‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರ್ಮಾಪಕ ಕೆವಿಎನ್ ಹೇಳಿದ್ದೇನು? – Kannada News | Producer KVN Venkat talks about Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಬಿಡುಗಡೆಗೆ ದೇಶ-ವಿದೇಶಗಳ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಯಶ್ ಸೇರಿದಂತೆ ಚಿತ್ರತಂಡ ಇನ್ನೂ ಸಕ್ರಿಯವಾಗಿ ಸಿನಿಮಾದ ಪ್ರಚಾರ ಆರಂಭಿಸಿಲ್ಲ. ಸಿನಿಮಾದ ನಟ-ನಟಿಯರು, ತಂತ್ರಜ್ಞರು ಬೇರೆ ಬೇರೆ ಸಿನಿಮಾಗಾಳ ಸಂದರ್ಶನಗಳಲ್ಲಿ ಭಾಗವಹಿಸಿದಾಗ ‘ಟಾಕ್ಸಿಕ್’ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿದ್ದು, ಉತ್ತರಗಳನ್ನು ನೀಡುತ್ತಿದ್ದಾರೆ. ಇದೀಗ ಸಿನಿಮಾದ ನಿರ್ಮಾಪಕ ವೆಂಕಟ್ ಅವರು ತಮ್ಮದೇ ನಿರ್ಮಾಣದ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಸಜ್ಜಾಗಿ ಅದರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ‘ಟಾಕ್ಸಿಕ್’ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಟಾಕ್ಸಿಕ್’ ಬಹಳ ಮಹತ್ವಾಕಾಂಕ್ಷೆಯ ಸಿನಿಮಾ, ಈ ಚಿತ್ರದ ಅದ್ಧೂರಿತನ ಬಲು ಭಿನ್ನ, ಸಿನಿಮಾನಲ್ಲಿ ಕತೆ ಹೇಳಿರುವ ವಿಧಾನವೂ ಭಿನ್ನ, ಸಿನಿಮಾ ಬಿಡುಗಡೆ ಆಗಿ, ಸ್ಕ್ರೀನ್​​ ಮೇಲೆ ಜನ ನೋಡಿದಾಗ ಖಂಡಿತ ಅವರಿಗೆ ಇಷ್ಟವಾಗುತ್ತದೆ. ಅವರು ನಮ್ಮ ಶ್ರಮವನ್ನು ಮೆಚ್ಚಿಕೊಳ್ಳುತ್ತಾರೆ, ಅವರಿಗೆ ಹೊಸ ಅನುಭವ ಸಿಗಲಿದೆ ಎಂಬ ಬಗ್ಗೆ ಸಂಪೂರ್ಣ ನಂಬಿಕೆ ನನಗೆ ಇದೆ. ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಕಂಟೆಂಟ್, ಕೇವಲ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಎಕ್ಸೈಟ್​​ಮೆಂಟ್ ಬರಲೆಂದು ಮಾತ್ರ, ಸಿನಿಮಾನಲ್ಲಿ ಸಾಕಷ್ಟು ಭಿನ್ನ ವಿಷಯಗಳು ಇವೆ’ ಎಂದಿದ್ದಾರೆ ಕೆವಿಎನ್ ವೆಂಕಟ್.

‘ಸಿನಿಮಾದ ಬಗ್ಗೆ ನಾವು ಪೋಸ್ಟರ್​ನಲ್ಲೇ ಹೇಳಿಬಿಟ್ಟಿದ್ದೀವಿ, ಇದು ದೊಡ್ಡವರಿಗೆ ಹೇಳುವ ಕತೆ, (ಫೇರಿಟೇಲ್ ಫಾರ್ ಗ್ರೋನ್ ಅಪ್ಸ್) ನಾವೇ ಹೇಳುತ್ತಿದ್ದೀವಿ ಇದು ವಯಸ್ಕರಿಗೆ ಮಾತ್ರ. ಮಕ್ಕಳಿಗೆ ಅಲ್ಲ. ಇದು ದೊಡ್ಡವರಿಗಾಗಿಯೇ ಮಾಡಲಾಗಿರುವ ಸಿನಿಮಾ’ ಎಂದು ವೆಂಕಟ್ ಅವರು ಹೇಳಿದ್ದಾರೆ. ಆ ಮೂಲಕ ‘ಟಾಕ್ಸಿಕ್’ ಸಿನಿಮಾ ಭಾರಿ ಅದ್ಧೂರಿಯಾಗಿರಲಿದೆ ಮತ್ತು ಸಿನಿಮಾದ ನಿರೂಪಣೆ, ಪ್ರೆಸೆಂಟೇಷನ್ ಎಲ್ಲವೂ ಬಲು ಭಿನ್ನವಾಗಿ ಇರಲಿದೆ’ ಎಂದಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ವೇದಿಕೆಯಲ್ಲಿ ಯಶ್ ಹವಾ ಕಂಡು ದಂಗಾದ ಬಾಲಿವುಡ್ ಮಂದಿ

‘ಟಾಕ್ಸಿಕ್’ ಸಿನಿಮಾವನ್ನು ಬಲು ಅದ್ಧೂರಿಯಾಗಿ ಕೆವಿಎನ್ ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಜೊತೆಗೆ ಯಶ್ ಅವರು ಸಹ ನಿರ್ಮಾಪಕ ಆಗಿದ್ದಾರೆ. ಈ ವರೆಗೆ ಕೆವಿಎನ್ ನಿರ್ಮಾಣ ಮಾಡಿರುವ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಬಜೆಟ್​​ನ ಸಿನಿಮಾ ‘ಟಾಕ್ಸಿಕ್’ ಈ ಸಿನಿಮಾಕ್ಕೆ ಸುಮಾರು 500 ಕೋಟಿ ಬಜೆಟ್ ಹೂಡಲಾಗಿದೆಯಂತೆ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಕೆಲ ಹಾಡುಗಳಿಗೆ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಸಿನಿಮಾಟೊಗ್ರಫಿ ಮಾಡಿರುವ ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *