ಜನಪದಕ್ಕೆ ಬೆರೆತ ರ್ಯಾಪ್, ‘ಸಿಟಿ ಲೈಟ್ಸ್’ ಸಿನಿಮಾದ ಹಾಡು ಕೇಳಿದಿರಾ? – Kannada News | New song released from City Lights Kannada movie

ವಿಜಯ್ ಕುಮಾರ್ (ದುನಿಯಾ ವಿಜಯ್) (Duniya Viji) ನಿರ್ದೇಶಿಸಿ, ದೊಡ್ಮನೆ ಕುಡಿ ವಿನಯ್ ರಾಜ್​​ಕುಮಾರ್ (Vinay Rajkumar) ನಾಯಕನಾಗಿ ನಟಿಸುತ್ತಿರುವ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಸಿನಿಮಾದ ಹಾಡುಗಳು ವಿಭಿನ್ನವಾಗಿರುತ್ತವೆ, ಈ ಹಿಂದೆ ಅವರು ನಿರ್ದೇಶಿಸಿದ್ದ ‘ಭೀಮ’ ಮತ್ತು ‘ಸಲಗ’ ಸಿನಿಮಾಗಳಲ್ಲಿ ಹಾಡುಗಳು ಸಖತ್ ಹಿಟ್ ಆಗಿದ್ದವು. ಇದೀಗ ಅವರ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಹಾಡು ಅವರ ಹಿಂದಿನ ಸಿನಿಮಾ ಹಾಡುಗಳಿಗಿಂತಲೂ ಬಹಳ ಭಿನ್ನವಾಗಿದ್ದು, ಜನಪದ ಹಾಡಿಗೆ ರ್ಯಾಪ್ ಟಚ್ ಅನ್ನು ನೀಡಲಾಗಿದೆ.

ಮಲೆ ಮಹದೇಶ್ವರ ಸ್ವಾಮಿಯ ‘ಕೆಂಡದೋಕುಳಿ’ ಜನಪದ ಹಾಡಿಗೆ ಹೊಸತನದ ಸ್ಪರ್ಷ ನೀಡಿ ಬಿಡುಗಡೆ ಮಾಡಲಾಗಿದೆ. ತಲೆ ತಲಮಾರುಗಳಿಂದ ಹಾಡಿಕೊಂಡು ಬಂದಿರುವ ಹಾಡಿಗೆ ಆಧುನಿಕ ಇಂಗ್ಲೀಷ್ ರ್ಯಾಪ್ ಅನ್ನು ಸಹ ಸೇರಿಸಲಾಗಿದೆ. ಜನಪದ ಹಾಡುಗಾರರಿಂದಲೇ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ‘ಕೆಂಡದೋಕುಳಿ’ ಹಾಡನ್ನು ಹಾಡಿಸಿರುವುದು ಮಾತ್ರವಲ್ಲದೆ, ಹಾಡಿಗೆ ಜನಪದ ವಾದ್ಯಗಳ ಜೊತೆಗೆ ಆಧುನಿಕ ವಾದ್ಯಗಳನ್ನು ಸಹ ಹಿನ್ನೆಲೆಯಲ್ಲಿ ಬಳಸಿದ್ದಾರೆ. ಈ ಹಾಡು ಮಾದೇಶ್ವರನ ಭಕ್ತರ ಜೊತೆಗೆ ಹೊಸ ತಲೆಮಾರಿನ ಜೆನ್​-ಜಿಗಳಿಗೂ ಹಿಡಿಸುವಂತಿದೆ.

ಈಗ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿರುವ ಹಾಡಿನ ವಿಡಿಯೋನಲ್ಲಿ, ‘ಸಿಟಿ ಲೈಟ್ಸ್’ ಸಿನಿಮಾದ ಮಾಸ್ ದೃಶ್ಯಗಳ ಚಿತ್ರೀಕರಣದ ತುಣುಕುಗಳನ್ನು ನೀಡಲಾಗಿದೆ. ನಿರ್ದೇಶಕ ದುನಿಯಾ ವಿಜಯ್ ಅವರು ಪ್ಯಾಷನೇಟ್ ಆಗಿ, ನಾಯಕ ವಿನಯ್ ಅವರಿಗೆ ನಟಿಸಿ ತೋರಿಸುತ್ತಿರು, ಆಕ್ಷನ್ ಮಾಡಿ ತೋರಿಸುತ್ತಿರುವ ದೃಶ್ಯಗಳು ಇವೆ. ಸಿನಿಮಾನಲ್ಲಿ ಆಕ್ಷನ್ ಯಾವ ರೀತಿ ಇರಲಿದೆ, ಮತ್ತು ವಿನಯ್ ಅವರು ವಿಧೇಯರಾಗಿ ನಿರ್ದೇಶಕರ ಆದೇಶ ಪಾಲಿಸುತ್ತಿರುವುದು ಕಾಣುತ್ತಿದೆ.

‘ಸಿಟಿ ಲೈಟ್ಸ್’ ಸಿನಿಮಾ ಆಕ್ಷನ್ ಭರಿತ ಪ್ರೇಮಕತೆ ಹೊಂದಿರುವ ಸಿನಿಮಾ ಆಗಿದ್ದು, ಬೆಂಗಳೂರಿನ ನಿಜ ಮುಖಗಳ ದರ್ಶನವನ್ನು ಸಿನಿಮಾ ಮಾಡಿಸಲಿದೆ. ಈ ಸಿನಿಮಾ ಮೂಲಕ ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ನಾಯಕಿ ಆಗಿ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ, ವಿನಯ್ ರಾಜ್​​ಕುಮಾರ್, ‘ಇಬ್ಬರು ಮುಗ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸಬೇಕಾಗಿ ಬರುವ ಸವಾಲುಗಳು ಮತ್ತು ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಈ ಸಿನಿಮಾದ ಮುಖ್ಯ ಕಥಾವಸ್ತು, ಇನ್ನು ಮಾದಪ್ಪನ ಹಾಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಹಾಡು ಚಿತ್ರೀಕರಣ ಮಾಡಲು ಅವಕಅಶ ಸಿಕ್ಕಿದ್ದೆ ನನ್ನ ಪುಣ್ಯ’ ಎಂದರು.

ಇದನ್ನೂ ಓದಿ:‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ನಟಿಸಿದ್ದ ಆ ಬಾಲಕಿ ಈಗ ಸ್ಟಾರ್ ನಟಿ

ತಮ್ಮ ಚೊಚ್ಚಲ ಅಭಿನಯದ ಕುರಿತು ಹಂಚಿಕೊಂಡ ಮೊನಿಷಾ, “ಅಭಿನಯದ ಸೂಕ್ಷ್ಮಗಳನ್ನು ಕಲಿಯಲು ಲಂಡನ್‌ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ನನ್ನ ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದು, ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ” ಎಂದರು. ಅಣ್ಣಾವ್ರ ಕುಟುಂಬದ ಕುಡಿಯನ್ನ ನಿರ್ದೇಶಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ವಿಜಯ್ ಕುಮಾರ್, ‘ನಾನು ಡಾ ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನಿಗೆ ಆಕ್ಷನ್-ಕಟ್ ಹೇಳುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ ಹಾಗೂ ಅಪಾರ ಸಂತಸ ತಂದಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *