ಎಂಎಸ್ಪಿ ಅನುದಾನದ ಬಾಕಿ ಮೊತ್ತ ಬಿಡುಗಡೆಗೆ ಕೇಂದ್ರ ಸಚಿವರಿಗೆ ಮನವಿ
ನವದೆಹಲಿ, ಜುಲೈ 08: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಸಚಿವ ಕೆ.ಹೆಚ್. ಮುನಿಯಪ್ಪ ಭೇಟಿಯಾಗಿ ಆಹಾರ ಇಲಾಖೆಗೆ ಸಂಬಂಧಿಸಿ ಮನವಿ ಸಲ್ಲಿಸಿದ್ದಾರೆ. ರಾಜ್ಯಕ್ಕೆ ಬರಬೇಕಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯ(MSP) ಅನುದಾನ ಬಾಕಿ ಮರುಪಾವತಿ ಮೊತ್ತಗಳ ಬಿಡುಗಡೆ ಕುರಿತು ಜೋಶಿ ಜೊತೆ ಅವರು ಚರ್ಚೆ ನಡೆಸಿದ್ದಾರೆ.
1,902.58 ಕೋಟಿ ರೂ. MSP ಬಾಕಿ ಮರುಪಾವತಿ ಮೊತ್ತ ಬಿಡುಗಡೆಗೆ ಮನವಿ
ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ ಆಹಾರ ಸಚಿವರು ಶ್ರೀ ಕೆ.ಹೆಚ್. ಮುನಿಯಪ್ಪ ಅವರು, ಕರ್ನಾಟಕದ ಎಂಎಸ್ಪಿ ಯೋಜನೆಯ ಬಾಕಿ ಮರುಪಾವತಿ ಅನುದಾನಗಳ ಶೀಘ್ರ ಬಿಡುಗಡೆಗೆ ಮನವಿ ಮಾಡಿದರು. pic.twitter.com/M6Lz14TJ3W
— Department of Food & Civil Supplies and Consumer A (@fcscagok) July 8, 2026
ಕೆಎಂಎಸ್ 2025-26ರಲ್ಲಿ ರಾಜ್ಯವು 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 0.0567 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಿದೆ. ಇದರ ಒಟ್ಟು ಮೌಲ್ಯ 4,422.17 ಕೋಟಿ ರೂಪಾಯಿ ಆಗಿದೆ. ಈ ಪೈಕಿ ಕೇಂದ್ರ ಸರ್ಕಾರ ಈವರೆಗೆ 190.10 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ 4,232.07 ಕೋಟಿ ಮರುಪಾವತಿ ಬಿಡುಗಡೆ ಮಾಡುವಂತೆ ಮುನಿಯಪ್ಪ ಮನವಿ ಮಾಡಿದ್ದಾರೆ. ಅಲ್ಲದೆ ಕೆಎಂಎಸ್ 2022-23ಕ್ಕೆ ಸಂಬಂಧಿಸಿದ 375.99 ಕೋಟಿ ರೂ. ತಾತ್ಕಾಲಿಕ ಸಬ್ಸಿಡಿ ಹಕ್ಕುಪತ್ರವು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದ್ದು, ಅದನ್ನೂ ಶೀಘ್ರ ಮಂಜೂರು ಮಾಡುವಂತೆ ಆಗ್ರಹಿಸಿದ್ದಾರೆ. ಕೆಎಂಎಸ್ 2009-10ರಿಂದ 2024-25ರವರೆಗಿನ ಅವಧಿಗೆ ಸಂಬಂಧಿಸಿದ 1,902.58 ಕೋಟಿ ರೂ. MSP ಬಾಕಿ ಮರುಪಾವತಿ ಮೊತ್ತ ಬಿಡುಗಡೆಗೂ ಕೇಂದ್ರ ಸಚಿವರನ್ನ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಕರ್ನಾಟಕದಲ್ಲಿ ಅಕ್ರಮವಾಗಿ ಎಸ್ಐಆರ್; ಪ್ರಲ್ಹಾದ್ ಜೋಶಿ ಆರೋಪ
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ 1902 ಕೋಟಿ ಬಾಕಿ ಹಣ ಕೇಳ್ತಿದ್ದೇವೆ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನಂತರ ನವದೆಹಲಿಯಲ್ಲಿ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಲೆಕ್ಕಪರಿಶೋಧನೆ ವರದಿ ಸಲ್ಲಿಸಿದ್ದೇವೆ. ಆ ಬಾಕಿ ಮೊತ್ತ ಬಿಡುಗಡೆ ಮಾಡಿದರೆ ರೈತರಿಗೆ ನೀಡ್ತೇವೆ. ಶೇ.10ರಷ್ಟು ಬಾಕಿ ಮೊತ್ತ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದು, ಸದ್ಯದಲ್ಲೇ ಕೇಂದ್ರದಿಂದ ರಾಜ್ಯಕ್ಕೆ 375 ಕೋಟಿ ಬಿಡುಗಡೆ ಆಗಲಿದೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 6:45 pm, Wed, 8 July 26
