ಬೀಗ ಹಾಕಿದ ಮನೆಯೊಳಗೆ ನಾಲ್ವರು ಮಕ್ಕಳ ಭೀಕರ ಹತ್ಯೆ, ತಾಯಿ ನಾಪತ್ತೆ – Kannada News | Four Children Found Dead Inside Locked Home in Uttar Pradesh, Probe Underway

ಲಕ್ನೋ, ಮೇ 03: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಕ್ರೌರ್ಯದ ಪರಾಕಾಷ್ಠೆ ಮೆರೆದಿರುವ ಹಂತಕರು, ನಾಲ್ವರು ಅಪ್ರಾಪ್ತ ಒಡಹುಟ್ಟಿದವರನ್ನು ಇಟ್ಟಿಗೆಯಿಂದ ಜಜ್ಜಿ,ಚೂಪಾದ ಆಯುಧಗಳಿಂದ ಇರಿದು ಹತ್ಯೆ(Murder) ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಬೀಗ ಹಾಕಿದ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಗಳನ್ನು ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

ಕೊಲೆಯಾದವರು 8,10,12 ಮತ್ತು 14 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು. ಈ ನಾಲ್ವರೂ ಒಡಹುಟ್ಟಿದವರಾಗಿದ್ದು, ಮನೆಯೊಳಗಿನ ರಣರಂಗದಂತಹ ದೃಶ್ಯ ಕಂಡು ತನಿಖಾಧಿಕಾರಿಗಳೇ ದಿಗ್ಭ್ರಮೆಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಟ್ಟಿಗೆಗಳಿಂದ ತಲೆಗೆ ಹೊಡೆದು ಮತ್ತು ಚೂಪಾದ ಆಯುಧಗಳಿಂದ ಇರಿದು ಈ ಕೃತ್ಯ ಎಸಗಲಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ ಮಕ್ಕಳ ತಾಯಿ ಸ್ಥಳದಿಂದ ನಾಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ. ಆ ಮನೆ ಆಕೆಯ ಹೆಸರಿನಲ್ಲೇ ನೋಂದಣಿಯಾಗಿದ್ದು, ಪ್ರಸ್ತುತ ಆಕೆಯೇ ಈ ತನಿಖೆಯ ಕೇಂದ್ರಬಿಂದುವಾಗಿದ್ದಾರೆ. ಪೊಲೀಸರು ಆಕೆಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ

ಪೊಲೀಸ್ ಮೂಲಗಳ ಪ್ರಕಾರ, ಮಕ್ಕಳ ತಂದೆ ಕಳೆದ ಒಂದು ವರ್ಷದಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ತಂದೆಯ ಗೈರುಹಾಜರಿಯಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿದೆ. ಪೊಲೀಸ್ ವರಿಷ್ಠಾಧಿಕಾರಿ ಪ್ರಾಚಿ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ನಾಪತ್ತೆಯಾಗಿರುವ ಮಹಿಳೆಗೆ ಸೇರಿದ್ದರಿಂದ, ಆಸ್ತಿ ಹಂಚಿಕೆಯ ವಿವಾದವೇನಾದರೂ ಇತ್ತೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ. ಅಪರಾಧದ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ (Forensic) ತಂಡವನ್ನು ಬಳಸಿಕೊಳ್ಳಲಾಗುತ್ತಿದೆ. ಹತ್ಯೆಯ ನಿಖರವಾದ ವಿಧಾನ ಮತ್ತು ಸಮಯವನ್ನು ತಿಳಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಆ ಪ್ರದೇಶವನ್ನು ಪೊಲೀಸರು ಸೀಲ್ ಮಾಡಿದ್ದು, ತಲೆಮರೆಸಿಕೊಂಡಿರುವ ತಾಯಿ ಸಿಕ್ಕಿಬಿದ್ದರೆ ಮಾತ್ರ ಈ ನಿಗೂಢ ಹತ್ಯಾಕಾಂಡದ ಹಿಂದಿನ ಅಸಲಿ ರಹಸ್ಯ ಬಯಲಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:06 pm, Sun, 3 May 26

Source link

Leave a Reply

Your email address will not be published. Required fields are marked *