ಧಾರ್ಮಿಕ ಕ್ಷೇತ್ರದಲ್ಲಿ ಪ್ರವಾಸಿಗರ ಹುಚ್ಚಾಟ: ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಕಠಿಣ ನಿಯಮ ಜಾರಿಗೆ ನಿರ್ಧಾರ – Kannada News | Tourist Misconduct at Betada Bhairaveshwara Temple: Strict Rules to Be Enforced in Sakaleshpur

ಪ್ರವಾಸಿಗರ ಹುಚ್ಚಾಟImage Credit source: tv9 kannada

ಹಾಸನ, ಜುಲೈ 13: ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಸಹಸ್ರಾರು ಕುಟುಂಬಗಳ ಆರಾಧ್ಯ ದೈವವಾಗಿರುವ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಾಲಯದಲ್ಲಿ ಪ್ರವಾಸಿಗರ (Tourist) ಮೋಜು-ಮಸ್ತಿ ಮತ್ತು ಹುಚ್ಚಾಟ ಮಿತಿ ಮೀರಿದ್ದು, ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರದ್ಧಾ-ಭಕ್ತಿಯ ತಾಣದಲ್ಲಿ ಪ್ರವಾಸಿಗರು ಡಿಜೆ ಹಾಡುಗಳಿಗೆ ಕುಣಿದು, ರೀಲ್ಸ್ ಮಾಡುತ್ತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ, ಕ್ಷೇತ್ರಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ಮತ್ತು ಶಾಸಕರ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಕೃತಿ ಸೊಬಗಿನ ತಾಣವೇ ಸ್ಥಳೀಯರಿಗೆ ಕಂಟಕ!

ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟದ ತಪ್ಪಲು ಮರಗುಂದ ಗ್ರಾಪಂ ಬಳಿಯ ಸಹಸ್ರಾರು ವರ್ಷಗಳ ಪುರಾತನ ಬೆಟ್ಟದ ಭೈರವೇಶ್ವರ ದೇಗುಲ ಈ ಭಾಗದ ಸಹಸ್ರಾರು ಕುಟುಂಬಗಳ ಮನೆದೇವರು. ಮರಗುಂದ ಗ್ರಾಪಂ ವ್ಯಾಪ್ತಿಯಲ್ಲಿ ಈ ಪುರಾತನ ದೇಗುಲ ನೆಲೆಸಿದೆ. ಒಂದು ಕಡೆ ಪಾಂಡವರ ಬೆಟ್ಟ, ಇನ್ನೊಂದೆಡೆ ಜೇನುಕಲ್ ಬೆಟ್ಟ, ದೀಪದ ಕಲ್ಲು ಹಾಗೂ ಮೂರ್ಕಣ್ಣು ಗುಡ್ಡಗಳ ವಿಶಾಲ ಹಸಿರ ರಾಶಿಯ ನಡುವೆ ಇರುವ ಈ ಕ್ಷೇತ್ರವನ್ನು ‘ಕರ್ನಾಟಕದ ಸ್ವಿಡ್ಜರ್ಲ್ಯಾಂಡ್’ ಎಂದೇ ಕರೆಯಲಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿಗೆ ಹತ್ತಾರು ಸಿನೆಮಾ ಚಿತ್ರೀಕರಣ ತಂಡಗಳು ಬಂದು ಶೂಟಿಂಗ್ ಮಾಡಿದ್ದು, ಇದೀಗ ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್ ಆಗಿದೆ. ಆದರೆ, ಇದೇ ಪ್ರಕೃತಿ ಸೊಬಗು ಸದ್ಯ ಸ್ಥಳೀಯರಿಗೆ ಕಂಟಕವಾಗಿ ಪರಿಣಮಿಸಿದೆ.

ಇದನ್ನೂ ಓದಿ: Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!

ನಿನ್ನೆ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರ ದಂಡು ದೇವಾಲಯ ಎನ್ನುವುದನ್ನು ಮರೆತು ತುಂಡುಡುಗೆಯಲ್ಲಿ ಓಡಾಡುತ್ತಾ, ಡಿಜೆ ಹಾಡು ಹಾಕಿಕೊಂಡು ಕುಣಿದು ಕುಪ್ಪಳಿಸಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೊಶ ಹೊರಹಾಕಿದ ಬೆನ್ನಲ್ಲೇ ಇಂದು ತಹಶೀಲ್ದಾರ್, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ಸಭೆ ಮಾಡಿದ್ದಾರೆ.

ಪ್ರವಾಸಿಗರು ಬರಲಿ, ಆದರೆ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಬೇಡ: ಶಾಸಕ ಸಿಮೆಂಟ್ ಮಂಜು

ಸಭೆ ಬಳಿಕ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ‘‘ಪ್ರವಾಸಿಗರು ಬರಲಿ, ನಿಸರ್ಗ ನೋಡಿ ಖುಷಿ ಪಡಲಿ, ಆದರೆ ಇಲ್ಲಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಬೇಡ. ದೇಗುಲದ ಕಟ್ಟೆ ಮೇಲೆ ಹತ್ತಿ ಫೋಟೋ ತೆಗೆಯೋದು ಬೇಡ. ದಿನನಿತ್ಯ ಇಲ್ಲಿ ಪೊಲೀಸ್ ಕಾವಲು ಇರಬೇಕು, ಮೊಬೈಲ್ ಬಳಸದಂತೆ ಎಚ್ಚರಿಕೆ ವಹಿಸಬೇಕು ಎನ್ನುವ ಕಠಿಣ ನಿಯಮಗಳನ್ನ ಜಾರಿ ಮಾಡಲು ತೀರ್ಮಾನ ಮಾಡಿದ್ದು, ಜೊತೆಗೆ ದೇವಾಲಯದ ಆವರಣದಲ್ಲಿ ಅಗತ್ಯ ಮೂಲಸೌಲಭ್ಯ ನೀಡುವುದಾಗಿ’’ ಹೇಳಿದ್ದಾರೆ.

ಸ್ಥಳೀಯರ ನಿದ್ದೆಗೆಡಿಸಿದ ಪ್ರವಾಸಿಗರ ಹುಚ್ಚಾಟ

ಹಾಸನದಿಂದ ಸಕಲೇಶಪುರ ತಲುಪಿ ಅಲ್ಲಿಂದ ಹಾನುಬಾಳ್ ಮೂಲಕ ದೇವಾಲದ ಕೆರೆ ದಾಟಿ ಮುಂದೆ ಹೋದರೆ ಸಿಗುವುದು ಮರಗುಂದ ಗ್ರಾಮ. ಧಾರ್ಮಿಕ ಕ್ಷೇತ್ರದಲ್ಲಿ ಮನಸ್ಸಿಗೆ ನೆಮ್ಮದಿ ಅರಸುವುದು ಬಿಟ್ಟು ಪ್ರವಾಸಿಗರು ಮಾಡುತ್ತಿರುವ ಹುಚ್ಚಾಟ ಸ್ಥಳೀಯರನ್ನ ನಿದ್ದೆಗೆಡಿಸಿದೆ. ಯಾರಿಗೆ ದೂರು ನೀಡಿದರು ಕ್ರಮಕೈಗೊಳ್ಳ, ಕೆಲವರಂತೂ ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡಲು ಬರುತ್ತಾರೆ. ಬಂದ ಪ್ರವಾಸಿಗರು ದೇವರ ದರ್ಶನ ಮಾಡಿ ಹೋದರೆ ಏನೂ ಸಮಸ್ಯೆ ಇಲ್ಲ, ಆದರೆ ಬರುವುದೇ ರೀಲ್ಸ್, ಫೋಟೋಗಾಗಿ, ಅದಕ್ಕಾಗಿ ಕೆಲ ಪ್ರವಾಸಿಗರು ಮಾಡುವ ಹುಚ್ಚಾಟದ ವಿಡಿಯೋ ಆಗಾಗ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಅಂಬೋಲಿ ಫಾಲ್ಸ್​​ಗೆ ಜೀವ ಕಳೆ: ಜಲಪಾತ ನೋಡಲು ಮುಗಿಬಿದ್ದ ಪ್ರವಾಸಿಗರು

ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ಬಳಿ ಯಾವುದೇ ಮೂಲಸೌಕರ್ಯಗಳಿಲ್ಲ. ಈ ವರ್ಷದ ಮಳೆಗಾಲದಲ್ಲಿ ತಡೆಗೋಡೆ ಕುಸಿದು ಬಿದ್ದಿರುವುದರಿಂದ ದೇಗುಲಕ್ಕೆ ಅಪಾಯ ಎದುರಾಗುವ ಆತಂಕವೂ ಇದೆ. ಪರಿಸ್ಥಿತಿ ಹೀಗಿದ್ದರೂ ಪ್ರವಾಸಿಗರು ಜವಾಬ್ದಾರಿಯಿಲ್ಲದೆ ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕ್ಷೇತ್ರದ ಪಾವಿತ್ರತೆ ಕಾಪಾಡಲು ಮುಂದಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:09 pm, Mon, 13 July 26

Source link

Leave a Reply

Your email address will not be published. Required fields are marked *