ಬಸ್​ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದು ದರ್ಪ: ಬಿಎಂಟಿಸಿ ಕಂಡಕ್ಟರ್ ಸಸ್ಪೆಂಡ್! – Kannada News | Nelamangala: BMTC Conductor Suspended for Kicking Beggar Trying to Board Bus

ಬಸ್​​ ಕಂಡಕ್ಟರ್ ಸಸ್ಪೆಂಡ್Image Credit source: tv9 kannada

ನೆಲಮಂಗಲ, ಆಗಸ್ಟ್​​ 04: ಬಸ್ ಹತ್ತಲು ಬಂದಿದ್ದ ಭಿಕ್ಷುಕ ನನ್ನು ಕಾಲಿನಿಂದ ಒದ್ದು ದರ್ಪ ಮೆರೆದಿದ್ದ ಕಂಡಕ್ಟರ್​​ ಕೃಷ್ಣಮೂರ್ತಿಯನ್ನು ಅಮಾನತು (Suspension) ಮಾಡಿ ಬಿಎಂಟಿಸಿ (BMTC) ಮಂಗಳವಾರ ಆದೇಶ ಹೊರಡಿಸಿದೆ. ಈ ಘಟನೆ ಕುರಿತಾಗಿ ಟಿವಿ9 ವರದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಬಿಎಂಟಿಸಿ ಆಡಳಿತ ಮಂಡಳಿಯು ತಕ್ಷಣವೇ ಈ ಕಠಿಣ ಕ್ರಮಕೈಗೊಂಡಿದೆ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಈ ಕುರಿತಾಗಿ ಬಿಎಂಟಿಸಿ ಸಂಸ್ಥೆಯು ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಶಿವನ್‌ಪುರ ಡಿಪೋಗೆ ಸೇರಿದ ವಾಹನ ಸಂಖ್ಯೆ (KA-57 F-1104) ಬಸ್​ನಲ್ಲಿ ಕೃಷ್ಣಮೂರ್ತಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ವರ್ತನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪ್ರಕರಣದ ಕುರಿತು ತಕ್ಷಣವೇ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಲಾಗಿದ್ದು, ಸತ್ಯಾಂಶವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಲು ಸಂಬಂಧಿತ ನಿರ್ವಾಹಕರನ್ನು ಇಂದಿನಿಂದ ಜಾರಿಗೆ ಬರುವಂತೆ ವಿಚಾರಣಾಪೂರ್ವ ಅಮಾನತ್ತಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: KSRTC, BMTC ಸೇರಿದಂತೆ 4 ನಿಗಮಗಳ ಬಸ್ ಟಿಕೆಟ್ ‌ದರ ಏರಿಕೆ ಫಿಕ್ಸ್: ಎಷ್ಟು, ಯಾವಾಗಿನಿಂದ?

ಘಟನೆಯ ನಿಖರವಾದ ವಾಸ್ತವಾಂಶವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸಂಬಂಧಿತ ನಿರ್ವಾಹಕ, ಪ್ರಯಾಣಿಕ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಬಸ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಸಂಬಂಧಿತ ಸಾಕ್ಷಾಧಾರಗಳನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ನಡೆದಿದ್ದೇನು?

ನೆಲಮಂಗಲ ತಾಲೂಕಿನ ಹರಿಶಿನಕುಂಟೆ ಬಳಿ ಈ ಘಟನೆ ನಡೆದಿದೆ. ವೈರಲ್​ ವಿಡಿಯೋ ಪ್ರಕಾರ, ಬಿಎಂಟಿಸಿ ಕಂಡಕ್ಟರ್ ಬಿಕ್ಷುಕನೋರ್ವನಿಗೆ ಕಾಲಿನಿಂದ ಒದ್ದಿದ್ದಾರೆ. ಮೇಲ್ನೋಟಕ್ಕೆ ಬಿಕ್ಷುಕ ಬಸ್ ಹತ್ತಲು ಮುಂದಾಗಿದ್ದಾನೆ. ಈ ವೇಳೆ ಕಂಡಕ್ಟರ್ ಜೊತೆ ಮಾತಿಗೆ ಮಾತು ಬೆಳೆದಿದ್ದು, ಬಳಿಕ ಕಂಡಕ್ಟರ್ ಕಾಲಿನಿಂದ ಒದ್ದಿದ್ದಾನೆ. ನಂತರ ಆತನನ್ನ ತಳ್ಳಿ ಕೆಳಗೆ ಬೀಳಿಸಿ ದರ್ಪ ಮೆರೆದಿದ್ದಾರೆ.

ಯಾರೇ ಆದರೂ ಕಾಲಿನಿಂದ ಒದೆಯುವುದು ತಪ್ಪು ಎಂದ ಸ್ಥಳಿಯರು

ಇನ್ನು ಈ ಬಗ್ಗೆ ಸ್ಥಳಿಯರಾದ ನಂಜುಂಡಯ್ಯ ಎನ್ನುವವರು ಮಾತನಾಡಿದ್ದು, ‘ಆತ ಕೆಳಗೆ ಬೀಳುವುದನ್ನ ಮಾತ್ರ ನೋಡಿದೆ. ಏಕೆ, ಏನು ಅಂತ ಗೊತ್ತಾಗಲಿಲ್ಲ. ನಮ್ಮ ಬಳಿ ಬಂದು ಏನು ಹೇಲಿಕೊಳ್ಳಲಿಲ್ಲ, ಹೇಳಿದ್ದರೆ ಏನಾದರೂ ಸಹಾಯ ಮಾಡಬಹುದಿತ್ತು. ಮೊದಲು ನಾನು ಹುಡುಗಿ ಅಂದುಕೊಂಡಿದ್ದೆ, ವಿಡಿಯೋ ನೋಡಿದಾಗ ಬಿಕ್ಷುಕನ ರೀತಿ ಇರುವುದು ಗೊತ್ತಾಯಿತು. ಯಾರೇ ಆದರೂ ಕಾಲಿನಿಂದ ಒದೆಯುವುದು ತಪ್ಪು. ತಪ್ಪು ಮಾಡಿದ್ದರೆ ಪೊಲೀಸರು ಇದ್ದರು, ಯಾರಿಗಾದರೂ ಹೇಳಬಹುದಿತ್ತು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:23 pm, Tue, 4 August 26

Source link

Leave a Reply

Your email address will not be published. Required fields are marked *