Headlines

ತಾಯಿ ಕಣ್ಣೆದುರೇ ಹತ್ಯೆ: ಒಂದು ಎಕರೆ ಜಮೀನಿಗಾಗಿ ಅಣ್ಣನನ್ನೇ ಕೊಂದು ಜೈಲು ಸೇರಿದ ತಮ್ಮ – Kannada News | Haveri Land Dispute: Brother Allegedly Kills Sibling Over One Acre Property

ಹಾವೇರಿ, ಆಗಸ್ಟ್​​ 10: ದೂರದ ಊರಿಗೆ ಕೂಲಿ ಕೆಲಸ ಮಾಡಲು ಹೋಗಿದ್ದ ಅಣ್ಣ ಮನೆಗೆ ಬರುತ್ತಿದ್ದಂತೆ ತಮ್ಮನ ಪಿತ್ತ ನೆತ್ತಿಗೇರಿತ್ತು. ಪ್ರಯಾಣ ಮಾಡಿ ಸುಸ್ತಾಗಿದ್ದ ಅಣ್ಣ, ಅಮ್ಮನ ಕೈ ತುತ್ತು ತಿಂದು ಮಲಗಿದ್ದ. ಆತ ಮಲಗುವುದನ್ನೇ ಕಾಯುತ್ತಿದ್ದ ತಮ್ಮ, ತಾಯಿ ಎದುರೇ ಕಲ್ಲು ಎತ್ತಿಹಾಕಿ ಅಣ್ಣನನ್ನು ಕೊಲೆ ಮಾಡಿದ್ದಾನೆ. ಆ ಮೂಲಕ ಒಂದು ಎಕರೆ ಜಮೀನು ವಿವಾದ ಕೊಲೆಯಲ್ಲಿ (kill) ಅಂತ್ಯವಾಗಿದೆ. ಹಾವೇರಿ (haveri) ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಹತ್ಯೆಯಾದ ವ್ಯಕ್ತಿಯನ್ನು ಸಂತೋಷ ಸವಣೂರು (31) ಎಂದು ಗುರುತಿಸಲಾಗಿದ್ದು, ಆತನ ಕಿರಿಯ ಸಹೋದರ ಕುಮಾರ ಸವಣೂರು ನನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಬ್ಬರು ಒಂದೇ ತಾಯಿಯ ಮಕ್ಕಳು. ಆದರೆ ಒಂದು ಎಕರೆ ಜಮೀನು ಇವರಿಬ್ಬರ ನಡುವೆ ದ್ವೇಷದ ಗೋಡೆ ಕಟ್ಟಿತ್ತು. ಆಗಾಗ ಇಬ್ಬರ ಮಧ್ಯೆ ನಡೆಯುತ್ತಿದ್ದ ಜಗಳ, ಕುಡಿದ ಮತ್ತಿನಲ್ಲಿ ಮತ್ತೊಮ್ಮೆ ಸ್ಫೋಟಗೊಂಡಿದೆ.‌ ಕಿರಿಯ ಸಹೋದರನೇ ಅಣ್ಣನನ್ನು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಗದ್ದೆಯಲ್ಲಿ ಶವ ಹೂತ ಪತ್ನಿ: 6 ತಿಂಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದೇ ರೋಚಕ!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ನಿವಾಸಿಗಳು. ಮೃತನ ಸೋದರಮಾವ (ತಾಯಿಯ ತಮ್ಮ) ತನ್ನ ಅಕ್ಕ ಹಾಗೂ ಆಕೆಯ ಮಕ್ಕಳಿಗಾಗಿ ಒಂದು ಎಕರೆ ಜಮೀನು ನೀಡಿದ್ದು, ತಾಯಿಯನ್ನು ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಈ ಜಮೀನು ಸೇರುತ್ತದೆ ಎಂದು ಹೇಳಿದ್ದರು.

ಕುಡಿತದ ಚಟ: ಜಮೀನಿಗಾಗಿ ಗಲಾಟೆ

ಮೃತ ಸಂತೋಷ ಊರಲ್ಲೇ ಕೂಲಿ ಕೆಲಸ ಮಾಡುತ್ತಾ ಜಮೀನನ್ನೂ ನೋಡಿಕೊಳ್ಳುತ್ತಿದ್ದ. ಹೊರಗೆ ಕೆಲಸ ಮಾಡುತ್ತಿದ್ದ ತಮ್ಮ ಕುಮಾರ ಮಾತ್ರ ಸ್ನೇಹಿತರೊಂದಿಗೆ ಸೇರಿ ಕುಡಿತದ ಚಟಕ್ಕೆ ಬಿದ್ದು, ಆ ಜಮೀನನ್ನು ತನಗೆ ಬಿಟ್ಟುಕೊಡುವಂತೆ ಅಣ್ಣನ ಬಳಿ ಪದೇಪದೇ ಜಗಳ ತೆಗೆಯುತ್ತಿದ್ದ.

ಕಲ್ಲು ಎತ್ತಿಹಾಕಿ ಹತ್ಯೆ

ದೂರದ ಊರಿನಿಂದ ಪ್ರಯಾಣ ಮಾಡಿ ಸುಸ್ತಾಗಿ ಬಂದಿದ್ದ ಅಣ್ಣ ಸಂತೋಷ ಮತ್ತು ತಮ್ಮ ಕುಮಾರ ಇಬ್ಬರೂ ನಿನ್ನೆ ತಡರಾತ್ರಿ ಸಮೀಪದ ಬಾರ್‌ಗೆ ತೆರಳಿ ಮದ್ಯ ಸೇವಿಸಿ ಮನೆಗೆ ಬಂದಿದ್ದರು. ಅಮ್ಮನ ಕೈತುತ್ತು ತಿಂದ ನಂತರ ಸಂತೋಷ ಮನೆಯ ಕಟ್ಟೆಯ ಮೇಲೆ ಮಲಗಿದ್ದಾಗ, ಅಲ್ಲಿಗೆ ಬಂದ ಕುಮಾರ ಕೆದಕಿ ಜಗಳಕ್ಕೆ ನಿಂತಿದ್ದಾನೆ. ತಾಯಿ ಇಬ್ಬರಿಗೂ ಜಗಳ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದರೂ ಲೆಕ್ಕಿಸದ ಕುಮಾರ, ಮನೆ ಅಂಗಳದಲ್ಲೇ ತಾಯಿಯ ಕಣ್ಣೆದುರೇ ಕಟ್ಟೆಯ ಮೇಲೆ ಮಲಗಿದ್ದ ಅಣ್ಣ ಸಂತೋಷನ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ದುರಂತ: ಎಸ್​​​​ಎಸ್​​​​​ಎಲ್​​​ಸಿ ವಿದ್ಯಾರ್ಥಿ ನಿಗೂಢ ಸಾವು

ತೀವ್ರ ಗಾಯಗೊಂಡ ಸಂತೋಷ ಸ್ಥಳದಲ್ಲೇ ಮೃತಪಟ್ಟಿದ್ದು, ಅಣ್ಣನನ್ನು ಕೊಂದ ತಮ್ಮ ಇದೀಗ ಜೈಲು ಪಾಲಾಗಿದ್ದಾನೆ. ಜಮೀನಿಗಾಗಿ ನಡೆದ ರಕ್ತಪಾತದಿಂದಾಗಿ ಒಬ್ಬ ಮಗ ಹೆಣವಾಗಿ, ಇನ್ನೊಬ್ಬ ಮಗ ಜೈಲುಪಾಲಾಗಿದ್ದು, ಇತ್ತ ತಾಯಿಯ ಬದುಕು ಕತ್ತಲೆಯಂತಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *