ನವದೆಹಲಿ, ಆಗಸ್ಟ್ 7: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (NTA) ಮೂವರು ವಿಷಯ ತಜ್ಞರಾದ ಪಿ.ವಿ. ಕುಲಕರ್ಣಿ (ರಸಾಯನಶಾಸ್ತ್ರ), ಮನೀಷಾ ಸಂಜಯ್ ಹವಾಲ್ದಾರ್ (ಭೌತಶಾಸ್ತ್ರ) ಮತ್ತು ಮನೀಷಾ ಗುರುನಾಥ್ ಮಾಂಧರೆ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ (NEET Paper Leak) ಮುಖ್ಯ ಮೂಲಗಳಾಗಿದ್ದರು ಎಂದು ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ತಿಳಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮ ಪ್ರಕರಣಗಳ ವಿಚಾರಣೆ ನಡೆಸುವ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆಯು ಇತ್ತೀಚೆಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
ಚಾರ್ಜ್ಶೀಟ್ ಪ್ರಕಾರ, ಎನ್ಟಿಎ ನೇಮಿಸಿದ ಮೂವರು ವಿಷಯ ತಜ್ಞರಾದ ಸಸ್ಯಶಾಸ್ತ್ರದ ತಜ್ಞೆ ಮನೀಷಾ ಗುರುನಾಥ್ ಮಾಂಧರೆ (A-1), ರಸಾಯನಶಾಸ್ತ್ರದ ತಜ್ಞ ಪ್ರಹ್ಲಾದ್ ವಿಠಲರಾವ್ ಕುಲಕರ್ಣಿ (A-2) ಮತ್ತು ಭೌತಶಾಸ್ತ್ರದ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ (A-3) ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು, ಗೌಪ್ಯವಾದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆಗಳನ್ನು ಕಾನೂನುಬಾಹಿರವಾಗಿ ಪಡೆದು ಪರೀಕ್ಷೆಗೆ ಮುಂಚಿತವಾಗಿ ಈ ಹಗರಣದ ಇತರೆ ಆರೋಪಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಸಿಬಿಐ ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024ರ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಿದೆ. ಸೋರಿಕೆಯಾದ ಪ್ರಶ್ನೆಪತ್ರಿಕೆಗಳು ತಜ್ಞರಿಂದ ಕೋಚಿಂಗ್ ಸೆಂಟರ್ ನಿರ್ವಾಹಕರು ಮತ್ತು ಏಜೆಂಟರ ಮೂಲಕ ಅಂತಿಮವಾಗಿ ಅಭ್ಯರ್ಥಿಗಳನ್ನು ತಲುಪಿದ ವ್ಯವಸ್ಥೆಯನ್ನು ತನಿಖೆ ಬಹಿರಂಗಪಡಿಸಿದೆ.
ಇದನ್ನೂ ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೆ 10 ಕೋಟಿ ರೂ. ದಂಡ, 10 ವರ್ಷ ಜೈಲು
ಇತರೆ ಆರೋಪಿಗಳಾದ ತೇಜಸ್ ಶಾ (A-4), ಶಿವರಾಜ್ ಮೋಟೇಗಾಂವ್ಕರ್ (A-5), ಡಾ. ಮನೋಜ್ ಶಿರೂರೆ (A-6), ಮನೀಷಾ ಸಂಜಯ್ ವಾಘ್ಮಾರೆ (A-7), ಧನಂಜಯ್ ಲೋಖಂಡೆ (A-8), ಶುಭಂ ಖೈರ್ನಾರ್ (A-9), ಯಶ್ ಯಾದವ್ (A-10), ಮಾಂಗಿಲಾಲ್ ಬಿವಾಲ್ (A-11), ದಿನೇಶ್ ಬಿವಾಲ್ (A-12) ಮತ್ತು ವಿಕಾಸ್ ಬಿವಾಲ್ (A-13) ಸೋರಿಕೆಯಾದ ಪ್ರಶ್ನೆಗಳನ್ನು ವಿತರಿಸುವಲ್ಲಿ ಮತ್ತು ಹಣದ ವ್ಯವಹಾರದಲ್ಲಿ ವಿಭಿನ್ನ ಪಾತ್ರಗಳನ್ನು ವಹಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ವಶಪಡಿಸಿಕೊಂಡ ಮೊಬೈಲ್ ಫೋನ್ಗಳು, ಪೆನ್ ಡ್ರೈವ್ಗಳು ಮತ್ತು ಇತರ ಡಿಜಿಟಲ್ ಸಾಧನಗಳ ಫಾರೆನ್ಸಿಕ್ ತಪಾಸಣೆಯಿಂದ ಸೋರಿಕೆಯಾದ ನೀಟ್ ಪ್ರಶ್ನೆಗಳ ಪಿಡಿಎಫ್ (PDF) ಮತ್ತು ಇಮೇಜ್ ಫೈಲ್ಗಳು ಪತ್ತೆಯಾಗಿವೆ. ಈ ಫೈಲ್ಗಳನ್ನು ಪರೀಕ್ಷೆಗೂ ಕೆಲವು ದಿನಗಳ ಮೊದಲು ಟೆಲಿಗ್ರಾಮ್, ವಾಟ್ಸಾಪ್ ಮತ್ತು ಇತರ ಮೆಸೇಜಿಂಗ್ ಆ್ಯಪ್ಗಳ ಮೂಲಕ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಶ್ನೆಪತ್ರಿಕೆ ಹರಡಿದ್ದು ಹೇಗೆ?:
ಆರೋಪಿ ಮಾಂಗಿಲಾಲ್ ಬಿವಾಲ್ (A-11) ಟೆಲಿಗ್ರಾಮ್ ಮೂಲಕ ಯಶ್ ಯಾದವ್ (A-10)ನಿಂದ ಸೋರಿಕೆಯಾದ ಪ್ರಶ್ನೆಗಳನ್ನು ಪಡೆದುಕೊಂಡಿದ್ದನು. ನಂತರ ಬಿವಾಲ್ ತನ್ನ 10 ಮತ್ತು 12ನೇ ತರಗತಿಯ ಮೂಲ ಪ್ರಮಾಣಪತ್ರಗಳನ್ನು ಹಾಗೂ ಸಹಿ ಮಾಡಿದ ಖಾಲಿ ಚೆಕ್ ಅನ್ನು ಭದ್ರತೆಗಾಗಿ ಯಶ್ ಯಾದವ್ನ ಸಹಚರನಿಗೆ ನೀಡಿದ್ದನು. ತಪಾಸಣೆಯ ವೇಳೆ ಈ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಸಿಕ್ ಮೂಲದ ಆರೋಪಿ ಶುಭಂ ಮಧುಕರ್ ಖೈರ್ನಾರ್ (A-9)ನಿಂದ ಯಶ್ ಯಾದವ್ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡಿದ್ದನು. ಯಶ್ ಯಾದವ್ ಅವರ ಮೊಬೈಲ್ ಫೋನ್ ಫಾರೆನ್ಸಿಕ್ ತಪಾಸಣೆಯಲ್ಲಿದ್ದಾಗ AP Broker ಎಂದು ಸೇವ್ ಮಾಡಲಾಗಿದ್ದ ಖೈರ್ನಾರ್ ಜೊತೆಗಿನ ಚಾಟ್ಗಳು ಪತ್ತೆಯಾಗಿವೆ.
ಇದನ್ನೂ ಓದಿ: ನೀಟ್ ಕೇಸ್ ಬಳಿಕ ಎಚ್ಚೆತ್ತ ಕೇಂದ್ರ: ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಖೈರ್ನಾರ್ ಈ ಪ್ರಶ್ನೆಗಳನ್ನು ಧನಂಜಯ್ ಲೋಖಂಡೆ (A-8)ಯಿಂದ 25 ಲಕ್ಷದ ಡೀಲ್ ಮೂಲಕ ಪಡೆದುಕೊಂಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಲೋಖಂಡೆಗೆ ಈ ಪ್ರಶ್ನೆಗಳು ಮನೀಷಾ ಸಂಜಯ್ ವಾಘ್ಮಾರೆ (A-7ಯಿಂದ ಸಿಕ್ಕಿದ್ದವು.
ಆರೋಪಿ ವಾಘ್ಮಾರೆ ಎನ್ಟಿಎ ರಸಾಯನಶಾಸ್ತ್ರ ತಜ್ಞ ಪ್ರಹ್ಲಾದ್ ಕುಲಕರ್ಣಿ (A-2) ಜೊತೆ ಸಂಪರ್ಕದಲ್ಲಿದ್ದರು. ವಾಘ್ಮಾರೆ ಎನ್ಟಿಎ ತಜ್ಞರಾದ ಮನೀಷಾ ಮಾಂಧರೆ (A-1) ಮತ್ತು ಕುಲಕರ್ಣಿ (A-2) ಅವರಿಂದ ಸೋರಿಕೆಯಾದ ಬಯಾಲಜಿ ಮತ್ತು ಕೆಮಿಸ್ಟ್ರಿ ಪ್ರಶ್ನೆಗಳನ್ನು ಪಡೆದುಕೊಂಡಿದ್ದರು.
ತನಿಖೆಯ ವೇಳೆ ವಿಚಾರಣೆಗೊಳಗಾದ ಅಭ್ಯರ್ಥಿಯೊಬ್ಬರು ಮತ್ತು ಅವರ ತಂದೆ ನೀಡಿದ ಹೇಳಿಕೆಯ ಪ್ರಕಾರ 4 ಲಕ್ಷಕ್ಕೆ ನೀಟ್-ಯುಜಿ 2026 ರ ಪ್ರಶ್ನೆಗಳನ್ನು ಒದಗಿಸುವುದಾಗಿ ಮತ್ತು ಎನ್ಟಿಎ ವಿಷಯ ತಜ್ಞರಿಂದಲೇ ಆಫ್ಲೈನ್ ರಿವಿಷನ್ ಕ್ಲಾಸ್ಗಳನ್ನು ಕೊಡುವುದಾಗಿ ಆಮಿಷ ಒಡ್ಡಲಾಗಿತ್ತು. 2025ರ ಕೊನೆಯಲ್ಲಿ ಮತ್ತು 2026ರ ಆರಂಭದಲ್ಲಿ ಈ ಸಂಚು ನಡೆದಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
