ಮೈಸೂರು, ಜುಲೈ 13: ಮೈಸೂರು ದಸರಾ ಕಂಬಳ ವಿವಾದ ನಡುವೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಂಬಳಕ್ಕಾಗಿ ಗುರುತಿಸಲಾದ ಸಾತಗಳ್ಳಿ ಪ್ರದೇಶದಲ್ಲಿ ಜಾಗ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅನುಮತಿಯಿಲ್ಲದೆ ಮರಗಳನ್ನು ಕಡಿದ ಆರೋಪದ ಮೇಲೆ ಯುವಜನ ಸಬಲೀಕರಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಮೂವರ ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ ದಾಖಲಾಗಿದೆ. 20 ಜಾಲಿಮರಗಳು ಸೇರಿ ಒಟ್ಟು 25 ಮರಗಳನ್ನು ಕಡಿದಿರುವ ಆರೋಪ ಹಿನ್ನೆಲೆ ಅರಣ್ಯ ಕಾಯ್ದೆ 1963ರ ಸೆಕ್ಷನ್ 25, 33/2 ಮತ್ತು 33/3ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ಮರಗಳನ್ನ ಕಡಿದಿರುವುದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಈಗಾಗಲೇ ಇರುವ ಮರಗಿಡಗಳನ್ನು ನಾಶಪಡಿಸಿ ಕಂಬಳ ಆಚರಣೆ ಮಾಡುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದ್ದಾರೆ. ಮರಗಳನ್ನು ಕಡಿಯುವ ಬದಲು ಕಂಬಳವನ್ನು ಬೇರೆಡೆ ಆಯೋಜಿಸಬೇಕು ಅಥವಾ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.