ಮಂಡ್ಯ, ಜೂನ್ 30: ಭೂಮಿ ಕಳೆದುಕೊಂಡು 15 ವರ್ಷ ಕಳೆದರೂ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಉಡಾಫೆ ಧೋರಣೆಗೆ ಬೇಸತ್ತ ರೈತರು, ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಬಂದು ಸರ್ಕಾರಿ ಕಚೇರಿಯನ್ನೇ ಜಪ್ತಿ (Attachment of Government Office) ಮಾಡಿರುವ ಅಪರೂಪದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲಾಧಿಕಾರಿ (DC) ಕಚೇರಿ ಆವರಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯನ್ನು ವಕೀಲರ ಸಮ್ಮುಖದಲ್ಲಿ ರೈತರು ಇಂದು ಜಪ್ತಿ ಮಾಡಿದ್ದಾರೆ. ಹೇಮಾವತಿ ನಾಲೆ ನಿರ್ಮಾಣ ಕಾಮಗಾರಿಗಾಗಿ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಗೆ ಒಳಪಡುವ ಮತ್ತಿಕೆರೆ, ಚಿಕ್ಕಾಡಿಗನಹಳ್ಳಿ, ಬೀರಚಳ್ಳಿ ಸೇರಿದಂತೆ ಸುಮಾರು 15 ಹಳ್ಳಿಗಳ ರೈತರ ಜಮೀನನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದರು. ಆದರೆ, ಭೂಮಿ ವಶಪಡಿಸಿಕೊಂಡು 15 ವರ್ಷ ಕಳೆದರೂ ರೈತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಸರಿಯಾದ ಪರಿಹಾರವನ್ನು ನೀಡಿರಲಿಲ್ಲ. ಅಧಿಕಾರಿಗಳ ಈ ವಂಚನೆಯ ವಿರುದ್ಧ ಅನ್ನದಾತರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ರೈತರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದರೆ ಅಧಿಕಾರಿಗಳು ಕೋರ್ಟ್ ಆದೇಶವನ್ನು ಪಾಲಿಸದೆ ಉಡಾಫೆ ಪ್ರದರ್ಶಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರೈತರು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹೇಮಾವತಿ ನೀರಾವರಿ ಕಚೇರಿಯನ್ನು ಜಪ್ತಿ ಮಾಡಿದ್ದರು. ಆದರೂ ಎಚ್ಚೆತ್ತುಕೊಳ್ಳದ ಇಲಾಖೆ ತಮಗೆ ಬರಬೇಕಾದ ಹಣ ಬಿಡುಗಡೆ ಮಾಡದಿದ್ದಾಗ, ರೈತರು ಮತ್ತೊಮ್ಮೆ ತೀವ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ವಕೀಲರೊಂದಿಗೆ ಮಂಡ್ಯ ಡಿಸಿ ಕಚೇರಿ ಆವರಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ನೇರವಾಗಿ ಎಂಟ್ರಿ ಕೊಟ್ಟ ರೈತರು, ನ್ಯಾಯಾಲಯದ ಜಪ್ತಿ ಆದೇಶದ ಪ್ರತಿಯನ್ನು ಅಧಿಕಾರಿಗಳ ಕೈಗಿಟ್ಟಿದ್ದಾರೆ. ಬಳಿಕ ಕಚೇರಿಯಲ್ಲಿದ್ದ ಸರ್ಕಾರಿ ಪೀಠೋಪಕರಣಗಳು, ಕಂಪ್ಯೂಟರ್, ಕುರ್ಚಿ ಹಾಗೂ ಮೇಜುಗಳನ್ನು ತಾವೇ ಖುದ್ದಾಗಿ ಹೊರಗೆ ಹೊತ್ತು ತಂದು ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ಈ ಹೈಡ್ರಾಮಾ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಹಾಗೂ ಸರ್ಕಾರಿ ಅಧಿಕಾರಿಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
