ಭಾರತದ ‘ಬಂಡವಾಳ ಬಯಲು’ ಮಾಡ್ತೇವೆ: ಶುಕ್ರಿ ಕಾನ್ರಾಡ್ – Kannada News | South Africa coach Shukri Conrad Says We Will ‘Expose’ India In Ahmedabad

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲು 8 ತಂಡಗಳು ಸಜ್ಜಾಗಿವೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಲಿದೆ. ಹಾಗೆಯೇ ನಾಳೆ (ಫೆ.22) ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಮೂಲಕ ಟೀಮ್ ಇಂಡಿಯಾದ ಬಂಡವಾಳವನ್ನು ಬಯಲು ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ ಸೌತ್ ಆಫ್ರಿಕಾ ತಂಡದ ಕೋಚ್ ಶುಕ್ರಿ ಕಾನ್ರಾಡ್.

ಸೌತ್ ಆಫ್ರಿಕಾ ತಂಡದ ಮುಂದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿರುವ ಶುಕ್ರಿ ಕಾನ್ರಾಡ್, ಭಾರತ ತಂಡವು ಮೊದಲ ಸುತ್ತಿನಲ್ಲಿ ಯಾವುದೇ ಬಲಿಷ್ಠ ತಂಡದ ವಿರುದ್ಧ ಕಣಕ್ಕಿಳಿದಿಲ್ಲ. ಇದೀಗ ಅವರು ಸೌತ್ ಆಫ್ರಿಕಾ ತಂಡವನ್ನು ಎದುರಿಸಬೇಕಿದೆ. ಹೀಗಾಗಿ ಅವರು ಹೆಚ್ಚಿನ ಒತ್ತಡಕ್ಕೆ ಒಳಗಾಗಲಿದ್ದಾರೆ ಎಂದಿದ್ದಾರೆ.

ಭಾರತವು ಹಾಲಿ ಚಾಂಪಿಯನ್ ಮತ್ತು ಆತಿಥೇಯ ರಾಷ್ಟ್ರವಾಗಿರುವುದರಿಂದ ಅವರ ಮೇಲೆ ಅಪಾರ ನಿರೀಕ್ಷೆಯಿದೆ. ಈ ಒತ್ತಡವನ್ನು ಬಳಸಿ ಭಾರತವನ್ನು “ಅಸಹಾಯಕ” ಸ್ಥಿತಿಗೆ ತಳ್ಳುವುದಾಗಿ ಕಾನ್ರಾಡ್ ಹೇಳಿದ್ದಾರೆ.

ಭಾರತದ ಕೆಲವು ಆಟಗಾರರ ಫಾರ್ಮ್ ಬಗ್ಗೆ ಕೂಡ ಪರೋಕ್ಷವಾಗಿ ಮಾತನಾಡಿದ ಅವರು, ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಆಟಗಾರರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳ ಕಡೆಯಿಂದಲೂ ಟೀಮ್ ಇಂಡಿಯಾ ಆಟಗಾರರು ಒತ್ತಡ ಎದುರಿಸುತ್ತಿದ್ದಾರೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳ ಎದುರು ಆಡುವುದು ಭಾರತಕ್ಕೆ ಶಕ್ತಿಯೂ ಹೌದು, ದೊಡ್ಡ ಹೊರೆಯೂ ಹೌದು. ಹೀಗಾಗಿ ಈ ಪಂದ್ಯದ ಮೂಲಕ ನಾವು ಭಾರತ ತಂಡದ ಬಂಡವಾಳ “ಬಯಲು” ಮಾಡುತ್ತೇವೆ ಶುಕ್ರಿ ಕಾನ್ರಾಡ್ ಹೇಳಿದ್ದಾರೆ.

ಸೌತ್ ಆಫ್ರಿಕಾ ತಂಡದ ಕೋಚ್​ನ ಈ ಹೇಳಿಕೆಯು ಮೈಂಡ್ ಗೇಮ್​ ಎಂಬುದು ಸ್ಪಷ್ಟ. ಏಕೆಂದರೆ ಈ ಹಿಂದೆ ಕೂಡ ಭಾರತದ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಶುಕ್ರಿ ಕಾನ್ರಾಡ್ ಇದೇ ಮಾದರಿಯ ಹೇಳಿಕೆ ನೀಡಿದ್ದರು.

2025 ರಲ್ಲಿ ನಡೆದ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದ ವೇಳೆ ಮಾತನಾಡಿದ ಶುಕ್ರಿ ಕಾನ್ರಾಡ್, ಟೀಮ್ ಇಂಡಿಯಾ ಆಟಗಾರರನ್ನು ನಾವು ಮಕಾಡೆ ಮಲಗಿಸುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಭಾರತೀಯ ಮಾಜಿ ಕ್ರಿಕೆಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ಕೇವಲ 58 ​ಎಸೆತ… ಆಸ್ಟ್ರೇಲಿಯಾ ತಂಡದ ವಿಶ್ವ ದಾಖಲೆಯ ಚೇಸಿಂಗ್

ಇದೀಗ ಅಹಮದಾಬಾದ್​ನಲ್ಲಿ ಟೀಮ್ ಇಂಡಿಯಾದ ಬಂಡವಾಳ ಬಯಲು ಮಾಡುತ್ತೇವೆ ಎನ್ನುವ ಮೂಲಕ ಶುಕ್ರಿ ಕಾನ್ರಾಡ್ ಮೈಂಡ್ ಗೇಮ್ ಆರಂಭಿಸಿದ್ದಾರೆ. ಈ ಮೂಲಕ ಭಾರತ ತಂಡವನ್ನು ಸೋಲಿಸಲು ತೆರೆಮರೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Published On – 10:57 am, Sat, 21 February 26

Source link

Leave a Reply

Your email address will not be published. Required fields are marked *