ಆಯುರ್ವೇದದ ಪ್ರಕಾರ, ಅಭ್ಯಂಗವು ಅತ್ಯುತ್ತಮ ದಿನಚರ್ಯೆಗಳಲ್ಲಿ ಒಂದಾಗಿದೆ. ಅಭ್ಯಂಗ ಎಂದರೆ ಬೆಚ್ಚಗಿನ ಎಣ್ಣೆಯನ್ನು ನಿಯಮಿತವಾಗಿ ಇಡೀ ಶರೀರಕ್ಕೆ ಮರ್ಧನ ಮಾಡುವುದು. ಈ ವಿಧಾನವು ಜನನದಿಂದ ವೃದ್ಧಾಪ್ಯದವರೆಗೆ ಎಲ್ಲ ವಯಸ್ಸಿನವರಿಗೂ ಉಪಯುಕ್ತವಾದ, ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಆರೈಕೆ ವಿಧಾನವಾಗಿದೆ. ಭಾರತೀಯ ಸಂಪ್ರದಾಯದಲ್ಲಿ ಅಭ್ಯಂಗವು ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ದಿನಚರ್ಯೆಯಾಗಿ ಪರಿಗಣಿಸಲಾಗುತ್ತದೆ. ಹಾಗಾದರೆ ಅಭ್ಯಂಗ ಸ್ನಾನದಿಂದ ಸಿಗುವ ಪ್ರಯೋಜನಗಳೇನು, ಯಾಕೆ ಇದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಹಾಸನ ಎಸ್ಡಿಎಂ ಆಯುರ್ವೇದ ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸಿಂಧೂರ ವಿ ಪ್ರಭು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಅಭ್ಯಂಗ ಸ್ನಾನದ ಪ್ರಯೋಜನಗಳು:
ಡಾ. ಸಿಂಧೂರ ಅವರು ಹೇಳುವ ಪ್ರಕಾರ, ನಿತ್ಯ ಅಭ್ಯಂಗ ಮಾಡುವುದರಿಂದ ಪ್ರಕುಪಿತ ವಾತದೋಷವನ್ನು, ದೇಹದ ಆಯಾಸವನ್ನು ಮತ್ತು ದೌರ್ಬಲ್ಯವನ್ನು ಶಮನಗೊಳಿಸಲು ಸಹಾಯವಾಗುತ್ತದೆ. ನವಜಾತ ಶಿಶುಗಳಿಗೆ ಶುದ್ಧ ನವನೀತ (ಬೆಣ್ಣೆ) ಬಳಸುವುದು ಅತ್ಯಂತ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಇದು ಚರ್ಮಕ್ಕೆ ಮೃದುವಾಗಿ ಹೊಂದಿಕೊಂಡು ಮಗುವಿನ ದೇಹದ ಸ್ವಾಭಾವಿಕ ಉಷ್ಣತೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ. ಶುದ್ಧ ಎಳ್ಳೆಣ್ಣೆ ಚರ್ಮಕ್ಕೆ ಸಮರ್ಪಕ ಪೋಷಣೆಯನ್ನು ನೀಡುವುದರೊಂದಿಗೆ ದೇಹದ ಬಲವರ್ಧನೆಗೂ ಸಹಾಯಕವಾಗಿದೆ. ಶುದ್ಧ ಕೊಬ್ಬರಿ ಎಣ್ಣೆ ಶೀತ ಗುಣವನ್ನು ಹೊಂದಿರುವುದರಿಂದ ಬೇಸಿಗೆಯ ಸಮಯದಲ್ಲಿ ಬಳಸಲು ಅನುಕೂಲಕರವಾಗಿದೆ.
ಇದರ ಜೊತೆಗೆ ವಿವಿಧ ಔಷಧೀಯ ತೈಲಗಳ ಬಳಕೆಯೂ ಮಕ್ಕಳ ಆರೈಕೆಯಲ್ಲಿ ಮಹತ್ವವನ್ನು ಹೊಂದಿದೆ. ಕ್ಷೀರಬಲ ತೈಲವು ಮಾಂಸಖಂಡಗಳು, ಸ್ನಾಯುಗಳು ಹಾಗೂ ಸಂಧಿಗಳಿಗೆ ಬಲ ನೀಡಲು ಸಹಕಾರಿಯಾಗಿದ್ದು, ವಾತಶಮನ ಗುಣವನ್ನು ಹೊಂದಿದೆ. ಅಶ್ವಗಂಧಾ ತೈಲವು ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ಒದಗಿಸುವುದರೊಂದಿಗೆ ಉತ್ತಮ ನಿದ್ರೆಗೆ ಸಹ ಸಹಾಯ ಮಾಡುತ್ತದೆ. ಕೆಲವು ಮಕ್ಕಳು ಅತಿಯಾಗಿ ಅಳುವುದು, ಚಿಡಿಚಿಡಿತನ ಅಥವಾ ಅಶಾಂತಿಯನ್ನು ತೋರಿಸಬಹುದು. ಅಭ್ಯಂಗವು ಇಂತಹ ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ. ಮರ್ಧನದ ಸಮಯದಲ್ಲಿ ದೇಹದಲ್ಲಿ ರಕ್ತಸಂಚಾರ ಸುಧಾರಿಸಿ ನರಮಂಡಲವು ಶಾಂತಗೊಳ್ಳುತ್ತದೆ. ಇದರ ಪರಿಣಾಮವಾಗಿ ಮಗು ಹೆಚ್ಚು ಆರಾಮವಾಗಿದ್ದು, ಸುಖಕರ ನಿದ್ರೆ ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡಿದರೆ ಹೃದಯ ಮತ್ತು ಮೆದುಳು ಆರೋಗ್ಯವಾಗಿರುತ್ತದೆಯೇ?
ಆತಂಕವನ್ನು ದೂರ ಮಾಡಿ ಮನಸ್ಸಿಗೆ ಶಾಂತಿ ಮತ್ತು ತೃಪ್ತಿಯ ಭಾವನೆಯನ್ನು ನೀಡುತ್ತದೆ. ತಾಯಿ-ತಂದೆ ಮತ್ತು ಮಗುವಿನ ನಡುವೆ ಪ್ರೀತಿ, ಭದ್ರತೆ ಮತ್ತು ಆತ್ಮೀಯತೆಯ ಭಾವನೆ ಹೆಚ್ಚುತ್ತದೆ. ಈ ಸ್ಪರ್ಶದ ಆರೈಕೆ ಮಗುವಿಗೆ ಮಾನಸಿಕ ಬೆಳವಣಿಗೆಯಿಗೂ ಸಹಕಾರಿಯಾಗುತ್ತದೆ. ಮಕ್ಕಳು ಹೆಚ್ಚು ಆಟವಾಡುವುದು, ಓದುವುದು ಅಥವಾ ಪರದೆಗಳ (ಮೊಬೈಲ್/ಟಿವಿ) ಬಳಕೆ ಹೆಚ್ಚಿರುವುದರಿಂದ ಕಣ್ಣಿಗೆ ದಣಿವಾಗಬಹುದು. ಆದರೆ ಈ ಅಭ್ಯಂಗದಿಂದ ದೇಹ ಮತ್ತು ಮನಸ್ಸು ಆರಾಮ ಪಡೆಯುವುದರಿಂದ ಕಣ್ಣುಗಳಿಗೂ ವಿಶ್ರಾಂತಿ ದೊರೆಯುತ್ತದೆ.
ಮಕ್ಕಳಲ್ಲಿ ಕೆಲವೊಮ್ಮೆ ಅಜೀರ್ಣ, ಹೊಟ್ಟೆ ಉಬ್ಬರ, ಗಾಳಿ ತುಂಬುವುದು ಅಥವಾ ಹಸಿವು ಕಡಿಮೆಯಾಗುವಂತಹ ಸಮಸ್ಯೆಗಳು ಕಾಣಿಸಬಹುದು. ಅಭ್ಯಂಗದಿಂದ ಇಂತಹ ಸಮಸ್ಯೆಗಳು ಕಡಿಮೆಯಾಗಲು ಸಹಕಾರಿಯಾಗುತ್ತದೆ. ಅಷ್ಟೇಅಲ್ಲ, ಅಭ್ಯಂಗವು ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ. ಇದರಿಂದ ಜಠರಾಗ್ನಿ ಸಕ್ರಿಯವಾಗಿ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿರುವುದರಿಂದ ಪೋಷಕಾಂಶಗಳು ದೇಹಕ್ಕೆ ಸಮರ್ಪಕವಾಗಿ ಲಭ್ಯವಾಗುತ್ತವೆ. ಇದರಿಂದ ಮಗುವಿನ ಆರೋಗ್ಯ ಉತ್ತಮವಾಗುತ್ತದೆ. ಸರಿಯಾದ ವಿಧಾನದಲ್ಲಿ ಮತ್ತು ಸೂಕ್ತ ಎಣ್ಣೆಗಳನ್ನು ಬಳಸಿಕೊಂಡು ಅಭ್ಯಂಗ ಸ್ನಾನ ಮಾಡಿಸುವುದರಿಂದ ಮಕ್ಕಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆ ಉತ್ತಮವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
