ಬೆಂಗಳೂರು, ಜುಲೈ 26: ಬೆಂಗಳೂರು ವಿಭಾಗದ 37 ತಾಲೂಕುಗಳು ತೀವ್ರ ಮಳೆ ಕೊರತೆಯಿಂದ ಗಂಭೀರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಒಟ್ಟು 57 ತಾಲೂಕುಗಳ ಪೈಕಿ 43 ತೀವ್ರ ಮಳೆ ಕೊರತೆ ವಿಭಾಗಕ್ಕೆ ಸೇರಿವೆ. ಅವುಗಳಲ್ಲಿ 37 ತಾಲೂಕುಗಳಲ್ಲಿ ಸತತ ಮೂರು ವಾರಗಳಿಂದ ಅತೀ ಕಡಿಮೆ ಮಳೆ ಅಥವಾ ತೀವ್ರ ಒಣಹವೆಯ ಪರಿಸ್ಥಿತಿ ಮುಂದುವರಿದಿದೆ. ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ಇಂತಹ ತಾಲೂಕುಗಳ ಸಂಖ್ಯೆ 100ಕ್ಕೆ ಏರಬಹುದಾದ ಆತಂಕವೂ ಎದುರಾಗಿದೆ.
57 ತಾಲ್ಲೂಕುಗಳಲ್ಲಿ ಶೇ.75ಕ್ಕಿಂತ ಕಡಿಮೆ ಬಿತ್ತನೆ
ಬೆಂಗಳೂರು ವಿಭಾಗದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ (ರಾಮನಗರ), ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳು ಸೇರಿವೆ. 57 ತಾಲೂಕುಗಳಲ್ಲಿ ಬಿತ್ತನೆ ಪ್ರಮಾಣವು ಶೇ.75ಕ್ಕಿಂತ ಕಡಿಮೆಯಿದೆ. 52 ತಾಲೂಕುಗಳಲ್ಲಿ ಮಣ್ಣಿನ ತೇವಾಂಶ ಗಣನೀಯವಾಗಿ ಕುಸಿದಿದ್ದು, ಅವುಗಳಲ್ಲಿ 28 ತೀವ್ರ ತೇವಾಂಶ ಕೊರತೆಯನ್ನು ಎದುರಿಸುತ್ತಿವೆ.
ಇದನ್ನೂ ಓದಿ: ರಾಜ್ಯಾದ್ಯಂತ ವರುಣನ ಅಬ್ಬರ; ಕರಾವಳಿ, ಮಲೆನಾಡಿಗೆ ಬಿರುಗಾಳಿ ಸಹಿತ ಮಳೆಯ ಅಲರ್ಟ್!
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ ಶೇ.48ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಜಲವಿದ್ಯುತ್ ಉತ್ಪಾದನಾ ಜಲಾಶಯಗಳಲ್ಲಿ ಶೇ.30, ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಶೇ.54 ಹಾಗೂ ಕೃಷ್ಣಾ ಕಣಿವೆಯ ಜಲಾಶಯಗಳಲ್ಲಿ ಶೇ.59 ನೀರಿನ ದಾಸ್ತಾನಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ ಮುಂದಿನ 15 ದಿನಗಳಲ್ಲಿ ಸಾಧಾರಣ ಮಳೆಯಾದರೆ ಪರಿಸ್ಥಿತಿಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಸಾಧ್ಯ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಇಳಿಕೆ ಕಂಡ ಮಳೆ ಪ್ರಮಾಣ
ಕಳೆದ 24 ಗಂಟೆಗಳಲ್ಲಿ ರಾಜ್ಯದ ಕೇವಲ ಶೇ.22ರಷ್ಟು ಪ್ರದೇಶಗಳಲ್ಲಿ ಮಾತ್ರ 2.5 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯ ಮಡಮಕ್ಕಿ ಗ್ರಾಮದಲ್ಲಿ ಅತ್ಯಧಿಕ 99.5 ಮಿ.ಮೀ. ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನೆರಿಯ ಗ್ರಾಮದಲ್ಲಿ 94.5 ಮಿ.ಮೀ. ಮಳೆ ದಾಖಲಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿರುವುದರಿಂದ ರಾಜ್ಯದ ಹಲವು ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣವೂ ಇಳಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮಾಹಿತಿ ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 9:24 am, Sun, 26 July 26
