Headlines

ನಿಶ್ಚಿತಾರ್ಥ ಮುಗಿದು ವಾರವಷ್ಟೇ ಕಳೆದಿತ್ತು, ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ಕರಾವಳಿಯಲ್ಲಿ ಕೇರಳದ ನಾವಿಕ ಬಲಿ – Kannada News | Kerala Sailor Killed by Russian Missile in Ukraine: Akhil Joyan’s Tragic End After Engagement

ಟೆಹ್ರಾನ್, ಜುಲೈ 21: ನಿಶ್ಚಿತಾರ್ಥ ಮುಗಿದು ಕೇವಲ ಒಂದು ವಾರವಷ್ಟೇ ಆಗಿತ್ತು, ಕೆಲವೇ ತಿಂಗಳುಗಳಲ್ಲಿ ಮದುವೆಯಾಗುವುದು ಕೂಡ ನಿಶ್ಚಯವಾಗಿತ್ತು. ಹೊಸ ಕನಸುಗಳು, ಹೊಸ ಕನಸುಗಳು, ಹೊಸ ಮನೆ ಮತ್ತು ಕುಟುಂಬಕ್ಕೆ ಉತ್ತಮ ಭವಿಷ್ಯ ಕಟ್ಟಿಕೊಡುವ ಹಂಬಲ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಸಾವಿರಾರು ಮೈಲಿಗಳ ದೂರದಲ್ಲಿ ನಡೆಯುತ್ತಿರುವ ರಷ್ಯಾ-ಉಕ್ರೇನ್(Ukraine) ಯುದ್ಧದ ಜ್ವಾಲೆಗೆ ಕೇರಳದ 26 ವರ್ಷದ ಅಮಾಯಕರೊಬ್ಬರು ಬಲಿಯಾಗಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕುಂಡು ನಿವಾಸಿ, ನಾವಿಕ ಅಖಿಲ್ ಜೋಯನ್ ಉಕ್ರೇನ್‌ನ ಒಡೆಸಾ ಬಂದರು ಕರಾವಳಿಯಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾದ ನಾಲ್ವರು ಭಾರತೀಯರಲ್ಲಿ ಒಬ್ಬರು.

ನಿಶ್ಚಿತಾರ್ಥವಾಗಿ ತಿಂಗಳು ಕಳೆಯುವಷ್ಟರಲ್ಲೇ ವಾಪಸ್ ಹೊರಟಿದ್ದ ಅಖಿಲ್
ಅಖಿಲ್ ಜೋಯನ್ ಕೇವಲ 19 ನೇ ವಯಸ್ಸಿನಲ್ಲಿಯೇ ಮರ್ಚೆಂಟ್ ನೇವಿಗೆ ಸೇರಿದ್ದರು. ಕಳೆದ 6 ವರ್ಷಗಳಿಂದ ಹಡಗಿನಲ್ಲಿ ನಾವಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಖಿಲ್, ತಮ್ಮ ಶ್ರಮದಿಂದಲೇ ಇತ್ತೀಚೆಗಷ್ಟೇ ಸುಂದರವಾದ ಹೊಸ ಮನೆಯೊಂದನ್ನು ಕಟ್ಟಿದ್ದರು. ಎಲೆಕ್ಟ್ರಿಕಲ್ ಅಂಗಡಿ ನಡೆಸುವ ತಂದೆ ಜೋಯನ್ ಮತ್ತು ವಿಮಾ ಏಜೆಂಟ್ ತಾಯಿ ಸ್ಯಾಲಿ ದಂಪತಿಗೆ ಅಖಿಲ್ ಏಕೈಕ ಪುತ್ರ.

ಕೆಲವೇ ದಿನಗಳ ಹಿಂದೆಯಷ್ಟೇ ಆಲಪ್ಪುಳ ಮೂಲದ ಯುವತಿಯೊಂದಿಗೆ ಅಖಿಲ್ ಅವರ ನಿಶ್ಚಿತಾರ್ಥ ವೈಭವದಿಂದ ನೆರವೇರಿತ್ತು. ಇನ್ನೆರಡು ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಯ ನಂತರ ಈ ಅಪಾಯಕಾರಿ ಹಡಗಿನ ಕೆಲಸ ತೊರೆದು ಬೇರೆಡೆ ಹೊಸ ಕೆಲಸಕ್ಕೆ ಸೇರಬೇಕೆಂಬುದು ಅವರ ಕನಸಾಗಿತ್ತು. ಆದರೆ, ನಿಶ್ಚಿತಾರ್ಥ ಮುಗಿಸಿ ಕೆಲಸಕ್ಕೆ ಮರಳಿದ ಕೇವಲ ಒಂದು ತಿಂಗಳಿನಲ್ಲೇ ಈ ಭೀಕರ ದುರಂತ ಸಂಭವಿಸಿದೆ.

ಮತ್ತಷ್ಟು ಓದಿ: ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್

ಕತ್ತಲೆಯಲ್ಲಿ ಮುಳುಗಿದ ಹುಟ್ಟೂರು: ಇ-ಮೇಲ್ ಮೂಲಕ ಬಂದ ಆಘಾತಕಾರಿ ಸುದ್ದಿ
ಸೋಮವಾರ ಸಂಜೆ ಅಖಿಲ್ ಕೆಲಸ ಮಾಡುತ್ತಿದ್ದ ಶಿಪ್ಪಿಂಗ್ ಕಂಪನಿಯಿಂದ ಕುಟುಂಬಕ್ಕೆ ಬಂದ ಒಂದೇ ಒಂದು ಇಮೇಲ್ ಇಡೀ ಕುಟುಂಬದ ಕನಸುಗಳನ್ನು ನುಚ್ಚುನೂರು ಮಾಡಿತು. ಅಖಿಲ್ ತಮ್ಮ ಹುಟ್ಟೂರಿನಲ್ಲಿ ಅತ್ಯಂತ ಜನಪ್ರಿಯ ಮತ್ತು ಶಿಸ್ತಿನ ಯುವಕನಾಗಿದ್ದರು.

ಉಕ್ರೇನ್‌ನ ‘ಒಡೆಸಾ’ ಕರಾವಳಿಯಲ್ಲಿ ನಡೆದಿದ್ದೇನು?
ವಿದೇಶಿ ಮಾಧ್ಯಮಗಳ ಪ್ರಕಾರ, ಪಶ್ಚಿಮ ಆಫ್ರಿಕಾದ ಧ್ವಜವನ್ನು ಹೊಂದಿದ್ದ ‘ಎಂವಿ ಗೋಲ್ಡನ್ ಲಿಯೋ’ ಎಂಬ ಸರಕು ಸಾಗಣೆ ಹಡಗು ಉಕ್ರೇನಿಯನ್ ಜೋಳವನ್ನು ಹೊತ್ತು ಒಡೆಸಾ ಬಂದರಿನಿಂದ ಹೊರಟಿತ್ತು. ಈ ವೇಳೆ ರಷ್ಯಾದ ಪಡೆಗಳು ನಡೆಸಿದ ಭಾರಿ ದಾಳಿಗೆ ಹಡಗು ಸಿಲುಕಿ, ಭಾರತದ ನಾಲ್ವರು ಹಾಗೂ ಸಿರಿಯಾದ ಐವರು ನಾವಿಕರು ಸೇರಿದಂತೆ ಒಟ್ಟು 10 ಸಿಬ್ಬಂದಿ ದುರಂತ ಅಂತ್ಯ ಕಂಡಿದ್ದಾರೆ.

ಸದ್ಯ ಅಖಿಲ್ ಅವರ ಭೌತಿಕ ಶರೀರವನ್ನು ಸ್ವದೇಶಕ್ಕೆ ತರಲು ಕೇರಳ ಮುಖ್ಯಮಂತ್ರಿ ಕಚೇರಿ ಹಾಗೂ ನೋರ್ಕಾ ಇಲಾಖೆಯು ರಷ್ಯಾದ ಕಾನ್ಸುಲೇಟ್ ಮತ್ತು ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:36 am, Tue, 21 July 26

Source link

Leave a Reply

Your email address will not be published. Required fields are marked *