ಬರೋಬ್ಬರಿ 584 ರನ್​ಗಳಿಸಿದ ಜಮ್ಮು-ಕಾಶ್ಮೀರ: ಕರ್ನಾಟಕದ ಗೆಲುವಿಗೆ ಇದೊಂದೇ ದಾರಿ – Kannada News | Jammu and Kashmir Hammered 584 Runs Against Karnataka in The Ranji Final

ಹುಬ್ಬಳ್ಳಿಯ ಕೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್​ಗಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು-ಕಾಶ್ಮೀರ ಪರ ಆರಂಭಿಕನಾಗಿ ಕಣಕ್ಕಿಳಿದ ಯಾವರ್ ಹಸನ್ 88 ರನ್ ಬಾರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭಂ ಪುಂಡಿರ್ 121 ರನ್​ ಗಳಿಸಿದ್ದರು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಪರಸ್ ಡೋಗ್ರಾ 70 ರನ್​ಗಳ ಇನಿಂಗ್ಸ್ ಆಡಿದರು. ಮತ್ತೊಂದೆಡೆ ಅಬ್ದುಲ್ ಸಮದ್ 61 ರನ್​ಗಳ ಕೊಡುಗೆ ನೀಡಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಕನ್ಹಯ್ಯಾ 70 ರನ್ ಬಾರಿಸಿದರೆ, ಸಾಹಿಲ್ ಲೋಟ್ರಾ 78 ರನ್​ಗಳ ಇನಿಂಗ್ಸ್ ಆಡಿದರು.

ಈ ಮೂಲಕ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್​ಗಳಿಸಿ ಆಲೌಟ್ ಆಗಿದೆ. ಕರ್ನಾಟಕ ಪರ ಉತ್ತಮ ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣ 34.1 ಓವರ್​ಗಳಲ್ಲಿ 98 ರನ್​ ನೀಡಿ 5 ವಿಕೆಟ್ ಕಬಳಿಸಿದ್ದಾರೆ.

ಕರ್ನಾಟಕದ ಗೆಲುವಿಗೆ ಇದೊಂದೇ ದಾರಿ:

ಜಮ್ಮು-ಕಾಶ್ಮೀರದ ಇನಿಂಗ್ಸ್ ಮುಕ್ತಾಯದ ಬೆನ್ನಲ್ಲೇ ಕರ್ನಾಟಕ ತಂಡ ಮೊದಲ ಇನಿಂಗ್ಸ್ ಶುರು ಮಾಡಿದ್ದಾರೆ. ಇದೀಗ ಮೂರನೇ ದಿನದಾಟ ನಡೆಯುತ್ತಿರುವುದರಿಂದ ಪ್ರಥಮ ಇನಿಂಗ್ಸ್ ಕರ್ನಾಟಕ ತಂಡಕ್ಕೆ ನಿರ್ಣಾಯಕ. ಏಕೆಂದರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದರೆ ಮಾತ್ರ ಈ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಗೆಲುವು ದಕ್ಕಬಹುದು.

ಅದಕ್ಕೂ ಮುನ್ನ ಕರ್ನಾಟಕ ತಂಡವು ಆಲೌಟ್ ಆದರೆ ಈ ಪಂದ್ಯವನ್ನು ಜಮ್ಮು-ಕಾಶ್ಮೀರ ಡ್ರಾನಲ್ಲಿ ಅಂತ್ಯಗೊಳಿಸಲಿದೆ. ಏಕೆಂದರೆ ರಣಜಿ ಟೂರ್ನಿಯ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯವಾದರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

ಹೀಗಾಗಿ ಕರ್ನಾಟಕ ತಂಡವು ಮೂರನೇ ಮತ್ತು ನಾಲ್ಕನೇ ದಿನದಾಟಗಳಲ್ಲಿ ಬ್ಯಾಟಿಂಗ್ ಕಾಯ್ದುಕೊಳ್ಳುವ ಮೂಲಕ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಲೇಬೇಕು. ಏಕೆಂದರೆ ಮೂರನೇ ದಿನದಾಟದಲ್ಲಿ ಮೊದಲ ಇನಿಂಗ್ಸ್ ಶುರುವಾಗಿರುವ ಕಾರಣ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು.

ಹೀಗಾಗಿ ಕರ್ನಾಟಕ ತಂಡವು ಇನ್ನೆರಡು ದಿನದಾಟಗಳ ಕಾಲ ಬ್ಯಾಟಿಂಗ್ ಮುಂದುವರೆಸುವ ಮೂಲಕ 585 ರನ್​ಗಳಿಸುವುದು ಅನಿವಾರ್ಯ. ಈ ಮೂಲಕ ಪಂದ್ಯವನ್ನು ಡ್ರಾಗೊಳಿಸಿ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಪಟ್ಟಕ್ಕೇರಬಹುದು. ಇಲ್ಲದಿದ್ದರೆ ಜಮ್ಮು-ಕಾಶ್ಮೀರ ತಂಡವು ಶತಾಯಗತಾಯ ಈ ಮ್ಯಾಚ್​ ಅನ್ನು ಡ್ರಾನಲ್ಲಿ ಅಂತ್ಯಗೊಳಿಸಲು ಪ್ರಯತ್ನಿಸಲಿದೆ.

ಜಮ್ಮು ಮತ್ತು ಕಾಶ್ಮೀರ ಪ್ಲೇಯಿಂಗ್ XI: ಕಮ್ರಾನ್ ಇಕ್ಬಾಲ್, ಯಾವರ್ ಹಸನ್, ಶುಭಂ ಪುಂಡೀರ್, ಪರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಆಖಿಬ್ ನಬಿ ದಾರ್, ಯುದ್ವೀರ್ ಸಿಂಗ್ ಚರಕ್, ಸಾಹಿಲ್ ಲೋತ್ರಾ, ಸುನೀಲ್ ಕುಮಾರ್.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಬ್ರಿಯಾನ್ ಬೆನ್ನೆಟ್

ಕರ್ನಾಟಕ ಪ್ಲೇಯಿಂಗ್ XI: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.

Source link

Leave a Reply

Your email address will not be published. Required fields are marked *