ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನದ ವರದಿಗಳ ಕುರಿತು ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಇತ್ತೀಚೆಗೆ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಹಿರಿಯ ನಟ ನಾಸಿರುದ್ದೀನ್ ಶಾ (Naseeruddin Shah) ಅವರು ಅನುಪಮ್ ಖೇರ್ ಅವರನ್ನು ‘ಜೋಕರ್’ (Clown) ಎಂದು ಕರೆದಿದ್ದ 2020ರ ಹಳೆಯ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಲು ಪ್ರಾರಂಭಿಸಿದೆ. ಅನುಪಮ್ ಖೇರ್ ಹೇಳಿಕೆಯನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು, 2020ರಲ್ಲಿ ನಾಸಿರುದ್ದೀನ್ ಶಾ ಅವರು ಖೇರ್ ಅವರ ರಾಜಕೀಯ ನಿಲುವುಗಳನ್ನು ಟೀಕಿಸಿದ್ದ ವಿಡಿಯೋವನ್ನು ಮತ್ತೆ ಹಂಚಿಕೊಳ್ಳುತ್ತಿದ್ದಾರೆ.
‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ರಾಮಮಂದಿರದ ದೇಣಿಗೆ ಕಳ್ಳತನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಅನುಪಮ್ ಖೇರ್, ‘ಇದು ತುಂಬಾ ಸಣ್ಣ ವಿಷಯ’ ಎಂದು ತಳ್ಳಿಹಾಕಿದ್ದರು. ಅಲ್ಲದೆ, ಇದನ್ನು ಮೊಘಲರ ಕಾಲದಲ್ಲಿ ನಡೆದ ದೇವಸ್ಥಾನಗಳ ಧ್ವಂಸ ಮತ್ತು ಲೂಟಿಗೆ ಹೋಲಿಸಿದ್ದರು. ಅವರ ಈ ಹೇಳಿಕೆ ಟ್ರೋಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ನಾಸಿರುದ್ದೀನ್ ಶಾ ಅವರ ಹಳೇ ವಿಡಿಯೋ ವೈರಲ್ ಆಗುತ್ತಿದೆ.
Ouch!!!!! If words could kill, Anupam Kher just spit roasted Naseeruddin Shah. pic.twitter.com/VmjNDF8Wbn
— Abhijit Iyer-Mitra (@Iyervval) July 13, 2026
ದೇಣಿಗೆ ಕಳ್ಳತನದ ಬಗ್ಗೆ ಅನುಪಮ್ ಖೇರ್ ಹೇಳಿದ್ದು ಏನು?
‘ಮೊಘಲರು ನಮ್ಮ ದೇವಸ್ಥಾನಗಳನ್ನು ಧ್ವಂಸಗೊಳಿಸಿ, ಬ್ರಾಹ್ಮಣರನ್ನು ಕೊಂದಾಗ, ದೇವಸ್ಥಾನದ ಸಂಪತ್ತನ್ನು ಲೂಟಿ ಮಾಡಿದಾಗ ಮತ್ತು ಆವರಣದೊಳಗೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದಾಗ ನಿಜವಾದ ಲೂಟಿ ನಡೆದಿತ್ತು. ಅದು ಇದಕ್ಕಿಂತ ದೊಡ್ಡ ದುರಂತವಾಗಿತ್ತು. ಆ ನೋವನ್ನೇ ನಾವು ಮರೆತು ಮುನ್ನಡೆದಿರುವಾಗ, ಈ ಕಳ್ಳತನದ ವಿಷಯ ತುಂಬಾ ಸಣ್ಣದು. ಜನರು ಇದನ್ನು ದೊಡ್ಡ ಇಶ್ಯೂ ಮಾಡುತ್ತಿದ್ದಾರೆ’ ಎಂದು ಖೇರ್ ಹೇಳಿದ್ದರು. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಯಿತು.
ನಾಸಿರುದ್ದೀನ್ ಶಾ ಅವರ ಹಳೇ ವಿಡಿಯೋ ರೀ-ಟ್ರೆಂಡ್:
ಹಳೇ ಸಂದರ್ಶನದಲ್ಲಿ ನಾಸಿರುದ್ದೀನ್ ಶಾ ಅವರು ಅನುಪಮ್ ಖೇರ್ ಬಗ್ಗೆ ಕಟು ಟೀಕೆ ಮಾಡಿದ್ದರು. ‘ಅನುಪಮ್ ಖೇರ್ ಅವರಂತಹ ವ್ಯಕ್ತಿಗಳು ಸರ್ಕಾರದ ಪರವಾಗಿ ಹೆಚ್ಚು ಮಾತನಾಡುತ್ತಾರೆ. ಆದರೆ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆತ ಒಬ್ಬ ಜೋಕರ್. ಎನ್ಎಸ್ಡಿ ಮತ್ತು ಎಫ್ಟಿಐಐನಲ್ಲಿ ಅವರ ಜೊತೆಗಿದ್ದ ಸಮಕಾಲೀನರು ಅವರ ಚಮಚಾಗಿರಿ ಮತ್ತು ಮುಖಸ್ತುತಿ ಮಾಡುವ ಗುಣದ ಬಗ್ಗೆ ಸಾಕ್ಷಿ ಹೇಳಬಲ್ಲರು. ಅದು ಅವರ ರಕ್ತದಲ್ಲೇ ಇದೆ. ಅದನ್ನು ಅವರು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಟುವಾಗಿ ಟೀಕಿಸಿದ್ದರು.
ಇದನ್ನೂ ಓದಿ: ‘ಧುರಂಧರ್ 2’ ಪ್ರೊಪಗಾಂಡ ಸಿನಿಮಾ ಎಂದವರಿಗೆ ತಿರುಗೇಟು ನೀಡಿದ ಅನುಪಮ್ ಖೇರ್
ಅಂದು ತಿರುಗೇಟು ನೀಡಿದ್ದ ಅನುಪಮ್ ಖೇರ್:
ನಾಸಿರುದ್ದೀನ್ ಶಾ ಅವರ ಈ ಆರೋಪಕ್ಕೆ ಅಂದೇ ‘ಎಕ್ಸ್’ (ಟ್ವಿಟರ್) ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದ ಅನುಪಮ್ ಖೇರ್, ‘ನೀವು ಇಷ್ಟೊಂದು ಯಶಸ್ಸು ಗಳಿಸಿದ್ದರೂ ನಿಮ್ಮ ಇಡೀ ಜೀವನವನ್ನು ನಿರಾಶೆಯಲ್ಲೇ ಕಳೆದಿದ್ದೀರಿ. ನೀವು ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ಶಾರುಖ್ ಖಾನ್ ಮತ್ತು ವಿರಾಟ್ ಕೊಹ್ಲಿಯವರನ್ನು ಕೂಡ ಟೀಕಿಸಿದ್ದೀರಿ. ಹಾಗಾಗಿ ನಿಮ್ಮ ಟೀಕೆಯ ಪಟ್ಟಿಯಲ್ಲಿ ನಾನಿರುವುದು ನನಗೆ ಹೆಮ್ಮೆಯ ವಿಷಯವೇ. ಅವರಲ್ಲಿ ಯಾರೂ ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ ಇಷ್ಟು ವರ್ಷಗಳಿಂದ ನೀವು ತಿನ್ನುತ್ತಿರುವ ವಸ್ತುಗಳ ಪ್ರಭಾವದಿಂದಾಗಿ ನಿಮಗೆ ಯಾವುದು ಸರಿ, ಯಾವುದು ತಪ್ಪು ಎಂಬ ವ್ಯತ್ಯಾಸವೇ ತಿಳಿಯುತ್ತಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತು’ ಎಂದು ಖೇರ್ ತಿರುಗೇಟು ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
