ಅಹಮದಾಬಾದ್, ಜುಲೈ 18: ದೇಶಾದ್ಯಂತ ಭಾರಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸುತ್ತಿದ್ದ ಉಗ್ರ(Terrorist)ರ ಬೃಹತ್ ಜಾಲವನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಯಶಸ್ವಿಯಾಗಿ ಭೇದಿಸಿದೆ. ಗುಜರಾತ್ನ ಹಲವು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿರುವ ಅಧಿಕಾರಿಗಳು, ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಈ ಜಾಗತಿಕ ಭಯೋತ್ಪಾದಕ ಜಾಲದಕ್ಕೆ ಸಂಬಂಧಿಸಿ ಬಂಧಿತರಾದವರ ಒಟ್ಟು ಸಂಖ್ಯೆ 13ಕ್ಕೇರಿದೆ.
ಈಗಾಗಲೇ ಕಸ್ಟಡಿಯಲ್ಲಿದ್ದ ಎಂಟು ಜನ ಉಗ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಲಭ್ಯವಾದ ರಹಸ್ಯ ಮಾಹಿತಿಯ ಆಧಾರದ ಮೇಲೆ ಎಟಿಎಸ್ ಈ ಹೊಸ ದಾಳಿಗಳನ್ನು ಸಂಘಟಿಸಿತ್ತು. ತನಿಖೆಯ ವೇಳೆ ಬಯಲಾದ ಆಘಾತಕಾರಿ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.
ಆನ್ಲೈನ್ ಮೂಲಕ ಬಾಂಬ್ ತಯಾರಿಕೆ: ಈ ಉಗ್ರರು ಟೈಮರ್ ಬಾಂಬ್ಗಳನ್ನು ಹೇಗೆ ತಯಾರಿಸಬೇಕು ಮತ್ತು ಅವುಗಳನ್ನು ದೂರದಿಂದಲೇ ಹೇಗೆ ಸ್ಫೋಟಿಸಬೇಕು ಎಂಬುದರ ಕುರಿತು ವಿಶೇಷ ತರಬೇತಿ ಪಡೆಯುತ್ತಿದ್ದರು. ಬಾಂಬ್ ಮಾಡಲು ಬೇಕಾದ ರಾಸಾಯನಿಕಗಳನ್ನು ಸ್ಥಳೀಯ ಮಾರುಕಟ್ಟೆ ಹಾಗೂ ಆನ್ಲೈನ್ ಮೂಲಕ ರಹಸ್ಯವಾಗಿ ಖರೀದಿಸಿದ್ದರು.
8 ಕಡೆಗಳಲ್ಲಿ ಪರೀಕ್ಷಾರ್ಥ ಸ್ಫೋಟ: ಕಳೆದ ಮೂರು ವರ್ಷಗಳಲ್ಲಿ ಈ ಜಾಲವು ಗುಜರಾತ್ನ ಎಂಟು ವಿಭಿನ್ನ ರಹಸ್ಯ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟ ನಡೆಸಿ ಯಶಸ್ವಿಯಾಗಿದ್ದವು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಎಕೆ-47 ತರಬೇತಿ: ಬಂಧಿತರ ಪೈಕಿ ಇಬ್ಬರು ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿ ಭೀಕರ ಎಕೆ-47 ರೈಫಲ್ ಚಲಾಯಿಸುವ ತರಬೇತಿ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಜನನಿಬಿಡ ಪ್ರದೇಶಗಳಲ್ಲಿ ಸಾವು-ನೋವು ಹೆಚ್ಚಿಸಲು ‘ಕಾರ್ಬನ್ ಮೊನಾಕ್ಸೈಡ್’ ನಂತಹ ವಿಷಕಾರಿ ಅನಿಲ ತಯಾರಿಸುವ ತಂತ್ರವನ್ನೂ ಇವರು ಕರಗತ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮತ್ತಷ್ಟು ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ
ಆರೋಪಿಗಳ ಡಿಜಿಟಲ್ ಸಾಧನಗಳನ್ನು ತಪಾಸಣೆ ನಡೆಸಿದಾಗ, ಇವರು ಯುವಕರ ತಲೆಕೆಡಿಸಲು ಜಿಹಾದ್ ಸಿದ್ಧಾಂತಕ್ಕೆ ಸಂಬಂಧಿಸಿದ ಬರೋಬ್ಬರಿ 43 ನಿಷೇಧಿತ ಇ-ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡಿರುವುದು ಪತ್ತೆಯಾಗಿದೆ. ಗುಜರಾತ್ನ ‘ಖಾದಿಯಾಸನ್ ಮದರಸಾ’ ಮತ್ತು ‘ನಂದಸನ್’ ಪ್ರದೇಶಗಳಲ್ಲಿ ಈ ಶಂಕಿತರ ಓಡಾಟ ತೀವ್ರವಾಗಿದ್ದರಿಂದ ಎಟಿಎಸ್ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಇವರ ಮೇಲೆ ತೀವ್ರ ಕಣ್ಗಾವಲು ಇಟ್ಟಿದ್ದರು. ಇವರಲ್ಲಿ ಒಬ್ಬ ಆರೋಪಿ ವಡೋದರಾದ ಶಂಕಿತ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದದ್ದು ಪತ್ತೆಯಾಗಿದೆ.
ಕಮಾಂಡೋ ಕಾವಲಿನಲ್ಲಿ ನ್ಯಾಯಾಲಯ
ಭಾರೀ ಕಮಾಂಡೋ ಭದ್ರತೆ: ಹೊಸದಾಗಿ ಬಂಧಿಸಲಾದ ಐದು ಜನ ಆರೋಪಿಗಳಿಗೆ ನ್ಯಾಯಾಲಯವು 7 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದೆ. ಉಗ್ರರ ಮೇಲೆ ಅವರದೇ ಸಹಚರರು ದಾಳಿ ನಡೆಸಿ ಬಿಡಿಸಿಕೊಳ್ಳುವ ಆತಂಕವಿದ್ದ ಹಿನ್ನೆಲೆಯಲ್ಲಿ, ‘ಕಾಡಿ ನ್ಯಾಯಾಲಯ’ದ ಸುತ್ತಮುತ್ತ ನೂರಾರು ಅತ್ಯಾಧುನಿಕ ಶಸ್ತ್ರಸಜ್ಜಿತ ಕಮಾಂಡೋಗಳು ಮತ್ತು ಪೊಲೀಸರನ್ನು ಕೋಟೆಯಂತೆ ನಿಯೋಜಿಸಲಾಗಿತ್ತು.
ಈ ಉಗ್ರರಿಗೆ ಪಾಕಿಸ್ತಾನ ಮತ್ತು ದುಬೈ ಮೂಲದ ಹ್ಯಾಂಡ್ಲರ್ಗಳಿಂದ ಹವಾಲಾ ಹಣ ಸಂದಾಯವಾಗುತ್ತಿತ್ತೇ? ಸ್ಥಳೀಯವಾಗಿ ಇವರಿಗೆ ಆಶ್ರಯ ನೀಡಿದವರು ಯಾರು? ಎಂಬಿತ್ಯಾದಿ ಆಯಾಮಗಳಲ್ಲಿ ಎಟಿಎಸ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಜಂಟಿಯಾಗಿ ಜಾಲವನ್ನು ವಿಸ್ತರಿಸಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರೆ ರಾಜ್ಯಗಳಲ್ಲೂ ಹಲವರ ಬಂಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
