ಬಿಡಿಎ ಆಸ್ತಿ ಮೇಲೆ ಬ್ರೋಕರ್ ಕಣ್ಣು: ನೌಕರನೆಂದು ನಂಬಿಸಿ ಸೈಟ್ ಕಬಳಿಸಿದ್ದ ಕಿಂಗ್‌ಪಿನ್ ಬಂಧನ – Kannada News | Fake BDA Employee Arrested in Bengaluru Property Grabbing Case

ಬೆಂಗಳೂರು, ಮೇ 07: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸುತ್ತಿದ್ದ ದೊಡ್ಡ ಜಾಲವೊಂದನ್ನು ಬಿಡಿಎ ಜಾಗೃತ ದಳ ಪತ್ತೆಹಚ್ಚಿದೆ. ಪ್ರಾಧಿಕಾರದ ನೌಕರನೆಂದು ಸುಳ್ಳು ಹೇಳಿ ಸೈಟ್ (Land Scam) ಪಡೆದಿದ್ದ ಬ್ರೋಕರ್ ನಾಗರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರೆ, ನೂರಾರು ಕೋಟಿ ರೂ ಮೌಲ್ಯದ ಜಾಗಕ್ಕೆ ಸ್ಕೆಚ್ ಹಾಕಿದ್ದ ಲಕ್ಷ್ಮೀನಾರಾಯಣ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಮುಖ್ಯಾಂಶಗಳು

  • ಗ್ರೂಪ್-ಡಿ ನೌಕರನ ಸೋಗಿನಲ್ಲಿ ವಂಚನೆ
  • ಅಧಿಕಾರಿಗಳು ಶಾಮೀಲು ಶಂಕೆ
  • 160 ಕೋಟಿ ಮೌಲ್ಯದ ಭೂಮಿಗೆ ಸ್ಕೆಚ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬಡಾವಣೆ ನಿರ್ಮಾಣ ಮಾಡಲಾಗಿತ್ತು. ಬಿಡಿಎನಲ್ಲಿ ಬ್ರೋಕರ್ ಆಗಿದ್ದ ನಾಗರಾಜ್​ ಎಂಬಾತ ತಾನು ಗ್ರೂಪ್ ಡಿ ನೌಕರ ಎಂದು ಹೇಳಿ ಸೈಟ್ ಮೇಲೆ ಕಣ್ಣು ಹಾಕಿದ್ದ. ಸುಳ್ಳು ದಾಖಲೆ ನೀಡಿ ಬಡಾವಣೆಯ ಸೈಟುಗಳನ್ನ ಪಡೆದಿದ್ದ ಆತ ಕೆಲ ಅಧಿಕಾರಿಗಳನ್ನು ಯಾಮಾರಿಸಿದ್ದ.

ಇದನ್ನೂ ಓದಿ: ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆಗೆ ಯತ್ನ: ಬದುಕಿರುವಾಗಲೇ ನಿವೃತ್ತ ಉದ್ಯೋಗಿಯ ಚಟ್ಟ ಕಟ್ಟಿದ ಭೂಗಳ್ಳರು

ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸಿದ ತನಿಖೆಯಲ್ಲಿ ಈತನ ಅಕ್ರಮ ಬಯಲಾಗಿತ್ತು. ನಾಗರಾಜ್  ಪ್ರಾಧಿಕಾರದ ನೌಕರನಲ್ಲ ಎಂಬುವುದು ಸಾಬೀತಾಗಿತ್ತು. ತನಿಖೆಯಲ್ಲಿ ನಾಗರಾಜ್ ಜೊತೆ ಬಿಡಿಎಯ ಕೆಲ ಅಧಿಕಾರಿಗಳು ಶಾಮೀಲಾಗಿರುವುದು ಕೂಡ ಪತ್ತೆಯಾಗಿತ್ತು. ನಾಗರಾಜ್ ಇದೇ ರೀತಿ 10ಕ್ಕೂ ಹೆಚ್ಚು ಕಡೆ ಸೈಟ್ ಗಳನ್ನ ಪಡೆದಿರುವುದು ಕೂಡ ಪತ್ತೆಯಾಗಿದೆ. ಈ ಹಿನ್ನಲೆ ಬಿಡಿಎ ಡಿವೈಎಸ್​ಪಿ ಹನುಮಂತರಾಯ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು. FIR ದಾಖಲಿಸಿಕೊಂಡ ಪೊಲೀಸರು ನಾಗರಾಜ್ ನನ್ನ ಬಂಧಿಸಿ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ‌ ನಡೆಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ 160 ಕೊಟಿ ರೂ ಮೌಲ್ಯದ ಜಾಗ ಮಾರಾಟಕ್ಕೆ ಸ್ಕೆಚ್

ಮತ್ತೊಂದೆಡೆ ಬಿಡಿಎ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಹೊರಟಿದ್ದ ಲಕ್ಷ್ಮೀನಾರಾಯಣ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಕಳೆದ ವಾರ ಶೇಷಾದ್ರಿಪುರಂ ಠಾಣೆಯಲ್ಲಿ ಲಕ್ಷ್ಮೀನಾರಾಯಣ್ ಗ್ಯಾಂಗ್ ಮೇಲೆ FIR ದಾಖಲಾಗಿತ್ತು. ಬೆಂಗಳೂರು ದಕ್ಷಿಣ ಕೊತ್ತನೂರಿನ ಬಿಡಿಎ ಜಾಗಕ್ಕೆ ಲಕ್ಷ್ಮೀನಾರಾಯಣ್ ನಕಲಿ ದಾಖಲೆ ಸೃಷ್ಟಿಸಿದ್ದ. ಸುಮಾರು 160 ಕೊಟಿ ರೂ ಮೌಲ್ಯದ ಜಾಗ ಮಾರಾಟ ಮಾಡಲು ಹೊರಟಿದ್ದ.

ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ

ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬಿಡಿಎ, ತನಿಖೆ ನಡೆಸಿ ಲಕ್ಷ್ಮೀನಾರಾಯಣ್ ಮೇಲೆ ದೂರು ನೀಡಿದ್ದರು. ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಇತ್ತ ಲಕ್ಷ್ಮೀನಾರಾಯಣ್ ಎಸ್ಕೇಪ್ ಆಗಿದ್ದಾನೆ. ಅಲ್ಲದೇ ಪೊಲೀಸ್ ತನಿಖೆ ವೇಳೆ ಈತ ಇದೇ ರೀತಿ ನೂರಾರು ಕೋಟಿ ರೂ ಬಿಡಿಎ ಜಾಗ ಕಬಳಿಸಿರುವುದು ಪತ್ತೆಯಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಲಕ್ಷ್ಮೀನಾರಾಯಣ್​ಗಾಗಿ ಶೇಷಾದ್ರಿಪುರಂ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ವಾಕರ್ಸ್ ಅಸೋಸಿಯೇಷನ್ ವಿರೋಧ: ಏಕೆ?

ಒಟ್ಟಾರೆ ಬಿಡಿಎ ಜಾಗವನ್ನ ಕಂಡಕಂಡವರು ಲೂಟಿಗೆ ಮುಂದಾಗಿದ್ದಾರೆ‌. ಬೆಂಗಳೂರಿನಾದ್ಯಂತ ಹಲವು ಕಡೆ ಇದೇ ರೀತಿಯ ದೂರುಗಳು ದಾಖಲಾಗುತ್ತಿದ್ದು, ಬಿಡಿಎ ತನಿಖೆ ಚುರುಕುಗೊಳಿಸಿದೆ‌.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *