ಬೆಂಗಳೂರು, (ಜುಲೈ 18): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಇಂದು (ಜುಲೈ 18) ವಿಧಿವಶರಾಗಿದ್ದಾರೆ. ಇನ್ನು 2001ರಲ್ಲಿ ಚೆನ್ನಮ್ಮ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಹರದನಹಳ್ಳಿಯಲ್ಲಿ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.
ಆಸ್ತಿ ವಿವಾದ ಹಾಗೂ ಕುಟುಂಬದ ವೈಷಮ್ಯವೇ ಈ ದಾಳಿಗೆ ಕಾರಣವಾಗಿತ್ತು. ದೇವೇಗೌಡರ ಸಂಬಂಧಿ ಲೋಕೇಶ್ (ಬಸವೇಗೌಡರ ಮಗ) ಎಂಬಾತನೇ ಈ ಕೃತ್ಯದ ಪ್ರಮುಖ ಆರೋಪಿಯಾಗಿದ್ದ. ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ನಡೆದಿದ್ದ ಈ ಘಟನೆ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇನ್ನು ಚೆನ್ನಮ್ಮನವರಿಗೆ ಆಸಿಡ್ ಅಟ್ಯಾಕ್ ಆದಾಗ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ಚಂದ್ರಮೌಳಿಯವರು ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
