ತಾತನಾದ ಡಿಕೆಶಿಗೆ ಶುಭಕೋರಿದ ತೇಜಸ್ವಿ ಸೂರ್ಯ
ಬೆಂಗಳೂರು, ಮೇ 02: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಡಿಕೆಶಿ ಖುಷಿಯಲ್ಲಿ ಆಸ್ಪತ್ರೆಗೆ ಬಂದು ಮೊಮ್ಮಗಳನ್ನು ಮುದ್ದಾಡುವ ಜೊತೆಗೆ ಮಗಳ ಆರೋಗ್ಯ ವಿಚಾರಿಸಿದ್ದರು. ವಿಶೇಷ ಅಂದ್ರೆ ಕಾರ್ಮಿಕ ದಿನಾಚರಣೆ, ಕರ್ನಾಟಕದ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಜನ್ಮದಿನ ಹಾಗೂ ಶುಭ್ರ ಪೂರ್ಣಿಮೆಯ ದಿನವೇ ತಾತನಾಗಿ ಡಿಸಿಎಂ ಭಡ್ತಿ ಪಡೆದಿದ್ದು, ಮಾಧ್ಯಮದವರ ಪ್ರಶ್ನೆಗೆ ಮುಗುಳ್ನಕ್ಕಿ ಸಂತಸ ವ್ಯಕ್ತಪಡಿಸಿದ್ದರು. ಈ ನಡುವೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಡಿರುವ ಎಕ್ಸ್ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.
ಸದಾ ಒಂದಿಲ್ಲೊಂದು ರಾಜಕೀಯ ವಿಚಾರಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಂಸದ ತೇಜಸ್ವಿಸೂರ್ಯ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತವೆ. ಈ ನಡುವೆಯೂ ಅಭಿವೃದ್ಧಿ ವಿಚಾರ ಬಂದಾಗ ಇಬ್ಬರೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಅದರಂತೆ ನಿನ್ನೆಯೂ ವಿವಿಧ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ ನಿಮಿತ್ತ ಡಿಸಿಎಂ ಭಾಗವಹಿಸಿದ್ದ ಕೆಲ ಕಾರ್ಯಕ್ರಮಗಳಲ್ಲಿ ಸಂಸದರೂ ಭಾಗಿಯಾಗಿದ್ದರು. ಈ ವೇಳೆ ತಾನು ತಾತ ಆಗುತ್ತಿದ್ದೇನೆ ಎಂದು ಡಿಕೆಶಿ ತಮ್ಮ ಬಳಿ ಸಂತಸ ಹಂಚಿಕೊಂಡ ವಿಚಾರವನ್ನು ತೇಜಸ್ವಿ ಸೂರ್ಯ ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ಸಂಸದ ತೇಜಸ್ವಿ ಸೂರ್ಯ ಪೋಸ್ಟ್ನಲ್ಲಿ ಏನಿದೆ?
ಇವತ್ತು DCM ಡಿ ಕೆ ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.
ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, “ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ” ಎಂದರು
ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ… pic.twitter.com/XQoLKmZVG8
— Tejasvi Surya (@Tejasvi_Surya) May 1, 2026
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ ಎಂದರು. ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ ಕ್ಷಣ. ಇನ್ನೊಂದು ಕಡೆ ಸಾರ್ವಜನಿಕ ಜವಾಬ್ದಾರಿ. ಆದರೂ ಅವರು ಫ್ಲೈಓವರ್ ಉದ್ಘಾಟನೆ, ಸ್ಕೈವಾಕ್ ಶಂಕುಸ್ಥಾಪನೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರು. The first casualty of public life is personal life ಅಂತ ಮಾತಿದೆ. ಇಂತಹ ಸಂದರ್ಭಗಳಲ್ಲಿ ಆ ಮಾತಿನ ಅರ್ಥ ಇನ್ನಷ್ಟು ಸ್ಪಷ್ಟವಾಗುತ್ತದೆ. ತಾತನಾದ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಗಳು ಐಶ್ವರ್ಯ ಅವರಿಗೆ, ಮಗುಗೆ ಮತ್ತು ಕುಟುಂಬಕ್ಕೆ ಭಗವಂತ ಆಯುಷ್ಯ, ಆರೋಗ್ಯ ಮತ್ತು ಸಂತೋಷ ಕರುಣಿಸಲಿ ಎಂದು ತೇಜಸ್ವಿ ಸೂರ್ಯ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.