ಬಾಡಿಗೆ ಹಣವೇ ಗತಿ, ನಟನೆ ಬಿಟ್ಟು ಊರಿಗೆ ಹೋಗುವ ನಿರ್ಧಾರ: ಅವಕಾಶಗಳಿಲ್ಲ ಎಂದ ದಿಗಂತ್ – Kannada News | Diganth Manchale said he is not getting enough movie offers planning to quit acting

ನಟ ದಿಗಂತ್ (Diganth) ಕನ್ನಡ ಚಿತ್ರರಂಗದ ಬಲು ಜನಪ್ರಿಯ ನಟ. ಚಿತ್ರರಂಗಕ್ಕೆ ಕಾಲಿರಿಸಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಟಿ ಸಮಂತಾರ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಕನ್ನಡದಲ್ಲಿಯೂ ದಿಗಂತ್ ಅವರ ಹೊಸ ಸಿನಿಮಾ ‘ರುದ್ರ ಕಾಲ’ ಸೆಟ್ಟೇರಿದೆ. ಸಿನಿಮಾ ಮುಹೂರ್ತದಲ್ಲಿ ಕನ್ನಡ ಚಿತ್ರರಂಗ, ಇಲ್ಲಿನ ನಟರ ಪರಿಸ್ಥಿತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ದಿಗಂತ್, ತಮಗೆ ಸಹ ಅವಕಾಶಗಳ ಕೊರತೆ ಕಾಡುತ್ತಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವಾರು ನಿರ್ಮಾಪಕರು ಸಿನಿಮಾ ಮಾಡಲು ಭಯ ಪಡುತ್ತಿದ್ದಾರೆ. ಸಿನಿಮಾಗಳು ಗೆಲ್ಲದಂತೆ ಆಗಿವೆ. ಒಟಿಟಿಗಳಂತೂ ಕನ್ನಡ ಸಿನಿಮಾಗಳಿಗೆ ಯಾವ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ಸ್ವತಃ ನನಗೆ ಅವಕಾಶಗಳ ಕೊರತೆ ಎದುರಾಗಿದ್ದು, ನಟನೆ ಬಿಟ್ಟು ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳೋಣ ಎನಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ:ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

‘ಆರು ತಿಂಗಳ ಹಿಂದೆ ಎರಡು ನಿರ್ಮಾಪಕರು ಸಿನಿಮಾ ಮಾಡೋಣ ಎಂದು ಬಂದರು. ಆದರೆ ಅದಾದ ಮೇಲೆ ಇಲ್ಲ ಈಗ ಸಮಯ ಸರಿಯಾಗಿಲ್ಲ ಈಗ ಬೇಡ ಎಂದರು. ಯಾವ ಮಟ್ಟಿಗೆ ಪರಿಸ್ಥಿತಿ ಆಗಿದೆಯೆಂದರೆ. ನಂದಿ ಬೆಟ್ಟದ ಸಮೀಪ ಗೇಟೆಡ್ ಕಮ್ಯೂನಿಟಿಯಲ್ಲಿ ನನ್ನ ಒಂದು ಮನೆ ಇತ್ತು. ಅದನ್ನು ಬಾಡಿಗೆ ಕೊಟ್ಟೆ, ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವಂತಾಗಿತ್ತು. ತೀರ್ಥಹಳ್ಳಿಗೆ ವಾಪಸ್ಸಾಗಿ, ಅಲ್ಲಿ ಕೃಷಿ ಮಾಡೋಣ, ನಟನೆ ಸಾಕು ಎಂದು ನಿರ್ಧರಿಸಿದ್ದೆ’ ಎಂದು ದಿಗಂತ್ ಹೇಳಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆದರೆ ಇತ್ತೀಚೆಗೆ ಸಿನಿಮಾ ಮಾಡಲು ಮುಂದೆ ಬರುವವರ ಸಂಖ್ಯೆಯೇ ಕಡಿಮೆ ಆಗಿಬಿಟ್ಟಿದೆ. ಎಲ್ಲರಿಗೂ ಆತಂಕ ಇದೆ. ಚಿತ್ರರಂಗದಲ್ಲಿ ಯಾಕೆ ಯಶಸ್ಸಿನ ಸಂಖ್ಯೆ ಕಡಿಮೆ ಆಯ್ತೋ ತಿಳಿಯುತ್ತಿಲ್ಲ’ ಎಂದಿದ್ದಾರೆ. ದಿಗಂತ್ ಪ್ರಸ್ತುತ ‘ರುದ್ರ ಕಾಲ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನಲ್ಲಿ ಸಮಂತಾ ಋತ್ ಪ್ರಭು ಜೊತೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ತೆಲುಗಿನಲ್ಲಿ ತುಸು ಅವಕಾಶಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ ನಟ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *