ಕೋಲ್ಕತ್ತಾ/ನವದೆಹಲಿ, ಜೂನ್ 14: ಲೋಕಸಭೆ ಚುನಾವಣೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಸ್ಫೋಟಗೊಂಡಿರುವ ಭಿನ್ನಮತವು ತಾರ್ಕಿಕ ಅಂತ್ಯ ಮುಟ್ಟುವ ಸೂಚನೆ ಇದೆ. ತಮ್ಮ ಪಕ್ಷದ ಹೈಕಮಾಂಡ್ ಧೋರಣೆಯಿಂದ ಅಸಮಾಧಾನಗೊಂಡಿರುವ ಟಿಎಂಸಿಯ ಒಂದು ದೊಡ್ಡ ಸಂಸದರ ಗುಂಪು ಬಂಡಾಯವೆದ್ದಿದ್ದು, ‘ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ’ (Nationalist Citizen Party) ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಹೊರಟಿದೆ. ಅಷ್ಟೇ ಅಲ್ಲ, ತಮ್ಮ ಹೊಸ ಪಕ್ಷವನ್ನು ಕೇಂದ್ರದ ಆಡಳಿತಾರೂಢ ಎನ್ಡಿಎ (NDA) ಒಕ್ಕೂಟದೊಂದಿಗೆ ವಿಲೀನಗೊಳಿಸಲು ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ ಎಂದು ನ್ಯೂಸ್18 ವಾಹಿನಿ ವರದಿ ಮಾಡಿದೆ.
ಟಿಎಂಸಿ ಸಂಸದರ ಬಂಡಾಯಕ್ಕೆ ಕಾರಣವೇನು?
ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಟಿಎಂಸಿಯ ದ್ವಿತೀಯ ಹಂತದ ನಾಯಕತ್ವ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಕೆಲವು ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವುದು ಈ ಭಿನ್ನಮತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಅತಿಹೆಚ್ಚು ಪ್ರಾಶಸ್ತ್ಯ ನೀಡುತ್ತಿರವುದು ಹೆಚ್ಚಿನ ಟಿಎಂಸಿ ನಾಯಕರಿಗೆ ಪಥ್ಯವಾಗುತ್ತಿಲ್ಲ. ಅದರಲ್ಲೂ ಸಂಸದರು ಬಹಿರಂಗವಾಗಿ ಬಂಡಾಯ ಎದ್ದಿದ್ದಾರೆ. ಸಂಸತ್ತಿನಲ್ಲಿ ಮತ್ತು ಪಕ್ಷದ ಸಂಘಟನೆಯಲ್ಲಿ ತಮಗೆ ಮುಕ್ತ ಸ್ವಾತಂತ್ರ್ಯ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡಿರುವ ಕನಿಷ್ಠ ಮೂರನೇ ಎರಡರಷ್ಟು (2/3rd) ಸಂಸದರು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದು ಜಾರಿಗೆ ಬಂದರೆ ಪಕ್ಷಾಂತರ ನಿಷೇಧ ಕಾಯ್ದೆಯಿಂದಲೂ ಅವರು ಪಾರಾಗಲಿದ್ದಾರೆ.
ಇದನ್ನೂ ಓದಿ: Bankra Masjid: ಕೋಲ್ಕತ್ತಾ ಏರ್ಪೋರ್ಟ್ ಆವರಣದಿಂದ ಶತಮಾನದ ಹಳೆಯ ಬಾಂಕ್ರಾ ಮಸೀದಿಯ ಸ್ಥಳಾಂತರಕ್ಕೆ ನಿರ್ಧಾರ
‘ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ’ ಉದಯ?
ಬಂಡಾಯ ಸಂಸದರು ಈಗಾಗಲೇ ನವದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ ಎಂಬ ಹೊಸ ಪಕ್ಷದ ನೋಂದಣಿ ಪ್ರಕ್ರಿಯೆಯ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ಹೊಸ ಪಕ್ಷ ಸ್ಥಾಪನೆಯಾದ ತಕ್ಷಣವೇ, ಆ ಗುಂಪು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (NDA) ಅಧಿಕೃತವಾಗಿ ಬೆಂಬಲ ಘೋಷಿಸಲಿದೆ ಅಥವಾ ಅದರೊಂದಿಗೆ ಸಂಪೂರ್ಣವಾಗಿ ವಿಲೀನವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಬಲವಾದ ವದಂತಿಗಳು ಹರಿದಾಡುತ್ತಿವೆ.
ಟಿಎಂಸಿಯ ಕೆಲವು ಪ್ರಮುಖ ಮತ್ತು ಪ್ರಭಾವಿ ಸಂಸದರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ ಹಿರಿಯ ನಾಯಕರೊಂದಿಗೆ ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ
ಟಿಎಂಸಿ ತಂತ್ರ ಮತ್ತು ಪ್ರತಿಕ್ರಿಯೆ
ಈ ಸಂಭಾವ್ಯ ರಾಜಕೀಯ ದಂಗೆಯನ್ನು ತಡೆಯಲು ತೃಣಮೂಲ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಎಚ್ಚೆತ್ತುಕೊಂಡಿದೆ. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರು ಅಸಮಾಧಾನಿತ ಸಂಸದರನ್ನು ಸಂಪರ್ಕಿಸಿ ಮನವೊಲಿಸಲು ಹಿರಿಯ ನಾಯಕರ ತಂಡವೊಂದನ್ನು ನಿಯೋಜಿಸಿದ್ದಾರೆ. ಆದರೆ, ಬಂಡಾಯಗಾರರು ಈಗಾಗಲೇ ಮಮತಾ ಬ್ಯಾನರ್ಜಿ ಅವರ ಕೈಗೆ ಸಿಗದಷ್ಟು ದೂರ ಹೋಗಿದ್ದಾರೆ ಎಂದು ದೆಹಲಿಯ ರಾಜಕೀಯ ಪಡಸಾಲೆಗಳಲ್ಲಿ ಚರ್ಚೆಯಾಗುತ್ತಿದೆ.
ಒಂದು ವೇಳೆ ಈ ವಿಲೀನ ಪ್ರಕ್ರಿಯೆ ಯಶಸ್ವಿಯಾದರೆ, ಅದು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕೋಟೆಗೆ ಬೀಳುವ ದೊಡ್ಡ ಪೆಟ್ಟಾಗಲಿದ್ದು, ಲೋಕಸಭೆಯಲ್ಲಿ ಬಿಜೆಪಿಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ. ಮುಂಬರುವ ದಿನಗಳಲ್ಲಿ ಬಂಗಾಳದ ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
