ವಿಜಯಪುರ, ಮಾ.2: ಉತ್ತರ ಕರ್ನಾಟಕದ ಅತಿ ಹೆಚ್ಚು ನಂಬಿಕಸ್ತ ಕಾಲಜ್ಞಾನ ಕೇಂದ್ರಗಳಲ್ಲೊಂದಾದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಮಠದ ಭವಿಷ್ಯವಾಣಿ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ಮಠದ ಜಾತ್ರೆಯಲ್ಲಿ ನುಡಿಯಲಾಗಿದ್ದ ಅಶುಭ ಮುನ್ಸೂಚನೆಗಳು ಈಗ ಅಕ್ಷರಶಃ ನಿಜವಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. “ಗಡಿಯಲ್ಲಿ ಭೀತಿ ಎದುರಾಗಲಿದೆ, ಯುದ್ಧದ ಕಾರ್ಮೋಡ ಕವಿಯಲಿದೆ” ಎಂದು ಪೀಠಾಧಿಪತಿಗಳು ಸ್ಪಷ್ಟವಾಗಿ ಹೇಳಿದ್ದರು. ಇದು ಪ್ರಸ್ತುತ ಅಮೇರಿಕಾ-ಇರಾನ್-ಇಸ್ರೇಲ್ ನಡುವಿನ ಸಂಘರ್ಷಕ್ಕೆ ನೇರ ಸಾಕ್ಷಿಯಂತಿದೆ. “ಜಾಗತಿಕ ಮಟ್ಟದಲ್ಲಿ ದೊಡ್ಡ ಕೆಡಕಾಗಲಿದೆ, ದೊಡ್ಡ ದುಃಖದ ಸುದ್ದಿಯೊಂದು ಬಂದೀತು” ಎಂದು ನುಡಿಯಲಾಗಿತ್ತು. ಇರಾನ್ನ ಪ್ರಮುಖ ನಾಯಕರ ಹತ್ಯೆ ಮತ್ತು ಮಧ್ಯಪ್ರಾಚ್ಯದಲ್ಲಿ ಸರಣಿ ಬಾಂಬ್ ದಾಳಿಗಳು ಈ ಭವಿಷ್ಯವನ್ನು ಪುಷ್ಟೀಕರಿಸುತ್ತಿವೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮತ್ತು ಪ್ರತಿಯಾಗಿ ದುಬೈ, ಕತಾರ್, ಬಹ್ರೇನ್ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಭವಿಷ್ಯದಲ್ಲಿ ಸುಳಿವು ನೀಡಲಾಗಿತ್ತು. ಯುದ್ಧದ ಜೊತೆಗೆ “ಮಳೆ-ಬೆಳೆ ವ್ಯತ್ಯಯ, ಪ್ರವಾಹ ಮತ್ತು ಗಡಿಯಲ್ಲಿ ಆತಂಕದ ಛಾಯೆ” ಇರಲಿದೆ ಎಂದು ಕಾಲಜ್ಞಾನ ಹೇಳಿತ್ತು. ಬಬಲಾದಿ ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯ ಅಮಾವಾಸ್ಯೆಯ ನಂತರ ನಡೆಯುವ ಜಾತ್ರೆಯಲ್ಲಿ ಓಲೆಗರಿಯ ಕಾಲಜ್ಞಾನವನ್ನು ಓದಲಾಗುತ್ತದೆ. ಈ ವರ್ಷದ ಕಾಲಜ್ಞಾನವು ಶುಭಕ್ಕಿಂತ ಅಶುಭ ಫಲಗಳನ್ನೇ ಹೆಚ್ಚು ಸೂಚಿಸಿತ್ತು. ಗಡಿಯಲ್ಲಿ ಯುದ್ಧದ ಭೀತಿ ಮತ್ತು ದೇಶದ ಆರ್ಥಿಕತೆಗೆ ಪೆಟ್ಟು ಬೀಳುವ ಮುನ್ಸೂಚನೆಗಳನ್ನು ಸಿದ್ರಾಮಪ್ಪ ಹೋಳಿಮಠ ಅವರು ನೀಡಿದ್ದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
