ಬೆಂಗಳೂರು, ಜುಲೈ 26: ಇತ್ತೀಚೆಗೆ ನಗರದ ಶಾಲಾ ಆವರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಹೃದಯಾಘಾತದಿಂದ (Cardiac Arrest) ಕುಸಿದು ಬಿದ್ದ ಘಟನೆಗಳು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಜಯದೇವ, ನಾರಾಯಣ ಹೆಲ್ತ್ ಹಾಗೂ ಸ್ಪರ್ಶ್ ಆಸ್ಪತ್ರೆಯ ಪ್ರಮುಖ ಹೃದ್ರೋಗ ತಜ್ಞರು, “ಮಕ್ಕಳಲ್ಲಿ ಇಂತಹ ಘಟನೆಗಳು ಸಂಭವಿಸುವುದು ಅತ್ಯಂತ ಅಪರೂಪ ಹಾಗೂ ಲಕ್ಷದಲ್ಲಿ ಒಂದೆರಡು ಪ್ರಕರಣಗಳು. ಹೀಗಾಗಿ ಪೋಷಕರು ಅನಗತ್ಯವಾಗಿ ಭೀತಿಗೆ ಒಳಗಾಗುವ ಅಗತ್ಯವಿಲ್ಲ, ಬದಲಿಗೆ ಜಾಗೃತಿ ಮತ್ತು ತುರ್ತು ಸಿದ್ಧತೆ ಹೆಚ್ಚಿಸಿಕೊಳ್ಳಬೇಕು” ಎಂದು ಸಲಹೆ ನೀಡಿದ್ದಾರೆ.
ಹಿರಿಯರಿಗೂ ಮಕ್ಕಳ ಹೃದಯಾಘಾತಕ್ಕೂ ಏನು ವ್ಯತ್ಯಾಸ?
ವೈದ್ಯರ ಪ್ರಕಾರ, ವಯಸ್ಕರಲ್ಲಿ ರಕ್ತನಾಳಗಳ ತಡೆಯಿಂದ (Blocked Arteries) ಹೃದಯಾಘಾತ ಸಂಭವಿಸಿದರೆ, ಮಕ್ಕಳಲ್ಲಿ ಜನ್ಮಜಾತ ಹೃದಯ ನ್ಯೂನತೆಗಳು (Congenital Heart Defects) ಅಥವಾ ಹೃದಯದ ವಿದ್ಯುತ್ ತರಂಗಗಳಲ್ಲಿ ಉಂಟಾಗುವ ಏರುಪೇರು (Arrhythmias) ಪ್ರಮುಖ ಕಾರಣವಾಗಿರುತ್ತದೆ. ಕ್ರೀಡೆ ಹಾಗೂ ಕಠಿಣ ದೈಹಿಕ ಶ್ರಮದ ಸಂದರ್ಭದಲ್ಲಿ ಇವು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಬಹುದು. ಅನೇಕ ಮಕ್ಕಳಲ್ಲಿ ಇದು ಮುಂಚಿತವಾಗಿ ಯಾವುದೇ ರೋಗಲಕ್ಷಣ ತೋರಿಸದಿರುವುದು ದೊಡ್ಡ ಸವಾಲಾಗಿದೆ.
ಶಾಲೆಗಳು ಮತ್ತು ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು
ಪ್ರತಿ ಶಾಲೆಯಲ್ಲೂ ‘ಕಾರ್ಡಿಯಾಕ್ ಎಮರ್ಜೆನ್ಸಿ ಪ್ಲಾನ್’ ಇರಬೇಕು. ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಿಗೆ ಸಿಪಿಆರ್ (CPR) ಮತ್ತು ಎಇಡಿ (AED – ಡಿಫಿಬ್ರಿಲೇಟರ್) ಸಾಧನ ಬಳಸುವ ತರಬೇತಿ ನೀಡಬೇಕು. ಘಟನೆ ನಡೆದ 3 ನಿಮಿಷದೊಳಗೆ ಸಿಪಿಆರ್ ನೀಡಿದರೆ ಮಗುವಿನ ಪ್ರಾಣ ಉಳಿಯುವ ಸಾಧ್ಯತೆ ಶೇ 70ಕ್ಕಿಂತ ಹೆಚ್ಚಿರುತ್ತದೆ.
ಆಟವಾಡುವಾಗ ಅಥವಾ ವ್ಯಾಯಾಮದ ವೇಳೆ ಎದೆನೋವು, ಅತಿಯಾದ ಆಯಾಸ, ತಲೆಸುತ್ತು ಅಥವಾ ಪ್ರಜ್ಞೆ ತಪ್ಪಿ ಬೀಳುವ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೊಳಪಡಿಸಬೇಕು. ಕುಟುಂಬದಲ್ಲಿ ಚಿಕ್ಕ ವಯಸ್ಸಿನಲ್ಲಿ ಯಾರಾದರೂ ಹೃದಯಾಘಾತಕ್ಕೆ ಒಳಗಾಗಿದ್ದ ಇತಿಹಾಸವಿದ್ದರೆ, ಮಕ್ಕಳಿಗೂ ಇಸಿಜಿ (ECG) ಸೇರಿದಂತೆ ಮೂಲಭೂತ ತಪಾಸಣೆ ಮಾಡಿಸುವುದು ಒಳಿತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
