ತಮಿಳುನಾಡಿಗಾಗಿ ಅವಮಾನ ಎದುರಿಸಲು ಸಿದ್ಧ; ಕಾವೇರಿ, ಮೇಕೆದಾಟು ವಿಚಾರದಲ್ಲಿ ಉದಯನಿಧಿ ವಿರುದ್ಧ ಸಿಎಂ ವಿಜಯ್ ವಾಗ್ದಾಳಿ – Kannada News | Ready To Be Humiliated For Tamil Nadu People CM Vijay hits back to Udhayanidhi Stalin Over Mekedatu

ಚೆನ್ನೈ, ಆಗಸ್ಟ್ 7: ತಮಿಳುನಾಡು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಬಿಸಿ ಬಿಸಿಯಾಗಿ ನಡೆಯುತ್ತಿರುವಾಗಲೇ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಮುಖ್ಯಮಂತ್ರಿ ವಿಜಯ್ (CM Joseph Vijay) ನಡುವೆ ಕಾವೇರಿ ನದಿ ನೀರಿನ ಹಕ್ಕು(Cauvery Water Dispute), ಮೇಕೆದಾಟು ಅಣೆಕಟ್ಟು (Mekedatu Dam Row) ಸಮಸ್ಯೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ಕಾವೇರಿ ನೀರು ಹಂಚಿಕೆ ಹಾಗೂ ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಆಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ತೀವ್ರ ವಾಗ್ದಾಳಿ ನಡೆಯಿತು. ಮೇಕೆದಾಟು ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯುವುದು ಮತ್ತು ಕರ್ನಾಟಕ ಸರ್ಕಾರದೊಂದಿಗೆ ನಡೆಸಲು ಉದ್ದೇಶಿಸಿದ್ದ ಮಾತುಕತೆಗಳ ವಿಷಯವಾಗಿ ಉಭಯ ನಾಯಕರು ಪರಸ್ಪರ ಸವಾಲು ಹಾಕಿಕೊಂಡರು.

ಕರ್ನಾಟಕದಂತೆ ತಮಿಳುನಾಡಿನಲ್ಲೂ ಸಭೆ ನಡೆಸಿ:

ವಿಧಾನಸಭೆಯಲ್ಲಿ ಮೇಕೆದಾಟು ವಿಷಯದ ಕುರಿತು ವಿಶೇಷ ಗಮನಸೆಳೆಯುವ ಸೂಚನೆ ಮಂಡಿಸಿದ ಉದಯನಿಧಿ ಸ್ಟಾಲಿನ್, ರಾಜ್ಯ ಸರ್ಕಾರವು ತಕ್ಷಣವೇ ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು. “ಕರ್ನಾಟಕ ಸರ್ಕಾರ ತನ್ನ ಹಕ್ಕುಗಳನ್ನು ಕಾಯ್ದುಕೊಳ್ಳಲು ಸತತವಾಗಿ ಸರ್ವಪಕ್ಷ ಸಭೆಗಳನ್ನು ನಡೆಸಿ ಒಗ್ಗಟ್ಟು ಪ್ರದರ್ಶಿಸುತ್ತಿದೆ. ಅವರಂತೆ ನಮ್ಮ ರಾಜ್ಯದಲ್ಲೂ ಎಲ್ಲಾ ಪಕ್ಷಗಳು ಒಂದಾಗಿ ನಿಂತು ಮೇಕೆದಾಟು ಯೋಜನೆಯನ್ನು ವಿರೋಧಿಸಬೇಕಿದೆ. ಆದರೆ ನಮ್ಮ ಸರ್ಕಾರ ಸರ್ವಪಕ್ಷ ಸಭೆ ಕರೆಯಲು ಏಕೆ ಹಿಂಜರಿಯುತ್ತಿದೆ?” ಎಂದು ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದರು.

ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ

ಕಾವೇರಿ ನೀರಿನ ವಿಷಯದಲ್ಲಿ ಸಿಎಂ ಸ್ಪಷ್ಟನೆ:

ಕಾವೇರಿ ಮತ್ತು ಮೇಕೆದಾಟು ಕುರಿತು ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ವಿಜಯ್, “ಕಾವೇರಿ ವಿಷಯವು ತಮಿಳುನಾಡಿನ ಜೀವಾಳ ಮತ್ತು ಸೂಕ್ಷ್ಮ ವಿಷಯವಾಗಿದೆ. ನಮ್ಮ ಸರ್ಕಾರಕ್ಕೆ ಇದರ ಬಗ್ಗೆ ರಾಜಕೀಯ ಮಾಡುವ ಉದ್ದೇಶ ಅಥವಾ ಅಗತ್ಯವಿಲ್ಲ. ಮೇಕೆದಾಟು ಅಣೆಕಟ್ಟು ವಿಷಯದ ಕುರಿತು ವಿಧಾನಸಭೆಯಲ್ಲಿ ನಾವೆಲ್ಲರೂ ಅಂಗೀಕರಿಸಿದ ನಿರ್ಣಯವನ್ನು ಪ್ರಧಾನಮಂತ್ರಿಯವರಿಗೆ ಕಳುಹಿಸಿದ್ದೇವೆ. ಇದಲ್ಲದೆ, ಕೇಂದ್ರ ಜಲಶಕ್ತಿ ಸಚಿವಾಲಯದ ಮಾಹಿತಿಯನ್ನು ಅನುಸರಿಸಿ, ಮೇಕೆದಾಟು ಯೋಜನೆಗೆ ಯಾವುದೇ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ನಾವು ಮತ್ತೆ ಪ್ರಧಾನಿಗೆ ನೇರ ಪತ್ರವನ್ನು ಕಳುಹಿಸಿದ್ದೇವೆ” ಎಂದು ಹೇಳಿದರು.

ಬೆಂಗಳೂರಿಗೆ ಹೋಗಲು ಯೋಜಿಸಿದ್ದೆ:

ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಪ್ರವಾಸ ಕೈಗೊಂಡಿದ್ದರ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ಕರ್ನಾಟಕ ರಾಜ್ಯದೊಂದಿಗೆ ಮಾತನಾಡಿ, ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಆ ಪ್ರಯತ್ನ ಮಾಡಲಾಗಿತ್ತು. ಶತ್ರು ರಾಷ್ಟ್ರಗಳೇ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಯತ್ನಿಸುತ್ತಿರುವಾಗ ನಾವೇಕೆ ಪಕ್ಕದ ರಾಜ್ಯದೊಂದಿಗೆ ಮಾತುಕತೆ ನಡೆಸಬಾರದು? ಮಾತುಕತೆಯಿಂದ ತಮಿಳುನಾಡಿನ ಜನರಿಗೆ ಒಳ್ಳೆಯದಾಗುವುದಾದರೆ, ನಾನು ಎಷ್ಟೇ ವಿರೋಧ ಅಥವಾ ಅವಮಾನಗಳನ್ನು ಎದುರಿಸಬೇಕಾಗಿ ಬಂದರೂ, ತಮಿಳುನಾಡಿನ ಜನರಿಗಾಗಿ ಆ ಅವಮಾನವನ್ನು ಸಹಿಸಿಕೊಳ್ಳಲು ಸಿದ್ಧನಿದ್ದೇನೆ” ಎಂದು ವಿಜಯ್ ಹೇಳಿದರು.

ಇದನ್ನೂ ಓದಿ: ‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ

ಏನಿದು ಮೇಕೆದಾಟು ಯೋಜನೆ?

ಮೇಕೆದಾಟು ಯೋಜನೆಯು ಕರ್ನಾಟಕ ಸರ್ಕಾರವು ಬೆಂಗಳೂರು ದಕ್ಷಿಣ ಜಿಲ್ಲೆಯ (ಹಳೆಯ ರಾಮನಗರ) ಕನಕಪುರ ತಾಲೂಕಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಬಹುಪಯೋಗಿ ಕುಡಿಯುವ ನೀರು ಮತ್ತು ಜಲವಿದ್ಯುತ್ ಯೋಜನೆಯಾಗಿದೆ. ಈ ಯೋಜನೆಯ ಅಂದಾಜು ವೆಚ್ಚ ಸುಮಾರು 9,000 ಕೋಟಿ ರೂ. ಆಗಿದ್ದು (2019ರ ದರಗಳ ಪ್ರಕಾರ), ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ಪ್ರಮುಖವಾಗಿ ಕುಡಿಯುವ ನೀರಿನ ಅಗತ್ಯಕ್ಕಾಗಿ ನಿರ್ಮಿಸಲಾಗುತ್ತಿದೆಯೇ ಹೊರತು ನೀರಾವರಿಗಲ್ಲ. ಇದರಿಂದ ತಮಿಳುನಾಡಿಗೆ ನಿಗದಿಯಾಗಿರುವ ಕಾವೇರಿ ನೀರಿನ ಪ್ರಮಾಣದಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ಕರ್ನಾಟಕ ಪ್ರತಿಪಾದಿಸುತ್ತಿದೆ.

ಮೇಲ್ಭಾಗದಲ್ಲಿ ಯಾವುದೇ ಹೊಸ ಅಣೆಕಟ್ಟು ಅಥವಾ ಜಲಾಶಯ ನಿರ್ಮಿಸಿದರೆ ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶದ ರೈತರಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ತಮಿಳುನಾಡಿನ ಆತಂಕ. ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ತೀರ್ಪು ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ ತಮಿಳುನಾಡು ಈ ಯೋಜನೆಗೆ ಸತತ ವಿರೋಧ ವ್ಯಕ್ತಪಡಿಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *