ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆImage Credit source: Tv9 Kannada
ಬೆಂಗಳೂರು, ಜುಲೈ 13: ನಗರದಲ್ಲಿ ಜುಲೈ 1ರಿಂದ ಆರಂಭವಾದ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಆಗಿರೋದು ನಿಜವಾದರೂ, ಜಿಬಿಎ ಕಾರ್ಯಾಚರಣೆಗೆ ಜನ ಬೆಂಬಲವೂ ವ್ಯಕ್ತವಾಗತೊಡಗಿದೆ. ಈ ನಡುವೆ ಜುಲೈ 1ರಿಂದ ಜುಲೈ 10ರವರೆಗೂ ಭರದಿಂದ ಸಾಗಿದ ಕಾರ್ಯಾಚರಣೆಯ ಮಾಹಿತಿಯನ್ನ ಜಿಬಿಎ ಹಂಚಿಕೊಂಡಿದ್ದು, 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 490 ಕಿಲೋ ಮೀಟರ್ ರಸ್ತೆಗಳ ಫುಟ್ ಪಾತ್ ಒತ್ತಿವರಿ ತೆರವು ಪೂರ್ಣಗೊಳಿಸಿರೋದಾಗಿ ತಿಳಿಸಿದೆ.
ಒತ್ತುವರಿ ತೆರವು ಕಾರ್ಯಾಚರಣೆಯ ಮಾಹಿತಿ
| ನಗರ ಪಾಲಿಕೆ | ಒತ್ತುವರಿ ತೆರವು |
| ಬೆಂಗಳೂರು ಕೇಂದ್ರ | 70.15 ಕಿ.ಮೀ. |
| ಬೆಂಗಳೂರು ದಕ್ಷಿಣ | 94.01 ಕಿ.ಮೀ |
| ಬೆಂಗಳೂರು ಪೂರ್ವ | 88.42 ಕಿ.ಮೀ |
| ಬೆಂಗಳೂರು ಪಶ್ಚಿಮ | 122.62 ಕಿ.ಮೀ |
| ಬೆಂಗಳೂರು ಉತ್ತರ | 115.35 ಕಿ.ಮೀ. |
| ಒಟ್ಟು | 490.55 ಕಿ.ಮೀ. |
ಇದನ್ನೂ ಓದಿ: ಫುಟ್ಪಾತ್ ತೆರವು ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ಮುಂದಾದ ಜಿಬಿಎ
1,500 ಕಿಲೋ ಮೀಟರ್ ಗುರಿ
ಇನ್ನು 1,500 ಕಿಲೋ ಮೀಟರ್ ಗುರಿ ಮುಟ್ಟುವ ತನಕ ಕಾರ್ಯಾಚರಣೆ ಮುಂದುವರೆಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿರುವ ಹಿನ್ನೆಲೆ ಶೀಘ್ರವೇ ಕಾರ್ಯಾಚರಣೆ ಚುರುಕು ಪಡೆಯಲಿದೆ ಅಂತಾ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಕಾರ್ಯಾಚರಣೆ ಹಿನ್ನೆಲೆ ಅತಂತ್ರರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮುಖ್ಯ ರಸ್ತೆ ಹೊರತುಪಡಿಸಿ ಪರ್ಯಾಯ ವ್ಯವಸ್ಥೆಯನ್ನ ಶೀಘ್ರದಲ್ಲೇ ಕಲ್ಪಿಸಲಾಗುವುದು ಅಂತಲೂ ಅವರು ಭರವಸೆ ನೀಡಿದ್ದಾರೆ.
ಒಟ್ಟಾರೆ ಫುಟ್ ಪಾತ್ ಆಪರೇಷನ್ ಬೆಂಗಳೂರಿನಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದು, ಪಾದಾಚಾರಿಗಳ ಮೊಗದಲ್ಲಿ ಹರುಷ, ಬೀದಿ ಬದಿ ವ್ಯಾಪಾರಿಗಳಲ್ಲಿ ನಡುಕ ತರಿಸಿದೆ. ಕೊಟ್ಟ ಮಾತಿನಂತೆ ಬೀದಿ ಬದಿ ವ್ಯಾಪಾರಿಗಳಿಗೆ ಪಯರ್ಯಯ ವ್ಯವಸ್ಥೆಯನ್ನು ಜಿಬಿಎ ಕಲ್ಪಿಸಬೇಕು. ಕೋರ್ಟ್ ಆದೇಶ ಪಾಲನೆಯ ಜೊತೆಗೆ ಬಡವರ ಬದುಕಿನ ಬಗ್ಗೆಯೂ ಅಧಿಕಾರಿಗಳು, ಸಚಿವರು ಗಮನಹರಿಸಿಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 4:53 pm, Mon, 13 July 26