ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರ ಕೋಟ್ಯಂತರ ಅಭಿಮಾನಿಗಳ 7 ತಿಂಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ವಿಜಯ್ ಅವರ ನಟನೆಯ ಕೊನೆಯ ಚಿತ್ರವಾದ ‘ಜನ ನಾಯಗನ್’ (Jana Nayagan) ಹಲವು ಕಾನೂನು ಮತ್ತು ತಾಂತ್ರಿಕ ಅಡೆತಡೆಗಳನ್ನು ದಾಟಿ ಕೊನೆಗೂ ಸೆನ್ಸಾರ್ ಮಂಡಳಿಯಿಂದ (CBFC) ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಆದರೆ, ಚಿತ್ರಕ್ಕೆ ಸಿಕ್ಕಿರುವ ಪ್ರಮಾಣಪತ್ರ ಮಾತ್ರ ಪ್ರೇಕ್ಷಕರಿಗೆ ತೀವ್ರ ಅಚ್ಚರಿ ಮೂಡಿಸಿದೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಈ ಚಿತ್ರಕ್ಕೆ ‘A’ (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರವನ್ನು ನೀಡಿದೆ. ಜೊತೆಗೆ ಚಿತ್ರದ ಒಟ್ಟು ಅವಧಿ 183 ನಿಮಿಷಗಳು (3 ಗಂಟೆ 3 ನಿಮಿಷ) ಇರಲಿದೆ ಎಂದು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಈ ಚಿತ್ರವು ತೆಲುಗಿನ ಸೂಪರ್ ಹಿಟ್ ‘ಭಗವಂತ್ ಕೇಸರಿ’ ರೀಮೇಕ್ ಎನ್ನಲಾಗುತ್ತಿದ್ದು, ಮೂಲ ಚಿತ್ರಕ್ಕೆ ‘U/A’ ಸರ್ಟಿಫಿಕೇಟ್ ಸಿಕ್ಕಿತ್ತು. ಆದರೆ ತಮಿಳು ಆವೃತ್ತಿಗೆ ‘A’ ಸಿಕ್ಕಿರುವುದು ನೋಡಿದರೆ, ನಿರ್ದೇಶಕ ಹೆಚ್. ವಿನೋದ್ ಅವರು ಕಥೆಯಲ್ಲಿ ಹಾಗೂ ಆ್ಯಕ್ಷನ್ ದೃಶ್ಯಗಳಲ್ಲಿ ಭಾರಿ ಬದಲಾವಣೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ರಿಲೀಸ್ ವಿಳಂಬಕ್ಕೆ ಕಾರಣವೇನು?
ಈ ಸಿನಿಮಾ 2026ರ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಜನವರಿ 9ರಂದೇ ಬಿಡುಗಡೆಯಾಗಬೇಕಿತ್ತು. 2025ರ ಡಿಸೆಂಬರ್ನಲ್ಲೇ ಚಿತ್ರವನ್ನು ಸೆನ್ಸಾರ್ಗೆ ಸಲ್ಲಿಸಲಾಗಿತ್ತು. ಆರಂಭದಲ್ಲಿ ಚಿತ್ರಕ್ಕೆ ‘U/A 16+’ ಸಿಗಬಹುದು ಎನ್ನಲಾಗಿತ್ತಾದರೂ, ಸಮಿತಿಯ ಸದಸ್ಯರೊಬ್ಬರು ಚಿತ್ರದ ಕೆಲವು ದೃಶ್ಯಗಳ ಬಗ್ಗೆ ಆಕ್ಷೇಪ ಎತ್ತಿದ್ದರಿಂದ ಸಿನಿಮಾ ರಿವೈಸಿಂಗ್ ಕಮಿಟಿಗೆ ಹೋಯಿತು. ತದನಂತರ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರಿಂದ ಸೆನ್ಸಾರ್ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿ, ರಿಲೀಸ್ ಮುಂದೂಡಲ್ಪಟ್ಟಿತ್ತು.
ರಾಜಕೀಯ ಯಶಸ್ಸಿನ ನಡುವೆ ಸಿನಿಮಾ ಹಬ್ಬ:
ಚಿತ್ರದ ಬಿಡುಗಡೆ ತಡವಾಗಿದ್ದರಿಂದ ಅಭಿಮಾನಿಗಳಿಗೆ ಬೇಸರವಾಗಿತ್ತಾದರೂ, ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು ಭರ್ಜರಿ ಜಯಗಳಿಸಿ, ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಹೊಸ ಜೋಶ್ ತಂದಿದೆ. ರಾಜಕೀಯ ಪ್ರವೇಶಕ್ಕೂ ಮುನ್ನವೇ ಶೂಟಿಂಗ್ ಮುಗಿಸಿದ್ದ ಈ ಸಿನಿಮಾ, ವಿಜಯ್ ಅವರ 3 ದಶಕಗಳ ಸಿನಿ ಬದುಕಿನ ಕೊನೆಯ ಹೆಜ್ಜೆಯಾಗಿದೆ.
ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾದ ಟಿಕೆಟ್ ದರಕ್ಕೆ ನಟ, ಸಿಎಂ ವಿಜಯ್ ಖಡಕ್ ರೂಲ್ಸ್
ನೂರಾರು ಕೋಟಿ ರೂಪಾಯಿ ಭಾರಿ ಬಜೆಟ್ನ ಸಿನಿಮಾ:
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ನೂರಾರು ಕೋಟಿ ರೂಪಾಯಿ ಭಾರಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಿದೆ. ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನವಿದ್ದು, ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಸೆನ್ಸಾರ್ ಮುಗಿದಿರುವುದರಿಂದ ಜುಲೈ ಕೊನೆಯ ವಾರದಲ್ಲಿ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಯಾದ ನಂತರ ತೆರೆಗೆ ಬರುತ್ತಿರುವ ವಿಜಯ್ ಅವರ ಮೊದಲ ಮತ್ತು ಕೊನೆಯ ಸಿನಿಮಾ ಇದಾಗಿರುವುದರಿಂದ ಬಾಕ್ಸ್ ಆಫೀಸ್ ಮೇಲೆ ಎಲ್ಲರ ಗಮನ ನೆಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.