ವಿನಯ್ ರಾಜ್ಕುಮಾರ್ (Vinay Rajkumar), ಮೇಘನಾ ಶೆಟ್ಟಿ, ಲೂಸ್ ಮಾದ ಯೋಗಿ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿರುವ ‘ಗ್ರಾಮಾಯಣ’ ಸಿನಿಮಾ ಇದೇ ವಾರ ಬಿಡುಗಡೆ ಆಗಿದೆ. ಹಲವು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾ ಹಲವಾರು ಅಡೆ-ತಡೆಗಳನ್ನು ದಾಟಿಕೊಂಡು ಕೊನೆಗೂ ಕಳೆದ ಶುಕ್ರವಾರ ರಿಲೀಸ್ ಆಗಿದೆ. ಆದರೆ ಸಿನಿಮಾ ಬಿಡುಗಡೆ ಆದ ಮೇಲೂ ಸಹ ಸಂಕಷ್ಟಗಳು ಕೊನೆಯಾಗಿಲ್ಲ. ಇದೀಗ ಈ ಸಿನಿಮಾದ ವಿರುದ್ಧ ತಡೆ ಆಜ್ಞೆ ತರಲಾಗಿದೆ.
‘ಗ್ರಾಮಾಯಣ’ ಸಿನಿಮಾದ ಮೂಲ ನಿರ್ಮಾಪಕರಾಗಿದ್ದವರ ಮಕ್ಕಳು, ಹಾಗೂ ಕುಟುಂಬಸ್ಥರು ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಿನಿಮಾದ ವಿರುದ್ಧ ತಡೆಯಾಜ್ಞೆ ತರಲು ಯಶಸ್ವಿ ಆಗಿದ್ದಾರೆ. ಆದರೆ ಈ ತಡೆ ಆಜ್ಞೆ ಕೇವಲ ಡಿಜಿಟಲ್ ಮತ್ತು ಸ್ಯಾಟಲೈಟ್ ರಿಲೀಸ್ಗೆ ಮಾತ್ರವೇ ತರಲಾಗಿದೆ. ಆದರೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವುದಕ್ಕೆ ತಡೆ ಆಜ್ಞೆ ತಂದಿಲ್ಲ. ಹಾಗಾಗಿ ಸಿನಿಮಾ ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣಬಹುದಾಗಿದೆ.
2020ಕ್ಕೂ ಮುಂಚೆ ಮೊದಲಿಗೆ ‘ಗ್ರಾಮಾಯಣ’ ಸಿನಿಮಾ ಶುರು ಮಾಡಿದ್ದಾಗ ಅದರ ನಿರ್ಮಾಪಕರಾಗಿದ್ದ ಲಕ್ಷ್ಮಿ ನರಸಿಂಹ ಮೂರ್ತಿ ಅವರ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಲಕ್ಷ್ಮಿ ನರಸಿಂಹ ಮೂರ್ತಿ ಅವರು ಸಿನಿಮಾ ಶುರು ಮಾಡಿದಾಗ ನಿರ್ದೇಶಕ ದೇವನೂರು ಚಂದ್ರು ಅವರು ನಿರ್ದೇಶಕರು. ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಆದರೆ ಕೆಲವೇ ದಿನಗಳಲ್ಲಿ ಕೋವಿಡ್ ಸಮಯದಲ್ಲಿ ನಿರ್ಮಾಪಕರ ಲಕ್ಷ್ಮಿ ನರಸಿಂಹ ಮೂರ್ತಿ ನಿಧನರಾದರು. ಬಳಿಕ ಅವರ ಪತ್ನಿ ಸಿನಿಮಾದ ಹಕ್ಕುಗಳನ್ನು ನಿರ್ದೇಶಕ ದೇವನೂರು ಚಂದ್ರು ಅವರಿಗೆ ಮಾರಾಟ ಮಾಡಿದರು. ಬಳಿಕ ಅದನ್ನು ಲಹರಿ ಸಂಸ್ಥೆ ಖರೀದಿ ಮಾಡಿ ಸಿನಿಮಾ ಮಾಡಿ ಇದೀಗ ಬಿಡುಗಡೆ ಸಹ ಮಾಡಿದೆ.
ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ? ನಿಜಾಂಶವೇನು?
ಆದರೆ ಈಗ ಲಕ್ಷ್ಮಿ ನರಸಿಂಹ ಮೂರ್ತಿ ಅವರ ಪುತ್ರರಾದ ಮನೋಹರ್ ಕೃಷ್ಣ ಮತ್ತು ಕುಮಾರಿ ಅವರುಗಳು ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, ತಮ್ಮ ಅನುಮತಿ ಪಡೆಯದೇ ತಮ್ಮ ತಾಯಿ ರಹಸ್ಯ ಒಪ್ಪಂದದ ಮೂಲಕ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ. ಅಸಲಿಗೆ ಸಿನಿಮಾದ ಹಕ್ಕುಸ್ವಾಮ್ಯದಲ್ಲಿ ತಮಗೆ ಮುಕ್ಕಾಲು ಪಾಲು ಭಾಗ ಸಿಗಬೇಕಿತ್ತು. ಅದರಿಂದ ನಾವು ವಂಚಿತರಾಗಿದ್ದೇವೆ ಎಂದು ಲಕ್ಷ್ಮಿ ನರಸಿಂಹ ಮೂರ್ತಿ ಅವರ ಮಕ್ಕಳು ಹೇಳಿದ್ದಾರೆ. ಅವರ ಮನವಿ ಪುರಸ್ಕರಿಸಿರುವ ನ್ಯಾಯಾಲಯ, ‘ಗ್ರಾಮಾಯಣ’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ಬಿಡುಗಡೆಗೆ ತಡೆ ನೀಡಿದೆ. ಆದರೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಯಾವುದೇ ತಡೆ ಆಜ್ಞೆ ನೀಡಲಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
