ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡುವಂತಹ ಘಟನೆಯೊಂದು ನಡೆದಿದೆ. ಖ್ಯಾತ ರಿಯಾಲಿಟಿ ಶೋ ‘ಬಿಗ್ ಬಾಸ್’ ಕನ್ನಡ ಸೀಸನ್ 8’ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್ (Divya Suresh) ಅವರಿಗೆ ತಡರಾತ್ರಿ ರಸ್ತೆಯಲ್ಲಿ ಹೋಗುವಾಗ ಅಪರಿಚಿತ ಯುವಕನೊಬ್ಬನಿಂದ ಕಹಿ ಅನುಭವ ಎದುರಾಗಿದೆ. ಈ ಘಟನೆಯ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ವಿವರ ನೀಡಿದ್ದಾರೆ.
ಭಾನುವಾರ ತಡರಾತ್ರಿ ನಗರದ ಕನಕಪುರ ರಸ್ತೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನಟಿ ದಿವ್ಯಾ ಸುರೇಶ್ ಅವರು ತಮ್ಮ ಸಹೋದರಿಯೊಂದಿಗೆ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ಯುವಕನೊಬ್ಬ ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಅಷ್ಟೇ ಅಲ್ಲದೆ, ಅವರಿಬ್ಬರ ಬಳಿ ಅತ್ಯಂತ ಅಸಭ್ಯವಾಗಿ ವರ್ತಿಸಿ ವಿಕೃತ ಚೇಷ್ಟೆ ತೋರಿದ್ದಾನೆ ಎಂದು ಆರೋಪಿಸಲಾಗಿದೆ.
ಯುವಕನ ಈ ವರ್ತನೆಯಿಂದ ತೀವ್ರ ಭಯಗೊಂಡ ನಟಿ ದಿವ್ಯಾ ಮತ್ತು ಅವರ ಸಹೋದರಿ ತಕ್ಷಣವೇ ಓಡಿಹೋಗಿ ತಮ್ಮ ಕಾರಿನೊಳಗೆ ಕುಳಿತುಕೊಂಡಿದ್ದಾರೆ. ಆದರೆ, ವಿಕೃತಿ ಮೆರೆದ ಆ ಯುವಕ ಅಷ್ಟಕ್ಕೇ ಸುಮ್ಮನಾಗದೆ, ಇವರು ಕಾರಿನೊಳಗೆ ಕುಳಿತಿದ್ದರೂ ಹೊರಗಡೆ ನಿಂತು ಸತತವಾಗಿ ದುರ್ವರ್ತನೆ ತೋರಿದ್ದಾನೆ. ಇಬ್ಬರು ಮಹಿಳೆಯರು ಒಂಟಿಯಾಗಿರುವುದನ್ನು ಕಂಡು ಆತ ಈ ರೀತಿ ಸತಾಯಿಸಿದ್ದಾನೆ ಎನ್ನಲಾಗಿದೆ.
ಇದೇ ವೇಳೆ ಇವರ ಕಿರುಚಾಟ ಹಾಗೂ ಯುವಕನ ಚೇಷ್ಟೆಯನ್ನು ಗಮನಿಸಿದ ಸಾರ್ವಜನಿಕರು ಮತ್ತು ಸ್ಥಳೀಯರು ತಕ್ಷಣವೇ ನಟಿಯ ನೆರವಿಗೆ ಧಾವಿಸಿದ್ದಾರೆ. ಸ್ಥಳದಲ್ಲಿದ್ದ ಜನರು ಆ ಅಪರಿಚಿತ ಯುವಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಆತ ತಕ್ಷಣವೇ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ವಿಡಿಯೋವನ್ನು ದಿವ್ಯಾ ಸುರೇಶ್ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅರವಿಂದ್ ಬೋಳಾರ್, ಶ್ರೀಹನ್ ದೀಪಕ್, ದಿವ್ಯಾ ಸುರೇಶ್ ಹೊಸ ಸಿನಿಮಾ ‘ಕೆಂಪು ಹಳದಿ ಹಸಿರು’
ಸದ್ಯ ಈ ಕಹಿ ಘಟನೆಯ ಕುರಿತು ದಿವ್ಯಾ ಸುರೇಶ್ ಅವರು ಪೊಲೀಸರಿಗೆ ಯಾವುದೇ ಅಧಿಕೃತ ದೂರನ್ನು ನೀಡಿಲ್ಲ. ಆದರೆ, ತಮಗೆ ಎದುರಾದ ಈ ಭೀಕರ ಹಾಗೂ ಕಹಿ ಅನುಭವವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಹಾಗೂ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಗರದಲ್ಲಿ ಮಹಿಳೆಯರ ರಕ್ಷಣೆ ಎಲ್ಲಿದೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
