನೆ ಮಾಲೀಕರು ಸಹ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡಬೇಕು ಎಂದು ಬೆಸ್ಕಾಂ ಕೋರಿದೆ.

ಇದನ್ನೂ ಓದಿ: ಆಡಳಿತದ ಅವ್ಯವಸ್ಥೆ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಚಲಾಯಿಸಿದ್ದರ ಬಗ್ಗೆ ಸುರೇಶ್ ಕುಮಾರ್ ಆಕ್ರೋಶ

ಸಹಾಯವಾಣಿ ಸಂಖ್ಯೆಗಳು

ಈ ಆಧಾರ್ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಅಥವಾ ಸ್ಪಷ್ಟೀಕರಣಗಳಿದ್ದಲ್ಲಿ ಗ್ರಾಹಕರು ಬೆಸ್ಕಾಂನ ಅಧಿಕೃತ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:

ಮುಖ್ಯ ಸಹಾಯವಾಣಿ: 1912

ವಿಶೇಷ ಸಹಾಯವಾಣಿ ಸಂಖ್ಯೆಗಳು: 9480816111, 9480816112, 9480816113 ಮತ್ತು 9480816114

ಸಮಯ: ಪ್ರತಿದಿನ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಈ ಸೇವೆ ಲಭ್ಯವಿರುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:14 pm, Mon, 6 July 26

Source link

Leave a Reply

Your email address will not be published. Required fields are marked *